
ಬೆಂಗಳೂರು :ಖ್ಯಾತ ಸಾಹಿತಿ, ಕನ್ನಡದ ಕೃತಿಗಳಿಗೆ ದೇಶ- ವಿದೇಶದಲ್ಲಿ ಓದುಗರನ್ನು ಸೃಷ್ಟಿಸಿದ್ದ ಎಸ್.ಎಲ್ ಭೈರಪ್ಪ ಇನ್ನಿಲ್ಲ ! ಕಿತ್ತು ತಿನ್ನುವ ಬಡತನ ಮೆಟ್ಟಿ ಸಾಹಿತ್ಯ ಲೋಕದ ಉತ್ತುಂಗಕ್ಕೇರಿದ್ದ ಮೇಧಾವಿ...!!!

ಬೆಂಗಳೂರು : ಖ್ಯಾತ ಸಾಹಿತಿ, ಪದ್ಮವಿಭೂಷಣ ಎಸ್.ಎಲ್ ಭೈರಪ್ಪ(94) ಇನ್ನಿಲ್ಲ. ತನ್ನ ಬರವಣಿಗೆಯಿಂದಲೇ ದೇಶ- ವಿದೇಶದಲ್ಲಿ ಓದುಗರನ್ನು ಸೃಷ್ಟಿಸಿದ್ದ ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ ಅವರು ಬೆಂಗಳೂರಿನ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಕೆಲ ಕಾಲದ ಅಸೌಖ್ಯದ ಬಳಿಕ ನಿಧನರಾದರು.
ವಯಸ್ಸಿನ ಕಾರಣದಿಂದ ಮರೆವಿನ ಕಾಯಿಲೆ ಎದುರಿಸುತ್ತಿದ್ದ ಭೈರಪ್ಪ ಅವರು ಕಳೆದ ಮೂರು ತಿಂಗಳಿನಿಂದ ಮೈಸೂರು ಬಿಟ್ಟು ಬೆಂಗಳೂರಿನಲ್ಲಿ ನೆಲೆಸಿದ್ದರು. ಇಂಗ್ಲಿಷ್ ಸೇರಿದಂತೆ ಭಾರತದ ವಿವಿಧ ಭಾಷೆಗಳಿಗೆ ಭಾಷಾಂತರಗೊಂಡು ಕನ್ನಡದ ಸಾಹಿತಿಯೊಬ್ಬರು ಕೇವಲ ಬರವಣಿಗೆಯಿಂದಲೇ ಅತಿ ಎತ್ತರಕ್ಕೇರಿದ ವ್ಯಕ್ತಿಯೆಂದರೆ ಎಸ್.ಎಲ್ ಭೈರಪ್ಪ.
ಹಾಸನ ಜಿಲ್ಲೆಯ ಸಂತೇಶಿವರ ಎಂಬಲ್ಲಿ 29-7-1934ರಲ್ಲಿ ಸಾಮಾನ್ಯ ಕುಟುಂಬದಲ್ಲಿ ಜನಿಸಿದ್ದ ಭೈರಪ್ಪ ತನ್ನ ಬರವಣಿಗೆಯ ತಾಕತ್ತಿನಿಂದಲೇ ಉತ್ತುಂಗಕ್ಕೇರಿದವರು. ಕಿತ್ತು ತಿನ್ನುವ ಬಡತನ, ಬೇಜವಾಬ್ದಾರಿ ಹೊಂದಿದ್ದ ತಂದೆ, ಪ್ಲೇಗ್ ಮಾರಿಯಿಂದ ಇಡೀ ಸಮಾಜ ತತ್ತರಗೊಂಡಿದ್ದಾಗಲೇ ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಹಂತ ಹಂತವಾಗಿ ಮೇಲಕ್ಕೇರುತ್ತಾ ಹೋಗಿದ್ದರು. ಇವರಿಗೆ 5ನೇ ವಯಸ್ಸಿದ್ದಾಗಲೇ ತಾಯಿ ಪ್ಲೇಗ್ ನಿಂದಾಗಿ ಸಾವು ಕಂಡಿದ್ದರಿಂದ ಅವರ ಜೀವನ ತುಂಬ ಕಷ್ಟಕ್ಕೆ ದೂಡಲ್ಪಟ್ಟಿತ್ತು.
ತನ್ನ 13ನೇ ವಯಸ್ಸಿನಲ್ಲೇ ಗಾಂಧೀಜಿಯ ಕರೆಗೆ ಓಗೊಟ್ಟು ಸ್ವಾತಂತ್ರ್ಯ ಚಳವಳಿಗೆ ಧುಮುಕಿದ್ದವರು ಭೈರಪ್ಪರು. ಆಬಳಿಕ ಮೈಸೂರಿನಲ್ಲಿ ಪ್ರೌಢ ಶಿಕ್ಷಣ, ಪದವಿ ಪೂರೈಸಿದ ಅವರು ಅಲ್ಲಿಯೇ ಎಂಎ ಪದವಿಯಲ್ಲಿ ಚಿನ್ನದ ಪದಕ ಪಡೆದಿದ್ದರು. ಬರೋಡಾದ ವಿವಿಯಿಂದ ಸತ್ಯ ಮತ್ತು ಸೌಂದರ್ಯ ವಿಷಯದಲ್ಲಿ ಇಂಗ್ಲಿಷ್ ನಲ್ಲಿ ರಚಿಸಿದ ಮಹಾ ಪ್ರಬಂಧಕ್ಕಾಗಿ ಡಾಕ್ಟರೇಟ್ ಪಡೆದಿದ್ದರು.
ಹುಬ್ಬಳ್ಳಿ, ಗುಜರಾತಿನ ಸರದಾರಿ ಪಟೇಲ್ ವಿವಿ, ದೆಹಲಿಯಲ್ಲಿ ಉಪನ್ಯಾಸಕ ವೃತ್ತಿ ಮಾಡಿದ್ದ ಶಾಸ್ತ್ರೀಯ ಶಿಸ್ತಿನ ಓದಿನ ನಡುವೆ ಕಾದಂಬರಿಗಳನ್ನು ಬರೆಯತೊಡಗಿದ್ದರು. ಆಯಾ ಕಾಲದಲ್ಲಿ ಅವರು ತಮ್ಮದೇ ನೇರ ನೋಟದಲ್ಲಿ ಬರೆದ ಕಾದಂಬರಿಗಳೆಲ್ಲ ತೀವ್ರ ಚರ್ಚೆಗೂ ಒಳಗಾಗಿದೆ. ನಾಲ್ಕು ದಶಕಗಳಲ್ಲಿ ಅವರು 21 ಕಾದಂಬರಿಗಳನ್ನು ಬರೆದಿದ್ದು ಹಲವಾರು ಭಾಷೆಗಳಿಗೆ ಅನುವಾದಗೊಂಡು ಕನ್ನಡದ ಬರಹಕ್ಕೆ ದೇಶಾದ್ಯಂತ ಓದುಗರನ್ನು ಸೃಷ್ಟಿಸಿದ್ದಾರೆ. ಗೃಹ ಭಂಗ, ವಂಶ ವೃಕ್ಷ, ನೆಲೆ, ಸಾಕ್ಷಿ, ನಾಯಿ ನೆರಳು, ತಬ್ಬಲಿಯು ನೀನಾದೆ ಮಗನೇ, ದಾಟು, ಧರ್ಮಶ್ರೀ, ಪರ್ವ, ಭಿತ್ತಿ ಮುಂತಾದವು ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ ಜನಪ್ರಿಯವಾಗಿವೆ.