
ಬೆಂಗಳೂರು:ಧರ್ಮಸ್ಥಳ ಪ್ರಕರಣ ತನಿಖೆ ನಡೆಸುತ್ತಿದ್ದ ಐಪಿಎಸ್ ಅಧಿಕಾರಿ ಎಂ.ಎನ್ ಅನುಚೇತ್ ದಿಢೀರ್ ಅಮೆರಿಕಕ್ಕೆ ; ಸೆ.3ರ ಬಳಿಕ ಕರ್ತವ್ಯಕ್ಕೆ, ಕಾರಣ ಏನು ?

ಬೆಂಗಳೂರು : ಧರ್ಮಸ್ಥಳದಲ್ಲಿ ನೂರಾರು ಹೆಣಗಳನ್ನು ಹೂತು ಹಾಕಿದ್ದ ಆರೋಪದ ಬಗ್ಗೆ ವಿಶೇಷ ತನಿಖಾ ತಂಡದ ತನಿಖೆ ನಡುವೆಯೇ ಪ್ರಮುಖ ಅಧಿಕಾರಿಯೊಬ್ಬರು ಅಮೆರಿಕ ಪ್ರವಾಸ ತೆರಳಿದ್ದಾರೆ. ಎಸ್ಐಟಿ ಸದಸ್ಯ, ಹಿರಿಯ ಐಪಿಎಸ್ ಅಧಿಕಾರಿ ಎಂ.ಎನ್. ಅನುಚೇತ್ ದಿಢೀರ್ ಅಮೆರಿಕ ಪ್ರವಾಸ ತೆರಳಿದ್ದಾರೆ.
ಅಮೆರಿಕದಲ್ಲಿ ನಡೆಯುತ್ತಿರುವ 'ಇಂಟೆಲಿಜೆಂಟ್ ಟ್ರಾನ್ಸ್ಪೋರ್ಟೇಷನ್ ಸೊಸೈಟಿ ಆಫ್ ಅಮೆರಿಕ ವರ್ಲ್ಡ್ ಕಾಂಗ್ರೆಸ್ - 2025' ಕಾರ್ಯಕ್ರಮದಲ್ಲಿ ಭಾಗವಹಿಸಲು ಅನುಚೇತ್ ತೆರಳಿದ್ದಾರೆ. ಇದಕ್ಕಾಗಿ ರಾಜ್ಯ ಸರ್ಕಾರವು ಅವರಿಗೆ ಆಗಸ್ಟ್ 19 ರಿಂದ 31ರ ವರೆಗೆ ವೇತನ ಸಹಿತ ರಜೆಯನ್ನು ಮಂಜೂರು ಮಾಡಿದೆ.
ಅಮೆರಿಕ ಪ್ರವಾಸಕ್ಕಾಗಿ ಎಂಎನ್ ಅನುಚೇತ್ ಅವರು ಜುಲೈ 16ರಂದು ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದ್ದರು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ನಿರ್ದೇಶನದಂತೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಆಗಸ್ಟ್ 1ರಂದು ಅವರ ಪ್ರವಾಸಕ್ಕೆ ಅನುಮತಿ ನೀಡಿ ಆದೇಶಿಸಿತ್ತು. ಧರ್ಮಸ್ಥಳ ಪ್ರಕರಣದ ತನಿಖೆಗಾಗಿ ಹಿರಿಯ ಐಪಿಎಸ್ ಅಧಿಕಾರಿ ಪ್ರಣವ್ ಮೊಹಂತಿ ನೇತೃತ್ವದಲ್ಲಿ ನಾಲ್ವರು ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಾಜ್ಯ ಸರಕಾರ ಜುಲೈ 19ರಂದು ರಚಿಸಿತ್ತು. ಎಸ್ಐಟಿ ತನಿಖೆ ನಿರ್ಣಾಯಕ ಹಂತದಲ್ಲಿ ಇರುವಾಗಲೇ ಅನುಚೇತ್ ವಿದೇಶ ಪ್ರವಾಸ ಹೊರಟಿದ್ದು ಚರ್ಚೆಗೆ ಕಾರಣವಾಗಿದೆ.
ಮೂಲಗಳ ಪ್ರಕಾರ, ಎಂಎನ್ ಅನುಚೇತ್ ಆ.18ರಂದು ವಿದೇಶಕ್ಕೆ ತೆರಳಿದ್ದು ಸೆಪ್ಟೆಂಬರ್ 3 ಅಥವಾ 4ರಂದು ಭಾರತಕ್ಕೆ ವಾಪಸಾಗುವ ನಿರೀಕ್ಷೆಯಿದೆ. ಸದ್ಯಕ್ಕೆ ಎಡಿಜಿಪಿ ಮೊಹಂತಿ ಸೂಚನೆಯಂತೆ, ಎಸ್ಐಟಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.