
ಅಹಮದಾಬಾದ್ :ಏರ್ ಇಂಡಿಯಾ ಬೋಯಿಂಗ್ ಪತನ ;133ಕ್ಕೂ ಹೆಚ್ಚು ಸಾವು, ಅಪಾರ್ಟ್ಮೆಂಟ್ ಕಟ್ಟಡವೂ ಭಸ್ಮ , ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾಣಿ ಸಹಿತ 169 ಭಾರತೀಯರು, 53 ಬ್ರಿಟನ್ ಪ್ರಜೆಗಳಿದ್ದ ವಿಮಾನ.

ಅಹ್ಮದಾಬಾದ್ ಜೂನ್ 12: ಅಹ್ಮದಾಬಾದ್ ಏರ್ಪೋರ್ಟ್ ನಿಂದ ಟೇಕಾಫ್ ಆದ ಕೇವಲ ಐದೇ ನಿಮಿಷದಲ್ಲಿ ಏರ್ ಇಂಡಿಯಾ ಬೋಯಿಂಗ್ ವಿಮಾನ ಪತನವಾಗಿದ್ದು, ಜನವಸತಿ ಪ್ರದೇಶದ ಮೇಲೆ ಬಿದ್ದಿದೆ. ಇದರಿಂದಾಗಿ ವಿಮಾನಕ್ಕೆ ಬೆಂಕಿ ಹತ್ತಿಕೊಂಡಿದ್ದು, ಅದರಲ್ಲಿದ್ದ ಎಲ್ಲ ಪ್ರಯಾಣಿಕರೂ ಸುಟ್ಟು ಹೋಗಿದ್ದಾರೆ. ವಿಮಾನದಲ್ಲಿ ಇಬ್ಬರು ಪೈಲಟ್, ಹತ್ತು ಸಿಬಂದಿ ಸೇರಿ 242 ಇದ್ದರು. ಅಂದಾಜು 133 ಮಂದಿ ಸಾವಿಗೀಡಾಗಿದ್ದಾರೆ ಎನ್ನುವ ಮಾಹಿತಿ ಇದೆ. ಇದೇ ವಿಮಾನದಲ್ಲಿ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾಣಿ ಕೂಡ ಇದ್ದರು ಎಂದು ಏರ್ ಇಂಡಿಯಾ ಹೇಳಿದೆ.
ಮಧ್ಯಾಹ್ನ 1.20ರ ಸುಮಾರಿಗೆ ವಿಮಾನ ಟೇಕಾಫ್ ಆಗಿದ್ದು, ಕೆಲವು ಕಿಮೀ ದೂರಕ್ಕೆ ಸಂಚರಿಸುತ್ತಿದ್ದಾಗಲೇ ವಿಮಾನ ನಿಲ್ದಾಣದ ಕಂಟ್ರೋಲ್ ರೂಮ್ ಗೆ ತೊಂದರೆಯಾಗಿರುವ ಬಗ್ಗೆ ಮಾಹಿತಿ ಬಂದಿತ್ತು. ಏರ್ಪೋರ್ಟ್ ಬಳಿಯ ಮೇಘನಿ ನಗರ ಎಂಬಲ್ಲಿ ವಿಮಾನ ಪತನಗೊಂಡಿದ್ದು, ಪ್ರದೇಶದ ಅಪಾರ್ಟ್ಮೆಂಟ್ ಕೂಡ ಬೆಂಕಿಗಾಹುತಿಯಾಗಿದೆ. ವಿಮಾನದಲ್ಲಿ 169 ಭಾರತೀಯಪರು, 53 ಬ್ರಿಟಿಷ್ ಪ್ರಜೆಗಳು, 7 ಪೋರ್ಚುಗೀಸ್ ಪ್ರಜೆಗಳು, ಒಬ್ಬ ಕೆನಡಾ ಪ್ರಜೆ ಇದ್ದರು ಎಂದು ಏರ್ ಇಂಡಿಯಾ ಮಾಹಿತಿ ನೀಡಿದೆ. ವಿಮಾನ ಪತನವಾಗುತ್ತಲೇ ದಟ್ಟ ಕಪ್ಪು ಹೊಗೆ ಆವರಿಸಿದ್ದು, ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದವು. ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದಿರುವ ಅತಿದೊಡ್ಡ ವಿಮಾನ ಅವಘಡ ಇದಾಗಿದೆ.
ವಿಮಾನದಲ್ಲಿ ಅತ್ಯಂತ ಅನುಭವಿ ಪೈಲಟ್ ಗಳಾದ ಕಮಾಂಡರ್ ಸುಮಿತ್ ಸಭರ್ವಾಲ್ ಮತ್ತು ಕ್ಲೈವ್ ಕುಂದರ್ ಇದ್ದರು. ಯಾವ ಕಾರಣಕ್ಕೆ ಪತನ ಆಗಿದೆ ಎನ್ನುವ ಮಾಹಿತಿ ಸಿಕ್ಕಿಲ್ಲ. ಅಪಘಾತಕ್ಕೀಡಾದ ವಿಮಾನ 11 ವರ್ಷ ಹಳೆಯದು ಎನ್ನುವ ಮಾಹಿತಿ ಇದೆ. ವಿಜಯ್ ರೂಪಾಣಿ ಗುಜರಾತಿನ 16ನೇ ಸಿಎಂ ಆಗಿದ್ದು, 2016ರಿಂದ 2021ರ ವರೆಗೆ ಮುಖ್ಯಮಂತ್ರಿಯಾಗಿದ್ದರು. ರೂಪಾಣಿ ಸ್ಥಿತಿ ಹೇಗಿದೆ ಎನ್ನುವ ಬಗ್ಗೆ ಖಚಿತ ವರದಿಗಳು ಲಭ್ಯವಾಗಿಲ್ಲ. ಅವಘಡ ಹಿನ್ನೆಲೆಯಲ್ಲಿ ಅಹ್ಮದಾಬಾದ್ ನಗರದ ಸರ್ದಾರ್ ವಲ್ಲಭಬಾಯ್ ಪಟೇಲ್ ವಿಮಾನ ನಿಲ್ದಾಣದಲ್ಲಿ ಎಲ್ಲ ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಘಟನೆ ತಿಳಿಯುತ್ತಲೇ ವಿಶ್ವಾದ್ಯಂತ ಕಂಬನಿ ವ್ಯಕ್ತವಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ಜೈಶಂಕರ್ ಶಾಕ್ ವ್ಯಕ್ತಪಡಿಸಿದ್ದಾರೆ.