
ಮಂಗಳೂರು :ಹಿಂದುತ್ವ ಹೋರಾಟಕ್ಕೆ ಖಾಕಿ ಬಿಸಿ! ಮಹೇಶ್ ಶೆಟ್ಟಿ ತಿಮರೋಡಿ, ಅರುಣ್ ಪುತ್ತಿಲ, ಭರತ್ ಕುಮ್ಡೇಲು ಸೇರಿ 36 ಮಂದಿ ಗಡೀಪಾರು ! ನೇರ ಕಾರ್ಯಾಚರಣೆಗಿಳಿದ ಎಸ್ಪಿ ಅರುಣ್.

ಮಂಗಳೂರು: ಕೋಮು ದ್ವೇಷದ ಕೊಲೆ ಸರಣಿ ಮತ್ತು ಈ ರೀತಿಯ ವಾತಾವರಣ ಮುಂದೆಂದೂ ಆಗಕೂಡದು ಎಂದು ಟಾಸ್ಕ್ ಪಡೆದು ಬಂದಿರುವ ಎಸ್ಪಿ ಡಾ.ಅರುಣ್ ಮತ್ತು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ರೌಡಿ ಹಿನ್ನೆಲೆಯಿರುವ ವ್ಯಕ್ತಿಗಳು, ಸೌಜನ್ಯಾ ಪರ ಹೋರಾಟ ನಡೆಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ, ಪ್ರಬಲ ಹಿಂದುತ್ವ ಹೋರಾಟಗಾರ ಅರುಣ್ ಪುತ್ತಿಲ ಸೇರಿದಂತೆ ಬಂಟ್ವಾಳ, ಪುತ್ತೂರು ವ್ಯಾಪ್ತಿಯ 36 ಮಂದಿಯನ್ನು ಜಿಲ್ಲೆಯಿಂದ ಗಡೀಪಾರು ಮಾಡಲು ಕ್ರಮ ಕೈಗೊಂಡಿದ್ದಾರೆ.
ಹಾಲಿ ಬಿಜೆಪಿ ಮುಖಂಡರೂ, ಕಳೆದ ಬಾರಿ ಪುತ್ತೂರು ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಬಂಡೆದ್ದು ಗೆಲುವಿನ ಸನಿಹ ಬಂದು ಚಿಲ್ಲರೆ ಮತಗಳಿಂದ ಸೋಲು ಕಂಡಿದ್ದ ಅರುಣ್ ಪುತ್ತಿಲ ಅವರಿಗೆ ಗಡೀಪಾರು ಬಗ್ಗೆ ನೋಟಿಸ್ ನೀಡಲಾಗಿದ್ದು ಜೂನ್ 6ರಂದು ವಿಚಾರಣೆ ಹಾಜರಾಗಲು ಸೂಚಿಸಲಾಗಿದೆ. ಇದರ ಬೆನ್ನಲ್ಲೇ ಪೊಲೀಸ್ ಇಲಾಖೆ, ಬಂಟ್ವಾಳ ನಗರ, ಬಂಟ್ವಾಳ ಗ್ರಾಮಾಂತರ, ಬೆಳ್ತಂಗಡಿ, ಪುತ್ತೂರು ನಗರ, ಪುತ್ತೂರು ಗ್ರಾಮಾಂತರ, ಸುಳ್ಯ, ಬೆಳ್ಳಾರೆ ವಿಟ್ಲ ಠಾಣೆ ವ್ಯಾಪ್ತಿಯ ರೌಡಿ ಲಿಸ್ಟ್ ಹೊಂದಿರುವ ಹಿಂದು ಮತ್ತು ಮುಸ್ಲಿಂ ಸಂಘಟನೆ ಕಾರ್ಯಕರ್ತರು, ಬಿಜೆಪಿಯಲ್ಲಿ ಗುರುತಿಸಿಕೊಂಡವರ ಪಟ್ಟಿ ರೆಡಿ ಮಾಡಿದ್ದು ಗಡೀಪಾರು ಮಾಡಲು ಕಾನೂನು ಪ್ರಕ್ರಿಯೆ ಆರಂಭಿಸಿದೆ. ಈ ಪಟ್ಟಿಯಲ್ಲಿ ಒಟ್ಟು 36 ಮಂದಿ ಇದ್ದರೆ, ಈ ಪೈಕಿ 13 ಮುಸ್ಲಿಮರಿದ್ದಾರೆ.
ಪಟ್ಟಿಯಲ್ಲಿ ಬೆಳ್ತಂಗಡಿ ಠಾಣೆ ವ್ಯಾಪ್ತಿಯ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಮನೋಜ್ ಕುಮಾರ್ ಹೆಸರು ಮಾತ್ರ ಇದೆ. ಉಳಿದಂತೆ, ಬಂಟ್ವಾಳ ಗ್ರಾಮಾಂತರ ಠಾಣೆಯ ಭರತ್ ಕುಮ್ಡೇಲು, ಭುವಿತ್ ಶೆಟ್ಟಿ ಸೇರಿ ಹಲವರ ಹೆಸರಿದೆ. ಎಲ್ಲರಿಗೂ ಆರಂಭದಲ್ಲಿ ನೋಟಿಸ್ ನೀಡಲಾಗುತ್ತಿದ್ದು ಅಭಿಪ್ರಾಯ ಪಡೆದು ಸೂಕ್ತ ಸ್ಪಂದನೆ ಸಿಗದಿದ್ದಲ್ಲಿ ಗಡೀಪಾರು ಮಾಡಲಿದ್ದಾರೆ.
ಸದ್ಯಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಾಂತರ ಅಂದರೆ, ಎಸ್ಪಿ ನಿಯಂತ್ರಣಕ್ಕೆ ಬರುವ ಠಾಣೆಗಳ ವ್ಯಾಪ್ತಿಯ 36 ಮಂದಿಯನ್ನು ಗಡೀಪಾರು ಮಾಡಲು ಇಲಾಖೆ ಮುಂದಾಗಿದೆ. ಇತ್ತೀಚಿನ ದಿನಗಳಲ್ಲಿ ಸೌಜನ್ಯಾ ಹೋರಾಟ ಮಾತ್ರ ಗುರಿ ಇರಿಸಿಕೊಂಡ ಮಹೇಶ್ ಶೆಟ್ಟಿ ತಿಮರೋಡಿ, ಅರುಣ್ ಪುತ್ತಿಲ ಅವರನ್ನು ಗಡೀಪಾರು ಮಾಡಲು ಮುಂದಾಗಿದ್ದು ವಿಶೇಷ.