ಧಾರವಾಡ :ಡಿವೈಡರ್ಗೆ ಡಿಕ್ಕಿಯಾಗಿ ಹೊತ್ತಿ ಉರಿದ ಕಾರು: ಹಾವೇರಿ ಲೋಕಾಯುಕ್ತ ಸಿಪಿಐ ಸಾಲಿಮಠ ಸಜೀವ ದಹನ..!!

ಧಾರವಾಡ: ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ರಸ್ತೆ ಅಪಘಾತದಲ್ಲಿ ಸಾವು ಕಂಡ ಸುದ್ದಿ ಮಾಸುವ ಮುನ್ನವೇ ಅದೇ ರೀತಿಯ ಇನ್ನೊಂದು ಘಟನೆ ಧಾರವಾಡದಲ್ಲಿ ವರದಿಯಾಗಿದೆ.
ಲೋಕಾಯುಕ್ತ ಸಿಪಿಐ ಪಂಚಾಕ್ಷರಿ ಸಾಲಿಮಠ ಅವರು ಪ್ರಯಾಣ ಮಾಡುತ್ತಿದ್ದ ಐ20 ಕಾರು ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಕಾರ್ ಡಿಕ್ಕಿ ಹೊಡೆದ ಪರಿಣಾಮವಾಗಿ ಇನ್ಸ್ಪೆಕ್ಟರ್ ಹೊರಬರಲು ಸಾಧ್ಯವಾಗಿಲ್ಲ. ಇದರಿಂದ ಅವರೂ ಕೂಡ ಕಾರ್ನಲ್ಲಿಯೇ ಸಜೀವವಾಗಿ ದಹನವಾಗಿದ್ದಾರೆ.
ಲೋಕಾಯುಕ್ತ ಸಿಪಿಐ ಪಂಚಾಕ್ಷರಿ ಸಾಲಿಮಠ ಕಾರ್ನಲ್ಲಿ ಪ್ರಯಾಣ ಮಾಡುತ್ತಿದ್ದರು. ಡಿಕ್ಕಿ ಹೊಡೆದ ರಭಸಕ್ಕೆ ಕೆಲವೇ ಕ್ಷಣದಲ್ಲಿ ಬೆಂಕಿ ಆವರಿಸಿಕೊಂಡಿದ್ದು, ಕೆಲವೇ ನಿಮಿಷಗಳಲ್ಲಿ ಕಾರು ಸುಟ್ಟುಹೋಗಿದೆ.
ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲ್ಲೂಕಿನ ಭದ್ರಾಪುರ ಬಳಿಯ (ಗದಗ-ಹುಬ್ಬಳ್ಳಿ ಹೆದ್ದಾರಿ) ಅರೆರಾ ಸೇತುವೆ ಸಮೀಪ ಕಾರು ರಸ್ತೆಯ ವಿಭಜಕಕ್ಕೆ ಡಿಕ್ಕಿಯಾಗಿದೆ. ಗದಗದಿಂದ ಹುಬ್ಬಳ್ಳಿ ಮಾರ್ಗವಾಗಿ ಕಾರ್ ಪ್ರಯಾಣ ಮಾಡುವಾಗ, ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಭೀಕರ ಘಟನೆ ನಡೆದಿದೆ.
ಸಂಜೆ 7.30ರ ಸುಮಾರಿಗೆ ಘಟನೆ ನಡೆದಿದ್ದು, ಕಾರಿಗೆ ಬೆಂಕಿ ಹೊತ್ತಿಕೊಳ್ಳುವ ವೇಳೆ ಹಾವೇರಿಯಲ್ಲಿ ಲೋಕಾಯುಕ್ತ ಇನ್ಸ್ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಪಂಚಾಕ್ಷರಿ ಸಾಲಿಮಠ ಅವರೇ ಡ್ರೈವ್ ಮಾಡುತ್ತಿದ್ದರು.
ಗದಗದಲ್ಲಿ ಇರುವ ಕುಟುಂಬವನ್ನು ಭೇಟಿ ಮಾಡುವ ಸಲುವಾಗಿ ಅವರು ಹೊರಟಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಆಗಮಿಸಿರುವ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮೃತದೇಹ ಸುಟ್ಟು ಕರಕಲಾಗಿದ್ದರಿಂದ ಪತ್ತೆ ಹಚ್ಚುವುದು ಕಷ್ಟವಾಗಿತ್ತು. ಈ ವೇಳೆ ಅವರ ಕುಟುಂಬ ಪಂಚಾಕ್ಷರಿ ಸಾಲಿಮಠ ಅವರ ಗುರುತು ಪತ್ತೆ ಮಾಡಿದೆ. ಕೈಯಲ್ಲಿದ್ದ ಬ್ರೆಸ್ಲೆಟ್ ನೋಡಿ ಪತ್ತೆ ಮಾಡಲಾಗಿದೆ. ಕಾರು ಡಿವೈಡರ್ಗೆ ಡಿಕ್ಕಿಯಾಗಿ ಕೆಳಗೆ ಬಿದ್ದಾಗ ಏಕಾಎಕಿ ಬೆಂಕಿ ಹೊತ್ತಿದೆ. ಪೆಟ್ರೋಲ್ ಲೀಕ್ ಆದ ಕಾರಣ ಸ್ಪಾರ್ಕ್ ಆಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.