ತುಮಕೂರು :ದಿನನಿತ್ಯ ಪಾನಮತ್ತನಾಗಿ ಶಾಲೆಗೆ ಬರುತ್ತಿರುವ ಶಿಕ್ಷಕ, ಪೋಷಕರು ಹಾಗೂ ಗ್ರಾಮಸ್ಥರಿಂದ ಶಿಕ್ಷಣ ಇಲಾಖೆಗೆ ದೂರು...!!!

ಹಿರೀಸಾವೆ: ಶಿಕ್ಷಕನೊರ್ವ ಶಾಲೆಗೆ ದಿನನಿತ್ಯ ಪಾನಮತ್ತನಾಗಿ ಬರುತ್ತಿರುವ ಘಟನೆ ಹಾಸನದ ಸೋರೆಕಾಯಿಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಶಿಕ್ಷಕ ಹರೀಶ್ ಕುಡಿದು ಬರುತ್ತಿದ್ದು, ಆತನ ಪತ್ನಿ ಪೂರ್ಣಿಮಾ ತರಗತಿಯಲ್ಲಿ ಮಕ್ಕಳಿಗೆ ಥಳಿಸುತ್ತಿದ್ದಾರೆ’ ಎಂದು ಆರೋಪಿಸಿ ಪೋಷಕರು ಮತ್ತು ಗ್ರಾಮಸ್ಥರು ಶಾಲೆಯ ಎದುರು ಆಕ್ರೋಶ ವ್ಯಕ್ತಪಡಿಸಿದರು.
ಎರಡು ವರ್ಷದಿಂದ ಶಿಕ್ಷಕ ಹೀಗೆ ವರ್ತಿಸುತ್ತಿದ್ದು, ಆತನ ಜೊತೆಗೆ ಪತ್ನಿಯೂ ಬರುತ್ತಾರೆ’ ಎಂದು ಗ್ರಾಮಸ್ಥರು ಆರೋಪಿಸಿದರು.
ಮುಖ್ಯಶಿಕ್ಷಕಿ ಸವಿತಾ ಅವರು ಸೋಮವಾರ ಇಲಾಖೆಯ ತರಬೇತಿಗೆ ಹೋಗಿದ್ದ ವೇಳೆ ಶಿಕ್ಷಕನ ಪತ್ನಿ ತರಗತಿಗೆ ತೆರಳಿ ವಿದ್ಯಾರ್ಥಿನಿಯರನ್ನು ಥಳಿಸಿದ್ದಾರೆ ಎಂಬ ವಿಷಯ ತಿಳಿದ ಪೋಷಕರು ಮತ್ತು ಗ್ರಾಮಸ್ಥರು ಶಾಲೆಗೆ ಬಂದು ದಂಪತಿಯನ್ನು ತರಾಟೆಗೆ ತೆಗೆದುಕೊಂಡರು. ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ದೀಪಾ, ಬಿಆರ್ಸಿ ಅನಿಲ್, ಶಿಕ್ಷಣ ಸಂಯೋಜಕ ಶ್ರೀನಿವಾಸ್, ಸಿಆರ್ಪಿ ಪುಟ್ಟಸ್ವಾಮಿ, ಪೋಷಕರು, ಗ್ರಾಮಸ್ಥರಿಂದ ಲಿಖಿತ ದೂರು ಪಡೆದರು. ವಿದ್ಯಾರ್ಥಿಗಳಿಂದ ಪ್ರತ್ಯೇಕವಾಗಿ ಮಾಹಿತಿ ಪಡೆದರು.