ಕುಣಿಗಲ್ :ಲವ್ ಮ್ಯಾರೇಜ್ ಗೆ ಮುಂದಾಗಿದ್ದ ಮಗಳ ಪ್ರಿಯಕರನ ಕೊಂದ ತಂದೆ...!!
Friday, December 19, 2025

ಕುಣಿಗಲ್: ಪ್ರೇಮ ವಿವಾಹಕ್ಕೆ ಮುಂದಾಗಿದ್ದ ಮಗಳ ಪ್ರಿಯಕರನನ್ನು ತಂದೆಯೇ ಅಪಹರಿಸಿ ಕೊಲೆ ಮಾಡಿರುವ ಘಟನೆ ಕುಣಿಗಲ್ ನಲ್ಲಿ ನಡೆದಿದೆ.
ಕೊತ್ತಗೆರೆ ಗ್ರಾಮದ ಚಲುವ (31) ಕೊಲೆಯಾದ ಯುವಕ ಎಂದು ತಿಳಿದು ಬಂದಿದೆ. ಅಗಲಕೋಟೆ ಗ್ರಾಮದ ಪೂರ್ಣಿಮಾ ತನ್ನ ಸಂಬಂಧಿ ಚಲುವ ಎಂಬುವರನ್ನು ಕಳೆದ ಆರು ವರ್ಷಗಳಿಂದ ಪ್ರೀತಿಸುತ್ತಿದ್ದು, ವಿವಾಹಕ್ಕೆ ಮುಂದಾಗಿದ್ದರು. ಇದಕ್ಕೆ ಯುವತಿ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಯುವತಿಯ ತಂದೆ ಕೆಂಪಣ್ಣ, ಸಂಬಂಧಿಗಳಾದ ಕುಣಿಗಲ್ ಕೋಟೆ ಪ್ರದೇಶದ ರಾಮಕೃಷ್ಣ ಹಾಗೂ ಮಾಗಡಿ ಮಂಜುನಾಥ್ ಎಂಬುವರು ಬುಧುವಾರ ಕಾರಿನಲ್ಲಿ ಬಂದು ಕುಣಿಗಲ್ ಬಸ್ ನಿಲ್ದಾಣದಲ್ಲಿದ್ದ ಚಲುವ ಅವರನ್ನು ಅಪಹರಿಸಿದ್ದರು. ಮಾಗಡಿ ತಾಲ್ಲೂಕಿನ ಗಟ್ಟಪುರದ ತೊರೆಹಳ್ಳಕ್ಕೆ ಕರೆದೊಯ್ದು ಕೊಲೆ ಮಾಡಿದ್ದಾರೆ. ನಂತರ ಮಾಗಡಿ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾರೆ.
ಮಾಗಡಿ ಪೊಲೀಸರ ಮಾಹಿತಿ ಹಾಗೂ ಕೊಲೆಯಾದ ಚಲುವ ಸಹೋದರ ರಾಜು ನೀಡಿದ ದೂರಿನ ಮೇರೆಗೆ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.