ಕಾರವಾರ: ಮೈಸೂರಿನಿಂದ ಪ್ರವಾಸ ಬಂದಿದ್ದ ಶಾಲಾ ಬಸ್​ ಹೊನ್ನಾವರದಲ್ಲಿ ಪಲ್ಟಿ ; ಜನ್ಮದಿನದಂದೇ 15 ವರ್ಷದ ಬಾಲಕನ ಬಲಿ, 26ಕ್ಕೂ ಹೆಚ್ಚು ಮಂದಿಗೆ ಗಾಯ..!!

ಕಾರವಾರ: ಮೈಸೂರಿನಿಂದ ಪ್ರವಾಸ ಬಂದಿದ್ದ ಶಾಲಾ ಬಸ್​ ಹೊನ್ನಾವರದಲ್ಲಿ ಪಲ್ಟಿ ; ಜನ್ಮದಿನದಂದೇ 15 ವರ್ಷದ ಬಾಲಕನ ಬಲಿ, 26ಕ್ಕೂ ಹೆಚ್ಚು ಮಂದಿಗೆ ಗಾಯ..!!

ಕಾರವಾರ : ಮೈಸೂರಿನಿಂದ ಗೋಕರ್ಣಕ್ಕೆ ಪ್ರವಾಸ ಬಂದಿದ್ದ ಶಾಲಾ ಬಸ್​ ಪಲ್ಟಿಯಾಗಿ ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿ, 26ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಸುಳೆ ಮುರ್ಕಿ ಕ್ರಾಸ್ ಬಳಿ ಭಾನುವಾರ ಸಂಜೆ ನಡೆದಿದೆ.

ಮೈಸೂರಿನ ತರಳಬಾಳು ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆತಂದಿದ್ದ ಬಸ್ ಪಲ್ಟಿಯಾಗಿದೆ. ಮೈಸೂರಿನ ಪವನ್ (15) ಸ್ಥಳದಲ್ಲೇ ಮೃತಪಟ್ಟಿರುವ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಯಾಗಿದ್ದಾರೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ.

ಜನ್ಮದಿನದಂದೇ ಬಾಲಕನ ಸಾವು: 

ಪವನ್ ಮೈಸೂರಿನ ಜನತನಗರದ ಆಟೋ ಚಾಲಕರೊಬ್ಬರ ಪುತ್ರನಾಗಿದ್ದು, ತಮ್ಮ ಜನ್ಮದಿನದಂದೇ ಮೃತಪಟ್ಟಿದ್ದಾರೆ. ಪುತ್ರನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇಂದು (ಸೋಮವಾರ) ಮರಣೋತ್ತರ ಪರೀಕ್ಷೆ‌ ನಡೆಯಲಿದೆ.

ಅಪಘಾತ ವಿಷಯ ತಿಳಿದ ಕೂಡಲೇ ಮೈಸೂರು ಡಿಡಿಪಿಐ ಡಿ.ಉದಯ್ ಕುಮಾರ್ ಹಾಗೂ ದಕ್ಷಿಣ ವಲಯ ಬಿಇಒ ಕೃಷ್ಣ ಅವರು ಹೊನ್ನಾವಾರ ಎಸಿ, ತಹಶೀಲ್ದಾರ್‌ ಹಾಗೂ ಬಿಇಒ ಜೊತೆ ಸಂಪರ್ಕ‌ ಸಾಧಿಸಿ ಮಕ್ಕಳ ಸುರಕ್ಷತೆಯ ಬಗ್ಗೆ ಮಾಹಿತಿ‌ ಪಡೆದುಕೊಂಡಿದ್ದಾರೆ.

ಕೆಲ ಮಕ್ಕಳು ಹೊನ್ನಾವರ ಆಸ್ಪತ್ರೆಯಲ್ಲಿ ಹಾಗೂ ಇನ್ನು‌ ಕೆಲವರನ್ನು ಶಾಲೆಯೊಂದರಲ್ಲಿ ಉಳಿಸಲು ಕ್ರಮ ವಹಿಸಲಾಗಿದೆ. ಜೊತೆಗೆ, ಮಕ್ಕಳನ್ನು ಮೈಸೂರಿಗೆ ಕರೆತರಲು ವ್ಯವಸ್ಥೆ ಮಾಡಲಾಗಿದೆ.

40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಸ್‌ನಲ್ಲಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಘಟನೆಯ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾಲಾ ಪ್ರವಾಸಕ್ಕೆ ಅನುಮತಿ ಪಡೆದಿಲ್ಲ - ಡಿಡಿಪಿ:

 "ಸಾಮಾನ್ಯವಾಗಿ ಶಾಲಾ ಪ್ರವಾಸಕ್ಕೆ ಹೊರಡುವ ಮುನ್ನ ಶಾಲಾ ಶಿಕ್ಷಣ ಇಲಾಖೆ ಅನುಮತಿ ಪಡೆಯಬೇಕು ಎಂಬ ನಿಯಮವಿದೆ. ಆದರೆ, ಈ ಶಾಲೆಯವರು ಅನುಮತಿ ಪಡೆದಿಲ್ಲ" ಎಂದು ಮೈಸೂರಿನ ಡಿಡಿಪಿಐ ಡಿ.ಉದಯ್ ಕುಮಾರ್ ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article