ಬೆಂಗಳೂರು :ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬಿದ್ದ ಮಹಿಳೆ ; ಸಿಎಂ, ಡಿಸಿಎಂ ಆಪ್ತೆಯೆಂದು ಹೇಳಿಕೊಂಡು ಠಾಣೆಗೆ ಬಂದು ದರ್ಪ, ಇನ್ ಸ್ಪೆಕ್ಟರ್ ಎಫ್ಐಆರ್ ಬೆನ್ನಲ್ಲೇ ಜೈಲು ಸೇರಿದ ಮಹಿಳೆ..!

ಬೆಂಗಳೂರು : ಕೆಲವು ಹುಡುಗಿಯರು ಪ್ರೀತಿಸಿ ಕೈಕೊಟ್ಟ ಎಂದು ಯುವಕರ ಮೇಲೆ ದೂರು ಹೇಳಿಕೊಂಡು ಪೊಲೀಸ್ ಠಾಣೆಗೆ ಬರುತ್ತಾರೆ. ಆದರೆ ಇಲ್ಲೊಬ್ಬಳು ಯುವತಿ ತನ್ನನ್ನೇ ಪ್ರೀತಿಸಬೇಕು, ನೀನೇ ನನ್ನ ರಾಜ ಎಂದು ಹೇಳಿಕೊಂಡು ಪೊಲೀಸ್ ಅಧಿಕಾರಿಯ ಹಿಂದೆ ದುಂಬಾಲು ಬಿದ್ದಿದ್ದಳು. ಆದರೆ ಆಕೆಗೂ ತನಗೂ ಸಂಬಂಧವೇ ಇಲ್ಲ, ಯಾರೋ ನನ್ನ ಹಿಂದೆ ಬಿದ್ದು ಕರ್ತವ್ಯಕ್ಕೆ ಅಡ್ಡಿ ಮಾಡುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಯೇ ದೂರು ನೀಡಿದ್ದರಿಂದ ಯುವತಿಯೀಗ ಜೈಲು ಸೇರಿದ್ದಾಳೆ.
ಹೌದು.. ಹುಚ್ಚು ಪ್ರೀತಿಗೆ ಬಿದ್ದ ಯುವತಿ ತನ್ನನ್ನು ಕಾಂಗ್ರೆಸ್ ಕಾರ್ಯಕರ್ತೆ, ಸಿಎಂ - ಡಿಸಿಎಂ ಎಲ್ಲ ನನಗೆ ಆಪ್ತರು ಅಂತ ಹೇಳಿಕೊಂಡು ರಾಮಮೂರ್ತಿ ನಗರ ಠಾಣೆಯ ಇನ್ಸ್ಪೆಕ್ಟರ್ ಜಿ.ಜೆ.ಸತೀಶ್ ಅವರ ಹಿಂದೆ ಬಿದ್ದಿದ್ದಳು. ಅಯ್ಯಪ್ಪ ನಗರದ ನಿವಾಸಿ ಸಂಜನಾ ಅಲಿಯಾಸ್ ವನಜಾ ಎಂಬ ಯುವತಿ ಕಳೆದ ನಾಲ್ಕು ತಿಂಗಳಿಂದ ಕಾಟ ನೀಡುತ್ತಿದ್ದ ಬಗ್ಗೆ ಸತೀಶ್ ಅವರು ಅದೇ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಮಹಿಳೆಯಿಂದಾಗಿ ಮಾನಸಿಕ ತೊಂದರೆಗೀಡಾಗಿದ್ದೇನೆ, ನನ್ನ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸುತ್ತಿದ್ದಾಳೆಂದು ಇನ್ಸ್ಪೆಕ್ಟರ್ ಸತೀಶ್, ಠಾಣೆಗೆ ದೂರು ನೀಡಿದ್ದರು. ದೂರಿನ ಬೆನ್ನಲ್ಲೇ ಮಹಿಳೆ ವಾಸವಿದ್ದ ಸ್ಥಳವನ್ನು ಪೊಲೀಸರು ಪತ್ತೆಹಚ್ಚಿ ಆಕೆಯನ್ನು ಬಂಧಿಸಿದ್ದಾರೆ. ಸದ್ಯ ಆಕೆಗೆ ಕರ್ತವ್ಯಕ್ಕೆ ಅಡ್ಡಿ ಆರೋಪದಲ್ಲಿ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, 'ಪ್ರೀತ್ಸೆ ಪ್ರೀತ್ಸೆ' ಎಂದು ಹಿಂದೆ ಬಿದ್ದಿದ್ದ ಯುವತಿಯೀಗ ಜೈಲು ಸೇರಿದ್ದಾಳೆ.
ಅಕ್ಟೋಬರ್ 30ರಂದು ಠಾಣೆಯಲ್ಲಿದ್ದಾಗ ಯಾರದ್ದೋ ಕರೆ ಬಂದಿತ್ತು. ಏನೋ ದೂರು ಇರಬಹುದೆಂದು ಭಾವಿಸಿ, ಕರೆ ಸ್ವೀಕರಿಸಿದ್ದೆ. ರಾಮಮೂರ್ತಿನಗರ ನಿವಾಸಿ ಸಂಜನಾ ಎಂದು ಪರಿಚಯಿಸಿಕೊಂಡಿದ್ದು ನೇರವಾಗಿ ಅಸಂಬದ್ಧ ಮಾತನಾಡಲು ಆರಂಭಿಸಿದ್ದಳು. ನಾನು ನಿಮ್ಮನ್ನು ಪ್ರೀತಿಸುತ್ತಿದ್ದೇನೆ. ನೀವೂ ಪ್ರೀತಿಸಬೇಕು ಎಂದು ಹೇಳಿದ್ದಳು. ತಮಾಷೆ ಮಾಡಿರಬೇಕು ಎಂದು ಭಾವಿಸಿದ್ದೆ. ಅದಾದ ಮೇಲೆ ಬೇರೆ ಬೇರೆ ನಂಬರ್ಗಳಿಂದ ಕರೆ ಮಾಡಿದ್ದು ಎಲ್ಲ ಸಂಖ್ಯೆಗಳನ್ನೂ ಬ್ಲಾಕ್ ಲಿಸ್ಟ್ಗೆ ಹಾಕಿದ್ದೆ ಎಂದು ಇನ್ ಸ್ಪೆಕ್ಟರ್ ಸತೀಶ್ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಇದಲ್ಲದೆ, ತನ್ನನ್ನು ಕಾಂಗ್ರೆಸ್ ಕಾರ್ಯಕರ್ತೆ ಎಂದು ಯುವತಿ ಹೇಳಿಕೊಂಡಿದ್ದು ಮುಖ್ಯಮಂತ್ರಿ, ಡಿಸಿಎಂ, ಗೃಹ ಸಚಿವರು, ಮೋಟಮ್ಮ ಹಾಗೂ ಲಕ್ಷ್ಮಿ ಹೆಬ್ಬಾಳಕರ ಅವರ ಜತೆಯಲ್ಲಿರುವ ಫೋಟೊಗಳನ್ನು ವಾಟ್ಸಪ್ಗೆ ಕಳುಹಿಸಿ, ನಿಮಗೆ ಬೇಕಾದರೆ ಇವರಿಂದ ಶಿಫಾರಸು ಮಾಡಿಸುತ್ತೇನೆ. ನನ್ನನ್ನು ಪ್ರೀತಿಸಿ ಎಂದು ಪದೇ ಪದೇ ಹೇಳುತ್ತಿದ್ದರು. ಅದಾದ ಮೇಲೆ ಡಿಸಿಎಂ ಹಾಗೂ ಗೃಹ ಸಚಿವರ ಕಚೇರಿಯಿಂದಲೂ ಕರೆ ಬಂದಿತ್ತು. ಮಹಿಳೆ ನೀಡಿದ ದೂರು ಏಕೆ ಸ್ವೀಕರಿಸುತ್ತಿಲ್ಲ ಎಂದು ವಿಚಾರಿಸಿದ್ದರು. ಅವರು ಠಾಣೆಗೆ ಬಂದು ಯಾವುದೇ ದೂರು ನೀಡಿಲ್ಲ. ಕರೆ ಮಾಡಿ ಅಸಂಬದ್ಧ ರೀತಿ ಮಾತನಾಡಿದ್ದು ಠಾಣೆಗೆ ಬಂದು ದೂರು ಕೊಟ್ಟರೆ ಸ್ವೀಕರಿಸುತ್ತೇನೆ ಎಂದು ತಿಳಿಸಿದ್ದೆ ಎಂದು ದೂರಿನಲ್ಲಿ ಹೇಳಿದ್ದಾರೆ.
ಆನಂತರ, ನಾನು ಠಾಣೆಯಲ್ಲಿ ಇಲ್ಲದೇ ಇರುವಾಗ ಮಹಿಳೆ ಠಾಣೆಗೆ ಬಂದು ತಾನು ಇನ್ಸ್ಪೆಕ್ಟರ್ ಸಂಬಂಧಿಕರು ಎಂದು ಹೇಳಿಕೊಂಡಿದ್ದು ಹೂಗುಚ್ಛ ಹಾಗೂ ಕಾಣಿಕೆ ಡಬ್ಬಿಯೊಂದನ್ನು ಇಟ್ಟು ಹೋಗಿದ್ದರು. ಈ ರೀತಿ ಯಾವುದೇ ವಸ್ತುಗಳನ್ನು ನೀಡಬಾರದೆಂದು ಕರೆ ಮಾಡಿ ಅವರಿಗೆ ತಿಳಿಸಿದ್ದೆ.
ಗುತ್ತಿಗೆದಾರನ ಕಟ್ಟಡ ಕಬಳಿಸಲು ಯತ್ನ
ಗುತ್ತಿಗೆದಾರ ಸತೀಶ್ ರೆಡ್ಡಿ ಅವರಿಗೆ ಸೇರಿದ ಮೂರು ಅಂತಸ್ತಿನ ಕಟ್ಟಡವನ್ನು ಕಬಳಿಸಲು ವನಜಾ ಯತ್ನಿಸಿದ್ದರು ಎಂದು ಕೆ.ಆರ್. ಪುರ ಠಾಣೆಯಲ್ಲಿ 2023ರ ಸೆಪ್ಟೆಂಬರ್ 27ರಂದು ಪ್ರಕರಣ ದಾಖಲಾಗಿತ್ತು. ವನಜಾ ಕಟ್ಟಡವನ್ನು ತನ್ನ ವಶಕ್ಕೆ ಪಡೆದುಕೊಳ್ಳುವ ಉದ್ದೇಶದಿಂದ ಸತೀಶ್ ರೆಡ್ಡಿಯೊಂದಿಗೆ ಸಲುಗೆಯಿಂದ ಇದ್ದರು. ನಂತರ ಇಬ್ಬರ ಸ್ನೇಹ ಕಡಿತವಾಗಿತ್ತು. ಆದರೂ ರೌಡಿಗಳಿದ್ದಾರೆಂದು ಮಹಿಳೆ ಬೆದರಿಸುತ್ತಿದ್ದರು. ಇದೇ ರೀತಿ ಪೊಲೀಸ್ ಕಾನ್ಸ್ಟೇಬಲ್, ಹಿರಿಯ ಅಧಿಕಾರಿಗಳನ್ನೂ ಗುರಿಯಾಗಿಸಿ ಬೆದರಿಸುವ ಕೃತ್ಯ ಎಸಗುತ್ತಿದ್ದರು ಎಂಬುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
'ಲವ್ ಯು ಚಿನ್ನಿ' ಎಂದು ಬರೆದು ಚೀಟಿ ನೀಡಿದ್ಲು !
ಕಳೆದ ನ.7ರಂದು ಕಚೇರಿಗೆ ಬಂದಿದ್ದ ವನಜಾ ಲಕೋಟೆಯೊಂದನ್ನು ನೀಡಿದ್ದರು. ಅದರಲ್ಲಿ ಮೂರು ಪತ್ರಗಳಿದ್ದವು. ಅಲ್ಲದೇ 20 ಮಾತ್ರೆಗಳೂ ಇದ್ದವು. ಪತ್ರದಲ್ಲಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಳು. ನಿಮಗೆ ತೊಂದರೆ ನೀಡಲು ಇಷ್ಟವಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದೂ ಬೆದರಿಕೆ ಹಾಕಿದ್ದರು. ತನ್ನ ಸಾವಿಗೆ ನೀವೇ ಕಾರಣ ಎಂದೂ ಬರೆದಿದ್ದರು. ಒಂದು ಹಾಳೆಯಲ್ಲಿ 'ಲವ್ ಯು ಚಿನ್ನಿ...' ಎಂದು ರಕ್ತದಲ್ಲಿ ಬರೆದಿರುತ್ತೇನೆ ಎಂದು ಮಹಿಳೆ ಹೇಳಿದ್ದರು. ಇದರಿಂದ ಠಾಣೆಯಲ್ಲಿ ತನ್ನ ಬಗ್ಗೆ ಅಪನಂಬಿಕೆ ಬರುವಂತಾಗಿದ್ದು ತನಗೂ ಆಕೆಗೂ ಯಾವುದೇ ಸಂಬಂಧ ಇಲ್ಲ. ಆಕೆ ಯಾರೆಂದೇ ಗೊತ್ತಿಲ್ಲ. ಆಕೆಯಿಂದಾಗಿ ತನ್ನ ಕರ್ತವ್ಯಕ್ಕೆ ಅಡ್ಡಿಯಾಗಿದೆ ಎಂದು ಇನ್ಸ್ಪೆಕ್ಟರ್ ಸತೀಶ್ ದೂರು ನೀಡಿದ್ದು ಎಫ್ಐಆರ್ ದಾಖಲಾಗಿದೆ.