
ಕುಂದಾಪುರ :ಚಿಲ್ಲರೆ ಕೇಳಿದ ಮೆಡಿಕಲ್ ಸಿಬಂದಿ ಯುವತಿಗೆ ಹಲ್ಲೆಗೈದ ಮಹಿಳೆ ; ವಿಡಿಯೋ ವೈರಲ್ ಬೆನ್ನಲ್ಲೇ ಆರೋಪಿತ ಮಹಿಳೆ ಬಂಧನ..!!

ಕುಂದಾಪುರ, ಜೂನ್ 10 : ಚಿಲ್ಲರೆ ವಿಚಾರಕ್ಕೆ ಮೆಡಿಕಲ್ ಶಾಪ್ ಸಿಬ್ಬಂದಿ ಯುವತಿಗೆ ಮಹಿಳೆಯೊಬ್ಬರು ಹಲ್ಲೆ ನಡೆಸಿದ ಘಟನೆಯ ಸಿಸಿಟಿವಿ ವಿಡಿಯೋ ವೈರಲ್ ಆಗಿದ್ದು ಪ್ರಕರಣ ಸಂಬಂಧಿಸಿ ಪೊಲೀಸರು ಆರೋಪಿತ ಮಹಿಳೆಯನ್ನು ಬಂಧಿಸಿದ್ದಾರೆ.
ಗುಲ್ವಾಡಿ ಗ್ರಾಮದ ಮಾವಿನಕಟ್ಟೆಯ ಮೆಡಿಕಲ್ ಶಾಪ್ ಸಿಬ್ಬಂದಿ ಲಕ್ಷ್ಮೀ ಎಂಬ ಯುವತಿಗೆ ಯಾಸ್ಮಿನ್ ಎಂಬ ಮಹಿಳೆ ಚಿಲ್ಲರೆ ವಿಚಾರಕ್ಕೆ ಹಲ್ಲೆ ನಡೆಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಹಲ್ಲೆ ನಡೆಸಿದ ಯಾಸ್ಮಿನ್ ಎಂಬ ಮಹಿಳೆಯನ್ನು ಅರೆಸ್ಟ್ ಮಾಡಲಾಗಿದೆ.
ಮಾವಿನಕಟ್ಟೆಯ ಮೆಡಿಕಲ್ಗೆ ಬಂದಿದ್ದ ಯಾಸ್ಮಿನ್, ಔಷಧ ಖರೀದಿಸಿ 500 ರೂ. ಕೊಟ್ಟಿದ್ದಳು. ಇದಕ್ಕೆ ಚಿಲ್ಲರೆ ಇಲ್ಲ, ಚಿಲ್ಲರೆ ಕೊಡಿ ಎಂದ ಯುವತಿ ಕೇಳಿದ್ದಾಳೆ. ಆದರೆ ಯಾಸ್ಮಿನ್ ಈ ವಿಚಾರದಲ್ಲಿ ಮಾತಿಗೆ ಮಾತು ಬೆಳೆಸಿ ಯುವತಿ ಮೇಲೆ ಹಲ್ಲೆ ನಡೆಸಿ, ಅವಾಚ್ಯವಾಗಿ ಜಾತಿ ನಿಂದನೆ ನಡೆಸಿದ್ದಾಳೆ ಎಂದು ದೂರಲಾಗಿದೆ. ಹಲ್ಲೆಗೀಡಾದ ಲಕ್ಷ್ಮೀ ಕುಂದಾಪುರದ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನೆ ಸಂಬಂಧಿಸಿ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಅ.ಕೃ 34/2025,ಕಲಂ 352,115(2) BNS, 3(1)(r), 3(2)(va) SC/ST Act ರಂತೆ ಪ್ರಕರಣ ದಾಖಲಾಗಿದೆ. ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಎಸ್ಪಿ ಹರಿರಾಮ್ ಶಂಕರ್, ಸಂತ್ರಸ್ತ ಮಹಿಳೆಯನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದ್ದಾರೆ.