
ಬೆಂಗಳೂರು: ಕಾಮತೃಷೆ ತೀರಿಸಿದ ಗೃಹಿಣಿಯನ್ನೇ 17 ಬಾರಿ ತಿವಿದು ಕೊಂದ ಸಾಫ್ಟ್ ವೇರ್ ಟೆಕ್ಕಿ ; ಮದುವೆಯಾಗಿ ಮಕ್ಕಳಿದ್ದರೂ ಇನ್ನೊಬ್ಬನ ತೆಕ್ಕೆಗೆ ಬಿದ್ದಾಕೆಗೆ ಶಾಸ್ತಿ ಮಾಡಿದ ದುರುಳ..!!

ಬೆಂಗಳೂರು: ಮದುವೆಯಾಗಿ ಎರಡು ಮಕ್ಕಳಿದ್ದರೂ, ಯುವಕನ ಸ್ನೇಹ, ಅಕ್ರಮ ಸಂಬಂಧ ಗೃಹಿಣಿಯೊಬ್ಬಳ ಬಾಳನ್ನೇ ಹೊಸಕಿ ಹಾಕಿದೆ. ಸಾಫ್ಟ್ ವೇರ್ ಟೆಕ್ಕಿಯೊಬ್ಬ 37 ವರ್ಷದ ಗೃಹಿಣಿಯನ್ನು ಪ್ರೇಮಿಸಿ ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದಲ್ಲದೆ, ಇನ್ನು ತನಗೆ ಸಿಗಲ್ಲ ಎಂದರಿಯುತ್ತಲೇ ಆಕೆಯನ್ನು ಚೂರಿಯಿಂದ 17 ಬಾರಿ ತಿವಿದು ಕೊಂದು ಹಾಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು ನಗರದ ಸುಬ್ರಹ್ಮಣ್ಯಪುರ ಬಳಿಯ ಪೂರ್ಣಪ್ರಜ್ಞ ಲೇಔಟ್ ನಲ್ಲಿ ಘಟನೆ ನಡೆದಿದ್ದು, ಆರೋಪಿ ಯಶಸ್ (25) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕೆಂಗೇರಿ ಬಳಿಯ ಹೆಮ್ಮೆಗೆಪುರದ ನಿವಾಸಿ ಹರಿಣಿ(37) ಕೊಲೆಯಾದ ಗೃಹಿಣಿ. ಮೈಸೂರು ಮೂಲದವರಾದ ಹರಿಣಿ ಪತಿ ದಾಸೇಗೌಡ ಮತ್ತು 10 ಮತ್ತು 12 ವರ್ಷದ ಇಬ್ಬರು ಮಕ್ಕಳೊಂದಿಗೆ ವಾಸವಿದ್ದರು. ಇದರ ನಡುವೆ, ಯುವಕನ ಪರಿಚಯ ಪ್ರೇಮಕ್ಕೆ ತಿರುಗಿ ಅವಸಾನಕ್ಕೆ ದಾರಿಯಾಗಿದೆ.
ಮೂರು ವರ್ಷಗಳ ಹಿಂದೆ ಮಲ್ಲತ್ತಹಳ್ಳಿಯಲ್ಲಿ ಜಾತ್ರೆಗೆ ತೆರಳಿದ್ದಾಗ ಯಶಸ್ ಪರಿಚಯವಾಗಿತ್ತು. ಆನಂತರ ಫೋನ್ ನಂಬರ್ ವಿನಿಮಯ ಮಾಡಿಕೊಂಡು ಪರಸ್ಪರ ಚಾಟಿಂಗ್ ಮಾಡತೊಡಗಿದ್ದರು. ಇದೇ ಮುಂದೆ ಸ್ನೇಹ, ಪ್ರೀತಿ, ಕಾಮಕ್ಕೆ ತಿರುಗಿತ್ತು. ನಿತ್ಯವೂ ಕರೆ ಮಾಡಿ ಮಾತನಾಡುತ್ತಿದ್ದುದರಿಂದ ಈ ವಿಷಯ ಗಂಡನಿಗೂ ಗೊತ್ತಾಗಿ ಕಿರಿಕ್ ಆಗಿತ್ತು. ಬಳಿಕ ಮನೆಯವರು, ಸಂಬಂಧಿಕರು ಹರಿಣಿಗೆ ಬುದ್ಧಿ ಹೇಳಿದ್ದರು. ಗಂಡ ದಾಸೇಗೌಡ ಈಕೆಯ ಮೊಬೈಲನ್ನು ಕಿತ್ತುಕೊಂಡು ಮನೆಯಲ್ಲೇ ಬಿದ್ದಿರುವಂತೆ ಹೇಳಿದ್ದರು. ಈ ವಿಚಾರ ಅರಿತ ಯಶಸ್, ಹರಿಣಿಯ ಮನೆಯ ಬಳಿಗೂ ಬಂದು ಹುಡುಕಾಟ ನಡೆಸಿದ್ದ. ಇದೇ ವೇಳೆ ಮುಂದೆಂದೂ ನಾನು ಈ ರೀತಿ ಮಾಡಲ್ಲ ಎಂದು ಹೇಳಿ ಹರಿಣಿ ತನ್ನ ಮೊಬೈಲನ್ನು ಹಿಂದಕ್ಕೆ ಪಡೆದಿದ್ದಳು. ಆನಂತರ, ಎರಡು ತಿಂಗಳ ಹಿಂದೆ ಪತಿಗೆ ತಿಳಿಯದಂತೆ ಹರಿಣಿ, ಯಶಸ್ ನನ್ನು ಭೇಟಿಯಾಗಿ ಬಂದಿದ್ದಳು. ಮತ್ತೆ ಚಾಟಿಂಗ್, ಡೇಟಿಂಗ್ ಕೂಡ ಆರಂಭವಾಗಿತ್ತು.
ಕುಟುಂಬದಲ್ಲಿ ಸಮಸ್ಯೆಯಾಗಿದ್ದ ಕಾರಣ ಹರಿಣಿ, ಆತನಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದರು. ಇದರಿಂದ ವಿಚಲಿತನಾಗಿದ್ದ ಯಶಸ್, ಹರಿಣಿ ಇನ್ನೆಂದೂ ಸಂಪರ್ಕಕ್ಕೆ ಸಿಗುವುದಿಲ್ಲ ಎಂದು ಭಾವಿಸಿ ಆಕೆಯನ್ನು ಮುಗಿಸಿಯೇ ಬಿಡಬೇಕೆಂದು ಸಂಚು ರೂಪಿಸಿದ್ದ. ಕೊಲೆಗೆ ಚಾಕು ಖರೀದಿಸಿ ಮೊದಲೇ ಹೊಟೇಲ್ ರೂಮ್ ಬುಕ್ ಮಾಡಿ, ಇನ್ನೆಂದೂ ನಾನು ಕರೆಯುವುದಿಲ್ಲ, ಕೊನೆಯ ಬಾರಿಗೆ ಒಂದು ಸಲ ಬಂದು ಹೋಗು.. ನಾವು ಕುಳಿತು ಮಾತನಾಡೋಣ ಎಂದು ರಮಿಸುವ ಪ್ರಯತ್ನ ಮಾಡಿದ್ದ. ಇದರಂತೆ, ಜೂನ್ 6ರಂದು ಮಾತನಾಡುವ ನೆಪದಲ್ಲಿ ಹರಿಣಿ ಹೊಟೇಲಿಗೆ ಬಂದಿದ್ದು, ಅಲ್ಲಿ ಆರೋಪಿ ಯಶಸ್ ಹಿಂದಿನ ರೀತಿಯಲ್ಲೇ ದೈಹಿಕ ಸಂಪರ್ಕ ಮಾಡಿ ಕಾಮತೃಷೆಯನ್ನು ತೀರಿಸಿಕೊಂಡಿದ್ದ.
ಇನ್ನೆಂದೂ ನನಗೆ ಸಿಗೋದಿಲ್ಲ ಅಲ್ವಾ ಎಂಬ ಸಿಟ್ಟಿನಿಂದ ತನ್ನ ಕೆಲಸ ಮುಗಿಯುತ್ತಲೇ ಚೂರಿಯಿಂದ ಸಿಕ್ಕ ಸಿಕ್ಕ ಕಡೆಗೆಲ್ಲಾ ಚೂರಿಯಿಂದ ಇರಿದಿದ್ದಾನೆ. ಎದೆ, ಮುಖ, ಮರ್ಮಾಂಗ ಹೀಗೆ ದೇಹದ ವಿವಿಧ ಭಾಗಗಳಿಗೆ 17 ಬಾರಿ ಇರಿದು ಸಾಯಿಸಿದ್ದಾನೆ. ಆನಂತರ, ಕೆಂಗೇರಿಯ ತನ್ನ ಮನೆಗೆ ಹೋಗಿ ಸ್ವಲ್ಪ ಹೊತ್ತು ಇದ್ದು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಅಲ್ಲದೆ, ಕೈ ಕೊಯ್ದುಕೊಂಡು ಮನೆಯಲ್ಲಿ ಆತ್ಮಹತ್ಯೆಗೂ ಯತ್ನಿಸಿದ್ದಾನೆ. ಪೊಲೀಸರು ಬಂದು ಆರೋಪಿಯನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿದ್ದು, ಚೇತರಿಸಿಕೊಂಡಿದ್ದಾನೆ. ಮದುವೆಯಾಗಿ ಮಕ್ಕಳಿದ್ದರೂ ಯುವಕನ ತೀಟೆ ತೀರಿಸಿಕೊಳ್ಳಲು ಹೋಗಿ ಗೃಹಿಣಿ ಹೆಣವಾಗಿದ್ದಾಳೆ.