ಬೀದರ್: ಗಾಳಿಪಟದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಬೈಕ್ ಸವಾರ ಸಾವು...!!
ಬೀದರ್: ಗಾಳಿಪಟದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ, ತೀವ್ರವಾಗಿ ಗಾಯಗೊಂಡು ಬೈಕ್ ಸವಾರನೋರ್ವ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 65ರ ನಿರ್ಣಾ ಕ್ರಾಸ್ ಬಳಿ ಬುಧವಾರ ಬೆಳಗ್ಗೆ ಸಂಭವಿಸಿತು.
ಬೀದರ್ ತಾಲೂಕಿನ ಬೊಂಬಳಗಿ ಗ್ರಾಮದ ಸಂಜೀವ ಕುಮಾರ್ (48) ಮೃತರು. ಇವರು ಬೈಕ್ನಲ್ಲಿ ತೆರಳುತ್ತಿದ್ದಾಗ ಗಾಳಿಪಟದ ಮಾಂಜಾ ದಾರ ಕಾಣಿಸದೆ, ನೇರವಾಗಿ ಅವರ ಕುತ್ತಿಗೆಗೆ ಸಿಲುಕಿದೆ. ಇದರಿಂದ ಕುತ್ತಿಗೆಗೆ ಗಂಭೀರ ಗಾಯವಾಗಿದ್ದು, ಮಾಂಜಾ ಸಿಲುಕಿದ ರಭಸಕ್ಕೆ ಸಂಜೀವ ಕುಮಾರ್ ಬೈಕ್ ಮೇಲಿಂದ ರಸ್ತೆಗೆ ಬಿದ್ದಿದ್ದಾರೆ. ಅಲ್ಲದೆ, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸಂಜೀವ ಕುಮಾರ್ ಅವರು ಲಾರಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದರು. ಹಾಸ್ಟೆಲ್ನಲ್ಲಿ ಮಗಳನ್ನು ಮನೆಗೆ ಕರೆದುಕೊಂಡು ಬರಲು ಹೋಗುತ್ತಿದ್ದಾಗ ಘಟನೆ ಜರುಗಿದೆ. ಈ ಕುರಿತು ಮನ್ನಾಏಖ್ಖೇಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಂಜಾ ದಾರ ಮಾರಾಟ ಮಾಡಿದರೆ ಸೂಕ್ತ ಕ್ರಮ-ಎಸ್ಪಿ: ''ಬುಧವಾರ ಬೆಳಗ್ಗೆ 11 ಗಂಟೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಜೀವ ಕುಮಾರ್ (48) ಎಂಬವರು ಬೈಕ್ನಲ್ಲಿ ತೆರಳುತ್ತಿದ್ದಾಗ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ, ಸ್ಥಳದಲ್ಲೇ ಬಿದ್ದು ಸಾವನ್ನಪ್ಪಿದ್ದಾರೆ. ಈಗಾಗಲೇ ನಾವು ಮೂರು ದಿನಗಳಿಂದ ಸಂಕ್ರಾಂತಿ ಹಬ್ಬದ ಪ್ರಯುಕ್ತ ಗಾಳಿಪಟ ಹಾರಿಸಲು ಮಾಂಜಾ ದಾರ ಬಳಕೆ ಮಾಡದಂತೆ ಜನರಲ್ಲಿ ಜಾಗೃತಿ ಮೂಡಿಸಿದ್ದೇವೆ. ಮಾಂಜಾ ದಾರ ಬಳಕೆ ನಿಷೇಧ. ಆದರೂ ಸಹ ಕೆಲ ಅಂಗಡಿಗಳು ಈ ದಾರ ಮಾರಾಟ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ, ಕೆಲ ಅಂಗಡಿಗಳ ಮೇಲೆ ದಾಳಿ ಮಾಡಿ ದಾರವನ್ನು ವಶಪಡಿಸಿಕೊಂಡಿದ್ದೇವೆ. ಮಾಂಜಾ ದಾರ ಮಾರಾಟ, ಬಳಕೆ ಮಾಡಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು'' ಎಂದು ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಎಚ್ಚರಿಕೆ ನೀಡಿದರು.
ದೇಶದ ಹಲವೆಡೆ ಮಕರ ಸಂಕ್ರಾಂತಿಯಂದು ಗಾಳಿಪಟ ಹಾರಿಸುವುದು ಒಂದು ಸಂಪ್ರದಾಯ. ಈ ಹಿಂದೆಲ್ಲಾ ಗಾಳಿಪಟಗಳನ್ನು ಹಾರಿಸಲು ಹತ್ತಿಯ ದಾರಗಳನ್ನು ಬಳಸಲಾಗುತ್ತಿತ್ತು. ಆದರೆ ಕಳೆದ ಹಲವಾರು ವರ್ಷಗಳಿಂದ ನೈಲಾನ್ ದಾರಗಳು ಬಳಕೆಯಲ್ಲಿವೆ. ನೈಲಾನ್ ಬಾಳಿಕೆ ಮತ್ತು ಕಡಿಮೆ ವೆಚ್ಚದ ಹಿನ್ನೆಲೆಯಲ್ಲಿ ಅದನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಆದರೆ ಈ ದಾರವು ಬೈಕ್ ಸವಾರರು ಸೇರಿದಂತೆ ಜನರ ಜೀವಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ.