ಛತ್ತೀಸ್ಗಡ :ಉದ್ಯಮಿಯನ್ನು ಲವ್ನಲ್ಲಿ ಬೀಳಿಸಿ ಕೋಟಿಗಟ್ಟಲೆ ವಸೂಲಿ ಮಾಡಿದ ಡಿಎಸ್ಪಿ ಕಲ್ಪನಾ, ಸದಾ ಸುದ್ದಿಯಲ್ಲಿರುವ ಸುಂದರಿ..!!

ಛತ್ತಿಸ್ಘಢ : ಕಳೆದ ಕೆಲವು ದಿನಗಳಿಂದ ಕಲ್ಪನಾ ವರ್ಮಾ ಎಂಬ ಯುವ ಪೊಲೀಸ್ ಅಧಿಕಾರಿ ಸುದ್ದಿಯಲ್ಲಿದ್ದಾರೆ.
ರಾಯ್ಪುರದ ಉದ್ಯಮಿ ದೀಪಕ್ ಟಂಡನ್ ಆಕೆಯ ವಿರುದ್ಧ ಲವ್ ಟ್ರ್ಯಾಪ್ ಆರೋಪ ಮಾಡಿದ್ದು, ಅಂದಾಜು 2.5 ಕೋಟಿ ರೂಪಾಯಿ, ಒಂದು ಕಾರು, ವಜ್ರದ ಉಂಗುರ ಹಾಗೂ ಲಕ್ಷಾಂತರ ಮೌಲ್ಯದ ಆಭರಣವನ್ನು ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಕಲ್ಪನಾ ವರ್ಮ ತಮ್ಮ ಮೇಲಿನ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದು, ಇದು ಆಧಾರರಹಿತ ಹಾಗೂ ರಾಜಕೀಯ ಪಿತೂರಿ ಎಂದು ಹೇಳಿದ್ದಾರೆ. ಇದೆಲ್ಲದರ ನಡುವೆ ಆಕೆಯ ವಾಟ್ಸ್ಯಾಪ್ ಚಾಟ್ಗಳು ಲೀಕ್ ಆಗಿವೆ.
ಕಲ್ಪನಾ ಛತ್ತೀಸ್ಗಢ ಪೊಲೀಸ್ ಅಧಿಕಾರಿ. ಅವರ ಪೂರ್ಣ ಹೆಸರು ಕಲ್ಪನಾ ವರ್ಮಾ, ಅವರು 2016-17 ಬ್ಯಾಚ್ ಅಧಿಕಾರಿ. ಆರಂಭಿಕ ದಿನಗಳಲ್ಲಿ, ಅವರು ರಾಯ್ಪುರದ ಮಾನಾ ಪೊಲೀಸ್ ಠಾಣೆಯಲ್ಲಿ ಮತ್ತು ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್)ದಲ್ಲಿ ಸಿಎಸ್ಪಿಯಾಗಿ ಸೇವೆ ಸಲ್ಲಿಸಿದರು. ನಂತರ, ಅವರನ್ನು ವಿವಿಧ ಸ್ಥಳಗಳಲ್ಲಿ ಡಿಎಸ್ಪಿ (ಡೆಪ್ಯೂಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್) ಆಗಿ ನೇಮಿಸಲಾಯಿತು. ಪ್ರಸ್ತುತ, ಅವರನ್ನು ಛತ್ತೀಸ್ಗಢದ ಸೂಕ್ಷ್ಮ ಜಿಲ್ಲೆಯಾದ ದಂತೇವಾಡದಲ್ಲಿ ಡಿಎಸ್ಪಿಯಾಗಿ ನೇಮಿಸಲಾಗಿದೆ. ನಕ್ಸಲ್ ಪೀಡಿತ ಸ್ಥಿತಿಯಿಂದಾಗಿ ಈ ಪ್ರದೇಶವು ಯಾವಾಗಲೂ ಹೈಪ್ರೊಫೈಲ್ ಆಗಿರುತ್ತದೆ.

ಕಲ್ಪನಾ ವರ್ಮಾ ಈ ಹಿಂದೆಯೂ ಸುದ್ದಿಯಲ್ಲಿದ್ದರು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ, ಪ್ರಸ್ತುತ ಗೃಹ ಸಚಿವ ವಿಜಯ್ ಶರ್ಮಾ ಮತ್ತು ಕೆಲವು ಹಿರಿಯ ಬಿಜೆಪಿ ನಾಯಕರು ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ಜ್ಞಾಪನಾ ಪತ್ರವನ್ನು ಸಲ್ಲಿಸಲು ಹೋಗಿದ್ದ ಫೋಟೋ ವೈರಲ್ ಆಗಿತ್ತು. ಆದರೆ ಕಲ್ಪನಾ ವರ್ಮಾ ತಮ್ಮ ಮೊಬೈಲ್ ಫೋನ್ ನೋಡುವುದರಲ್ಲಿ ಮಗ್ನರಾಗಿದ್ದರು. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

2017ರ ಬ್ಯಾಚ್ನ ಅಧಿಕಾರಿಯಾಗಿದ್ದರೂ ರಾಯ್ಪುರದಿಂದ ದಾಂತೇವಾಡದವರೆಗೆ ಎಲ್ಲೇ ಪೋಸ್ಟ್ ಆದರೂ ಅವರು ಸುದ್ದಿಯಲ್ಲಿ ಇರುತ್ತಿದ್ದರು.
ರಾಯ್ಪುರದ ಉದ್ಯಮಿ ದೀಪಕ್ ಟಂಡನ್ ಖಮರ್ದಿಹ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. 2021 ರಲ್ಲಿ, ಸ್ನೇಹಿತನ ಮೂಲಕ ಕಲ್ಪನಾ ವರ್ಮಾ ಅವರನ್ನು ತಾನು ಭೇಟಿಯಾಗಿದ್ದೆ ಎಂದಿದ್ದಾರೆ. ನಂತರ, ಕಲ್ಪನಾ ಅವರಿಗೆ ಆಗಾಗ ಕರೆ ಮಾಡಲು ಪ್ರಾರಂಭಿಸಿದರು, ಹೋಟೆಲ್ಗಳಲ್ಲಿ ಗಂಟೆಗಟ್ಟಲೆ ಕಳೆಯುತ್ತಿದ್ದರು ಮತ್ತು ತಡರಾತ್ರಿ ವೀಡಿಯೊ ಕಾಲ್ ಮಾಡಿ ಮಾತನಾಡುತ್ತಿದ್ದರು. ಕ್ರಮೇಣ, ಅವರ ಆತ್ಮೀಯತೆ ಬೆಳೆಯಿತು. ದೀಪಕ್ ಕೂಡ ಆಕೆಯ ಪ್ರೀತಿಯಲ್ಲಿ ಬಿದ್ದಿದ್ದರು.
ಪ್ರೀತಿ ಬೆಳೆದ ಬಳಿಕ ಕಲ್ಪನಾ ವಿವಿಧ ಕಾರಣಗಳನ್ನು ನೀಡಿ ಹಣ ಹಾಗೂ ಆಭರಣಗಳ ಬೇಡಿಕೆ ಇಡಲು ಆರಂಭಿಸಿದ್ದಳು. ದೀಪಕ್ ಕೂಡ ಆತ್ಮೀಯತೆ ಇದ್ದ ಕಾರಣಕ್ಕೆ ಆಕೆ ಕೇಳಿದ್ದನ್ನು ಕೊಡಿಸುತ್ತಾ ಹೋಗಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ಕಲ್ಪನಾ 2 ಕೋಟಿ ರೂಪಾಯಿ ಹಣ, ಒಂದು ಐಷಾರಾಮಿ ಕಾರು, 12 ಲಕ್ಷ ಮೌಲ್ಯದ ವಜ್ರದ ಉಂಗುರ, 5 ಲಕ್ಷ ಮೌಲ್ಯದ ಚಿನ್ನದ ಆಭರಣ, 1 ಲಕ್ಷ ಮೌಲ್ಯದ ಬಳೆ ಮತ್ತು ಹೋಟೆಲ್ ಒಂದರ ಮಾಲೀಕತ್ವವನ್ನು ಸಂಪಾದನೆ ಮಾಡಿದ್ದಾಳೆ. ಇದರಿಂದ ದೀಪಕ್ ಅವರಿಗೆ ಆಗಿರುವ ಒಟ್ಟು ವಂಚನೆಯ ಮೊತ್ತ 2.5 ಕೋಟಿ ರೂಪಾಯಿ ಎನ್ನಲಾಗಿದೆ.
ತನ್ನ ಸಹೋದರನಿಗೆ ಹೋಟೆಲ್ ತೆರೆಯಲು ಸಹಾಯ ಮಾಡುವ ಹೆಸರಿನಲ್ಲಿ ಕಲ್ಪನಾ ತನ್ನಿಂದ ಕೋಟ್ಯಂತರ ರೂಪಾಯಿಗಳನ್ನು ಸುಲಿಗೆ ಮಾಡಿದ್ದಾಳೆ ಎಂದು ದೀಪಕ್ ಹೇಳಿಕೊಂಡಿದ್ದಾರೆ.
ಪತ್ನಿಗೆ ಡೈವೋರ್ಸ್ ನೀಡುವಂತೆ ಕಲ್ಪನಾ ಒತ್ತಡ ಹೇರಿದ್ದಳು ಎಂದು ಆರೋಪ ಮಾಡಿದ್ದಾರೆ. ಇದಕ್ಕೆ ದೀಪಕ್ ನಿರಾಕರಿಸಿ ತಾನು ನೀಡಿದ್ದ ಹಣ ಮತ್ತು ವಸ್ತುಗಳನ್ನು ವಾಪಸ್ ನೀಡುವಂತೆ ಕೇಳಿದ್ದಾರೆ.
ಈ ವೇಳೆ ತಮ್ಮ ಪೊಲೀಸ್ ಅಧಿಕಾರ ಬಳಸಿಕೊಂಡು ಆಕೆ ಬೆದರಿಕೆ ಹಾಕಲು ಆರಂಭಿಸಿದ್ದಾಳೆ. ಆಕೆಯ ವಾಟ್ಸ್ಯಾಪ್ ಚಾಟ್ಗಳನ್ನು ಸಾಕ್ಷಿಯಾಗಿ ನೀಡಲಾಗಿದೆ. ಆಕೆ ಹಲವು ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ನಿಕಟ ಸಂಬಂಧ ಹೊಂದಿದ್ದು, ಅವರಿಂದ ನನಗೆ ಬೆದರಿಕೆ ಹಾಕುತ್ತಿದ್ದಾಳೆ ಎಂದೂ ದೀಪಕ್ ಆರೋಪಿಸಿದ್ದಾರೆ.