ಚಾಮರಾಜನಗರ :ಲಂಡನ್ಲ್ಲಿ ಓದಿದ ಮಗಳ ಮದುವೆಯನ್ನು ಹೊಲದಲ್ಲಿ ಕುಬೇರನೊಂದಿಗೆ ಮಾಡಿಸಿದ ರೈತ; ಕೃಷಿ ಪಾಠ, ಸಿರಿಧಾನ್ಯಗಳ ಬೊಂಬಾಟ್ ಊಟ..!!
ಚಾಮರಾಜನಗರ: ಮದುವೆ ಅಂದರೆ ಸಾಕು ನಗರ ಮತ್ತು ಪಟ್ಟಣ ಪ್ರದೇಶಗಳ ಛತ್ರ, ಭವನಗಳಿಗೆ ಎಡತಾಕುವ ಈ ಕಾಲದಲ್ಲಿ ತಮ್ಮ ತೋಟದಲ್ಲೇ ಮಗಳ ಮದುವೆ ಮಾಡಿ, ತಾವು ಬೆಳೆದ ಹೂಗಳು, ತೆಂಗು, ಹಲಸಿನ ಚಪ್ಪರ ಹಾಕಿ ಪ್ರಕೃತಿಯ ಮಡಿಲಲ್ಲಿ ರೈತ ಧಾರೆ ಎರೆದುಕೊಟ್ಟಿದ್ದಾರೆ.
ಜಿಲ್ಲೆಯ ಹನೂರು ತಾಲೂಕಿನ ಚಿಂಚಳ್ಳಿ ಗ್ರಾಮದ ಪ್ರಗತಿಪರ ರೈತ ದಯಾನಂದ್ ಅವರು ಲಂಡನ್ನಲ್ಲಿ ಕಾನೂನು ಪದವಿ ಪಡೆದ ತಮ್ಮ ಪುತ್ರಿ ರಶ್ಮಿ ಅವರನ್ನು ಬೆಂಗಳೂರಿನ ವೀಣಾ ಮತ್ತು ಕಿಶೋರ್ ದಂಪತಿಯ ಪುತ್ರ, ಖಾಸಗಿ ಕಂಪನಿ ಉದ್ಯೋಗಿ ಕುಬೇರ್ ಅವರ ಜೊತೆ ತೋಟದಲ್ಲಿ ಮದುವೆ ಮಾಡಿಕೊಟ್ಟಿದ್ದು, ಪ್ರಕೃತಿ ಮಡಿಲಲ್ಲಿ ನವ ಜೀವನದ ಉಲ್ಲಾಸ ತರಿಸಿದ್ದಾರೆ.
ಮದುವೆಗೆ ಬಂದವರಿಗೂ ಕೃಷಿ ಅರಿವು ಮೂಡಿಸುವ ಯತ್ನ: ಈ ಹಿಂದೆ ಮದುವೆಗಳು ನೆಂಟರಿಷ್ಟರ ಸಮ್ಮುಖದಲ್ಲಿ ಮನೆಯಲ್ಲಿಯೇ ನಡೆಯುದ್ದವು. ಈಗಲೂ ಅಲ್ಲಲ್ಲಿ ನಡೆಯುತ್ತವೆ. ಆದರೆ, ಇತ್ತೀಚೆಗೆ ಸಣ್ಣ ಕಟ್ಟಡದ ಒಳಗೆ ಬೆಳಗ್ಗೆ ಹೋಗಿ ಸಂಜೆ ಬರುವ ಛತ್ರದಲ್ಲಾಗುತ್ತಿರುವುದೇ ಹೆಚ್ಚು. ಕಳೆದ 4 ತಿಂಗಳಿನಿಂದ ಮದುವೆ ಬಗ್ಗೆ ಯೋಚಿಸಿ ಅರ್ಗಾನಿಕ್ ಆಹಾರದ ಜೊತೆಗೆ ಬಂದವರಿಗೆ ಕೃಷಿ ಜ್ಞಾನ ಹೇಳಿಕೊಡಬೇಕೆಂದು ತೋಟದಲ್ಲೇ ಮಗಳ ಮದುವೆ ಮಾಡಿದ್ದಾಗಿ ರಶ್ಮಿ ತಂದೆ, ರೈತ ದಯಾನಂದ್ ಹೇಳಿದ್ದಾರೆ.
ಹಳ್ಳಿಗಾಡಿನವರೇ ಸಾಲ ಸೋಲವಾದರೂ ಸರಿ ಅಂತ ದೊಡ್ಡ ದೊಡ್ಡ ನಗರಿ, ವಿದೇಶದಲ್ಲಿ ಮದುವೆ ಮಾಡಿಸುವ ಕಾಲವಿದು. ಈ ಕಾಲದಲ್ಲಿ ಲಂಡನ್ನಲ್ಲಿ ವ್ಯಾಸಂಗ ಮುಗಿಸಿರುವ ಪುತ್ರಿಯ ವಿವಾಹವನ್ನು ರೈತ ದಯಾನಂದ್ ತಮ್ಮ ಚಿಂಚಹಳ್ಳಿ ಗ್ರಾಮದ ತೋಟದಲ್ಲೇ ಮಾಡುವ ಮೂಲಕ ಕೃಷಿ ಚಟುವಟಿಕೆಯನ್ನು ಪ್ರತಿಯೊಬ್ಬರಿಗೂ ಪರಿಚಯಿಸಿದ್ದಾರೆ. ರೈತನ ಕೃಷಿ ಭೂಮಿ ಕೃಷಿ ಪ್ರವಾಸೋದ್ಯಮ ತಾಣವಾಗಬೇಕು ಎಂಬ ಪರಿಕಲ್ಪನೆ ಜೊತೆಗೆ ತಮ್ಮ ಪುತ್ರಿಯ ವಿವಾಹವನ್ನು ತಮ್ಮ ಜಮೀನಿನಲ್ಲೇ ನೆರವೇರಿಸಿದ್ದರಿಂದ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ರೈತ ಪುತ್ರಿಯ ರಾಯಲ್ ಮದುವೆಯಲ್ಲಿ ಏನುಂಟು-ಏನಿಲ್ಲ? ತಮ್ಮ ಹೊಲವನ್ನು ನಿಸರ್ಗದ ಮಡಿಲಿನಂತೆಯೇ ಸೃಷ್ಟಿಸಿರುವ ರೈತ ದಯಾನಂದ್, ಅಳಿವಿನಂಚಿನಲ್ಲಿರುವ ಸಸ್ಯಗಳನ್ನು ಎಲ್ಲೆಡೆಯಿಂದ ಸಂಗ್ರಹಿಸಿ ತಂದು, ಸಂರಕ್ಷಣೆ ಮಾಡುವ ಮೂಲಕ ಹೊಲದಲ್ಲೇ ಕಾಡು ರೀತಿ ಬೆಳೆಸಿದ್ದಾರೆ. ಅಲ್ಲಿ ದುಂಬಿಗಳ ಝೇಂಕಾರ, ಚಿಟ್ಟೆ ಪಕ್ಷಿಗಳ ಕಲರವ ಕೇಳುವಂತಹ ವಾತಾವರಣ ನಿರ್ಮಾಣ ಮಾಡಿದ್ದಾರೆ.

ಹತ್ತಾರು ವರ್ಷಗಳಿಂದ ಶ್ರಮಪಟ್ಟು ನೆಟ್ಟಿರುವ ಮರಗಿಡಗಳು, ಪಕ್ಷಿಗಳ ಕಲರವ, ದುಂಬಿಯ ಝೇಂಕಾರದೊಂದಿಗೆ ಇಲ್ಲೇ ಸಿಗುವ ಸ್ಧಳೀಯ ಸಸ್ಯಗಳ ಅಲಂಕಾರರೊಂದಿಗೆ ದಯಾನಂದ್ ತಮ್ಮ ಪುತ್ರಿ ಮದುವೆ ಮಾಡಿದ್ದಾರೆ. ಮದುವೆಗೆ ಬರುವ ಬಂಧು-ಬಾಂಧವರು, ತೋಟಗಾರಿಕೆ, ಕೃಷಿ, ಹೈನುಗಾರಿಕೆ, ಮೀನುಗಾರಿಕೆ, ಜೇನು ಸಾಕಾಣಿಕೆ, ರೇಷ್ಮೆ ಹಾಗೂ ಅರಣ್ಯ ಕೃಷಿಯನ್ನು ನೋಡಿ ಸಂಭ್ರಮಿಸುವ ಮೂಲಕ ಮದುವೆಯಲ್ಲಿ ಭಾಗಿಯಾಗಲಿ ಎಂಬ ಉದ್ದೇಶದಿಂದ ಹೊಲದಲ್ಲೇ ಅದ್ಧೂರಿಯಾಗಿ ಪುತ್ರಿಯ ವಿವಾಹ ಮಾಡಿರುವುದು ವಿಶೇಷ ಎನ್ನುತ್ತಾರೆ ಸ್ಥಳೀಯರು.

ಸಿರಿಧಾನ್ಯಗಳ ಬೊಂಬಾಟ್ ಭೋಜನ: ತೋಟದಲ್ಲಿ ಬೆಳೆದಿರುವ ಬಾಳೆ, ಬಿದಿರು, ತೆಂಗು, ಚೆಂಡು, ಸೇವಂತಿಗೆ ಹೂಗಳಿಂದ ಚಪ್ಪರ ನಿರ್ಮಿಸಿದ್ದ ದಯಾನಂದ್, ತಾವೇ ಬೆಳೆದ ಮಾವು, ಕಲ್ಲಂಗಡಿ ಸೇರಿದಂತೆ ಹಲವು ಹಣ್ಣುಗಳ ಪಾನೀಯ ಕೊಟ್ಟಿದ್ದಾರೆ. ನವಣೆ ಬಾತ್, ಎಳನೀರು ಪಾಯಸ ಸೇರಿದಂತೆ ಸಿರಿ ಧಾನ್ಯಗಳ ಬೊಂಬಾಟ್ ಭೋಜನವನ್ನು ಮದುವೆ ಆಗನಿಸಿದ ಅತಿಥಿಗಳಿಗೆ ಉಣ ಬಡಿಸಿದ್ದಾರೆ. ತಮ್ಮ ಜಮೀನಿನಲ್ಲಿ ಲೆಮನ್ ಗ್ರಾಸ್ ಬೆಳೆಯ ಮೂಲಕ ಆದಾಯವನ್ನು ಕಂಡುಕೊಂಡಿರುವ ದಯಾನಂದ್, ಬಂದ ಅತಿಥಿಗಳಿಗೆ ಲೆಮನ್ ಗ್ರಾಸ್ ಬೆಳೆಯುವ ವಿಧಾನ ಸೇರಿದಂತೆ ಹೈನುಗಾರಿಕೆ ಪಾಠ ಮಾಡಿದ್ದಲ್ಲದೇ ತಮ್ಮ ತೋಟದಲ್ಲೇ ಬೆಳೆದ ತೋತಾಪುರಿ ಮಾವಿನಕಾಯಿ ಹಾಗೂ ಲೆಮನ್ ಗ್ರಾಸ್ ಸಸಿಯನ್ನು ತಾಂಬೂಲವಾಗಿ ಕೊಟ್ಟು ಗಮನ ಸೆಳೆದಿದ್ದಾರೆ.
ಪುತ್ರಿಯ ಈ ವಿಶೇಷ ಮದುವೆ ಕುರಿತು ಮಾತನಾಡಿದ ಪ್ರಗತಿಪರ ರೈತ ದಯಾನಂದ್, ಹಿಂದಿನ ಕಾಲದಲ್ಲಿ ನಮ್ಮ ಮನೆ ಮುಂದೆ ಚಪ್ಪರದಲ್ಲಿ ಮದುವೆ ಆಗುತ್ತಿದ್ದವು. ಅದರೀಗ, ಅದು ಮರೆಯಾಗುತ್ತಿದೆ. ಈಗಿನ ಮದುವೆಯ ವೈಭವೀಕರಣ ಇಲ್ಲದೇ ನಾವು ದಿನನಿತ್ಯ ಕೆಲಸ ಮಾಡುವ ಸ್ಥಳದಲ್ಲಿ ಮದುವೆ ಮಾಡಿದ್ದೇವೆ. ಕೃಷಿಯಿಂದ ಬಹಳಷ್ಟು ಜನರು ವಿಮುಖರಾಗುತ್ತಿದ್ದಾರೆ. ಮರೆತುಹೋಗುತ್ತಿರುವ ಕೃಷಿ ಪದ್ಧತಿಯನ್ನು ಈ ರೀತಿ ನೆನಪಿಸಿಕೊಡಬೇಕು ಎಂಬ ಉದ್ದೇಶದಿಂದ ಪುತ್ರಿಯನ್ನು ಧಾರೆ ಎರೆದುಕೊಡಲಾಯಿತು ಎಂದರು.
ನಾನು ಪ್ರಕೃತಿ ಮತ್ತು ಪ್ರಾಣಿ ಪ್ರೇಮಿ, ಸಿಟಿಯಲ್ಲಿ ಮಾಲಿನ್ಯ ನಡುವೆ ಮದುವೆಯಾಗುವುದು ನನಗೆ ಇಷ್ಟವಿಲ್ಲ. ಚಿಕ್ಕದಾಗಿ, ಸಣ್ಣದಾಗಿ ಛತ್ರದಲ್ಲಿ ಮದುವೆಯಾಗುವ ಬದಲು ಪ್ರಕೃತಿ, ಕೃಷಿ ನಡುವೆ ಖುಷಿಯಾಗಿ ಮದುವೆಯಾಗಿರುವುದು ನನಗೆ ಸಂತಸ ತಂದಿದೆ ಎಂದು ನೂತನ ವಧು ರಶ್ಮಿ ಹೇಳಿದರು.
ಎಲ್ಲರೂ ಸಿಟಿಯಲ್ಲಿ ಹಾಲ್ನಲ್ಲಿ, ಹೋಟೆಲ್ನಲ್ಲಿ ಮದುವೆ ಆಗುತ್ತಾರೆ. ನಾವು ಪ್ರಕೃತಿ, ಮರ-ಗಿಡಗಳ ನಡುವೆ ಮದುವೆ ಆಗಿದ್ದೇವೆ. ನಾವು ಹೆಚ್ಚು ಆರ್ಗಾನಿಕ್ ಬಳಸಿದ್ದು ಆದಷ್ಟು ಕಡಿಮೆ ಪ್ಲಾಸ್ಟಿಕ್ ಬಳಸಿ ಮದುವೆ ಆಗಿದ್ದೇವೆ. ಊಟವನ್ನು ಕೂಡ ವಿಭಿನ್ನವಾಗಿ ಬಂದ ಅತಿಥಿಗಳಿಗೆ ಉಣಬಡಿಸಿದ್ದೇವೆ ಎನ್ನುತ್ತಾರೆ ವರ ಕುಬೇರ್. ಹಸಿರಿನ ನಡುವೆ ನಡೆದ ಈ ಮದುವೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.