
ಧಾರವಾಡ: ಕೃಷಿ ಮೇಳದಲ್ಲಿ ಗಮನ ಸೆಳೆಯುತ್ತಿರುವ ವಿಸ್ಮಯಕಾರಿ ಕೀಟ ಪ್ರಪಂಚ..!!

ಧಾರವಾಡ: ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಕೃಷಿ ಮೇಳ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ. ಇಲ್ಲಿ ಹಲವು ಬಗೆಯ ಮೇಳಗಳು ಗಮನ ಸೆಳೆಯುತ್ತಿವೆ. ಅದರಲ್ಲೂ ವಿಸ್ಮಯಕಾರಿ ಕೀಟ ಪ್ರಪಂಚ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಕೀಟದಲ್ಲಿ ಆಹಾರ, ಆಪರೇಷನ್ ಸಿಂದೂರ ಮಾದರಿ, ಕೀಟಾಭರಣಗಳನ್ನು ಸಹ ತಯಾರಿಸಲಾಗಿದೆ.
ಮಿಡತೆ ಬರ್ಗರ್, ಹುಳು ಪ್ಯೂಪಾ ಸಲಾಡ್, ಸಿಕಾಡ ಡ್ರೈ, ಮಿಶದರ ಕೀಟಗಳ ಡ್ರೈ, ಮಿಡತೆ ಫ್ರೈ, ಸ್ಯಾಂಡ್ವೀಜ್, ಕಪ್ಪು ಸೈನಿಕ್, ಮಿಡತೆ ಮಸಾಲ, ಆಪರೇಷನ್ ಸಿಂದೂರದ ಮಾದರಿ, ಕೀಟಾಭರಣಗಳು ಕೃಷಿ ವಿವಿ ಮೇಳದಲ್ಲಿ ಪ್ರದರ್ಶನಗೊಳ್ಳುತ್ತಿವೆ.
ಬೆಳೆಗಳಿಗೆ ಹಾನಿ ಮಾಡುವ ಕೀಟಗಳಿದ್ದರೂ, ಇನ್ನು ಕೆಲವು ಬೆಳೆಗೆ ಉಪಯುಕ್ತವಾಗುವ ಕೀಟಗಳೂ ಇವೆ. ಇದರ ಬಗ್ಗೆ ಮೇಳಕ್ಕೆ ಬಂದ ರೈತರಿಗೆ ಕೀಟ ವಿಭಾಗದ ವಿಜ್ಞಾನಿಗಳು ಮಾಹಿತಿ ನೀಡಿದರು. ಇದರಲ್ಲಿ ಪ್ರಮುಖವಾಗಿ ಕೀಟಗಳ ಪದಾರ್ಥಗಳು ಎಲ್ಲರ ಗಮನ ಸೆಳೆಯಿತು. ಜೇನು ನೋಣದ ಸಿಹಿ, ರೇಷ್ಮೆ ಹುಳು ಪ್ಯೂಪಾ ಟೆಕ್ಕಾ, ಕೀಟ ಮಿಶ್ರಣ ಪಿಜ್ಜಾ, ಖಡ್ಗ ಮೃಗ, ಜೀರುಂಡೆ ಟಿಕ್ಕಾ, ದುಂಬಿ ಡ್ರೈ, ಕೀಟ ಮಿಶ್ರಣ ಟಿಕ್ಕಾ, ರೇಷ್ಮೆ ಕೋಶ ಕಟ್ಲೆಟ್, ಮಿಡತೆ ಪಿಜ್ಜಾ, ಶಿವನ ಕುದುರೆ 65 ಸೇರಿದಂತೆ ಬಗೆ ಬಗೆಯ ಕೀಟಗಳ ಖಾದ್ಯಗಳು ಎಲ್ಲರನ್ನು ಅಚ್ಚರಿ ಮೂಡಿಸುತ್ತಿವೆ.
ಕೀಟಗಳ ಪ್ರದರ್ಶನದಲ್ಲಿ ನೂರಕ್ಕೂ ಬಗೆಯ ಕೀಟಗಳ ಪರಿಚಯ ಮಾಡಿಕೊಡಲಾಯಿತು. ಆದರೆ ಇದೇ ಕೀಟಗಳಿಂದ ಉಗ್ರರನ್ನು ಪತ್ತೆ ಹಚ್ಚಲು, ಭೂಕಂಪ ಸೇರಿದಂತೆ ಹಲವು ದುರಂತ ನಡೆದ ಸಂದರ್ಭದಲ್ಲಿ ಬದುಕಿರುವ ವ್ಯಕ್ತಿಗಳ ಪತ್ತೆಗೂ ಬಳಕೆ ಮಾಡಿಕೊಳ್ಳಬಹುದು.
ಕೀಟ ರೋಬೋಟ್ನ್ನು ಇಂದು ಹಲವು ವಿಭಾಗದಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ರೈತರು ಸಹ ಕೀಟ ರೋಬೋಟ್ನಿಂದ ಜಮೀನಿಗೆ ಬಾರದೇ ಮನೆಯಲ್ಲಿಯೇ ಕುಳಿತು ಬೆಳೆಯ ಹಾಗೂ ಇತರೆ ಮಾಹಿತಿ ಪಡೆಯ ಬಹುದಾಗಿದೆ. ಇದಕ್ಕೆ ಪ್ರಮುಖವಾಗಿ ನಿಶ್ಯಬ್ದ ಕೀಟಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಕೃಷಿ ಮೇಳದ ಎರಡನೇ ದಿನ ಬೀಜ ಮೇಳವನ್ನು ರಾಜ್ಯಪಾಲರು ಉದ್ಘಾಟನೆ ಮಾಡಿದರು. ಇನ್ನೂ ಎರಡು ದಿನಗಳ ಕಾಲ ಕೃಷಿಮೇಳ ನಡೆಯಲಿದೆ. ಹೀಗಾಗಿ, ರೈತರು ಇಲ್ಲಿಗೆ ಬಂದು ಇದರ ಸದುಪಯೋಗ ಪಡೆದುಕೊಳ್ಳಬಹುದು.
ಈ ಕುರಿತು ಮುಖ್ಯಸ್ಥ ಮಹಾಬಲೇಶ್ವರ ಹೆಗಡೆ ಅವರು ಮಾತನಾಡಿದ್ದು, 'ಈ ವರ್ಷದ ಕೃಷಿ ಮೇಳದಲ್ಲಿ ಕೀಟ ಪ್ರಪಂಚದಲ್ಲಿನ ಹಲವು ವಿಸ್ಮಯಗಳನ್ನು ಒಳಗೊಂಡಿರುತ್ತದೆ. ವಿಶೇಷವಾಗಿ ಆಪರೇಷನ್ ಸಿಂದೂರ್ನಿಂದ ಹಿಡಿದು ಇನ್ಸೆಕ್ಟ್ ರೋಬೋಟ್ವರೆಗೆ ಹಾಗೂ ವಿಶೇಷ ರೀತಿಯ ಕೀಟದ ಆಹಾರ, ಕೀಟದಿಂದ ಮಾಡಿದ ಆಭರಣಗಳನ್ನು ಒಳಗೊಂಡಿದೆ' ಎಂದು ತಿಳಿಸಿದ್ದಾರೆ.ವಿದ್ಯಾರ್ಥಿ ಸೋನುಪ್ರಿಯಾ ಅವರು ಮಾತನಾಡಿ, 'ನಾವು ವಿದ್ಯಾರ್ಥಿಗಳು ಸೇರಿಕೊಂಡು ಕೀಟಗಳನ್ನು ಬಳಸಿಕೊಂಡು ಆಪರೇಷನ್ ಸಿಂದೂರ್ನ ಮಾದರಿ ರಚಿಸಿದ್ದೇವೆ. ಆರ್ಸಿಬಿ ಕಪ್ನ ಮಾದರಿ ಮಾಡಿದ್ದೇವೆ. ಕೀಟಗಳ ಜೂ ಮಾಡಿದ್ದೇವೆ. ಮುಂದಿನ ಜನರೇಷನ್ನವರು ನೋಡಲು ಸಾಧ್ಯವಾಗದಂತಹ ಕೀಟಗಳನ್ನು ಪ್ರದರ್ಶಿಸಿದ್ದೇವೆ. ಎಲ್ಲಾ ರೀತಿಯ ಕೀಟಪ್ರಬೇಧಗಳನ್ನು ತಂದು ಪ್ರದರ್ಶಿಸಿದ್ದೇವೆ' ಎಂದು ಹೇಳಿದ್ದಾರೆ.