ಮಂಗಳೂರು :ಕಾಂತಾರ -1ರ ಯಶಸ್ಸಿನ ಬೆನ್ನಲ್ಲೇ ಪಂಜುರ್ಲಿ ದೈವಕ್ಕೆ ಹರಕೆ ನೇಮ ; ರಾತ್ರಿಯಿಡೀ ರಿಷಬ್ ಶೆಟ್ಟಿ ದಂಪತಿ,  ಚಿತ್ರತಂಡ ಸದಸ್ಯರ ಉಪಸ್ಥಿತಿ..!!!

ಮಂಗಳೂರು :ಕಾಂತಾರ -1ರ ಯಶಸ್ಸಿನ ಬೆನ್ನಲ್ಲೇ ಪಂಜುರ್ಲಿ ದೈವಕ್ಕೆ ಹರಕೆ ನೇಮ ; ರಾತ್ರಿಯಿಡೀ ರಿಷಬ್ ಶೆಟ್ಟಿ ದಂಪತಿ, ಚಿತ್ರತಂಡ ಸದಸ್ಯರ ಉಪಸ್ಥಿತಿ..!!!

ಮಂಗಳೂರು: ಕಾಂತಾರ -1 ಚಿತ್ರದ ಯಶಸ್ಸಿನ ಬೆನ್ನಲ್ಲೇ ನಟ, ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ಚಿತ್ರತಂಡ ಮಂಗಳೂರಿನ ಕದ್ರಿ ಬಾರೆಬೈಲಿನ ವಾರಾಹಿ ಪಂಜುರ್ಲಿ ದೈವಸ್ಥಾನದಲ್ಲಿ ಹರಕೆ ನೇಮ ಅರ್ಪಿಸಿದೆ. ನಿನ್ನೆ ರಾತ್ರಿಯಿಡೀ ಇಡೀ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದು ಪಂಜುರ್ಲಿ ದೈವದ ನೇಮವನ್ನು ವೀಕ್ಷಿಸಿದ್ದಾರೆ.

ಕಾಂತಾರ ಚಿತ್ರದ ಎರಡನೇ ಭಾಗದ ಚಿತ್ರೀಕರಣ ಸಂದರ್ಭದಲ್ಲಿ ಬಹಳಷ್ಟು ಎಡವಟ್ಟು ಮತ್ತು ಕಷ್ಟದ ಸನ್ನಿವೇಶಗಳನ್ನು ಚಿತ್ರತಂಡ ಎದುರಿಸಿತ್ತು. ಈ ವೇಳೆ, ವಾರಾಹಿ ಪಂಜುರ್ಲಿ ದೈವದ ಉತ್ಸವದ ಸಂದರ್ಭದಲ್ಲಿ ಬಂದಿದ್ದ ರಿಷಬ್ ಶೆಟ್ಟಿ ದಂಪತಿ, ಚಿತ್ರೀಕರಣಕ್ಕೆ ತೊಂದರೆಯಾಗದಂತೆ ಕೇಳಿಕೊಂಡಿದ್ದರು. ಆನಂತರ, ಕಳೆದ ಎಪ್ರಿಲ್ ತಿಂಗಳಲ್ಲಿ ಬಾರೆಬೈಲ್ ದೈವಸ್ಥಾನದಲ್ಲಿ ವಾರ್ಷಿಕ ಉತ್ಸವ ನಡೆಯುತ್ತಿದ್ದಾಗ ಆಗಮಿಸಿದ್ದ ರಿಷಬ್ ಶೆಟ್ಟಿ, ಚಿತ್ರೀಕರಣ ಪೂರ್ತಿಯಾಗಿದ್ದಾಗಿ ಹೇಳಿದ್ದಲ್ಲದೆ, ಹರಕೆ ನೇಮ ಅರ್ಪಿಸುವ ಬಗ್ಗೆಯೂ ಹೇಳಿಕೊಂಡಿದ್ದರು.

ಅದೇ ಸಂದರ್ಭದಲ್ಲಿ ನಿನ್ನ ಸಿನಿಮಾ ಲೋಕದಲ್ಲಿಯೇ ನಿನಗೆ ಸಾಕಷ್ಟು ಶತ್ರುಗಳಿದ್ದಾರೆ, ಇದಕ್ಕಾಗಿ ಜಾಗ್ರತೆ, ಎಚ್ಚರಿಕೆಯಲ್ಲಿ ಇರುವಂತೆ ದೈವ ಪಂಜುರ್ಲಿ ಎಚ್ಚರಿಕೆ ನುಡಿಯಾಡಿತ್ತು. ಕಾಂತಾರ ಚಿತ್ರೀಕರಣ ಸಂದರ್ಭ ಬಹಳಷ್ಟು ಬಾರಿ ರಿಷಬ್ ಶೆಟ್ಟಿಗೂ ಜೀವಕ್ಕೆ ಹಾನಿಯಾಗುವ ಸನ್ನಿವೇಶ ಎದುರಾಗಿತ್ತು. ಅಲ್ಲದೆ, ಎರಡು ಕಡೆ ಅಪಘಾತ, ಮತ್ತೊಬ್ಬ ಕಲಾವಿದರ ಜೀವ ಹೋಗಿದ್ದ ಸ್ಥಿತಿಯೂ ಆಗಿತ್ತು. ಇವೆಲ್ಲದರ ಬಳಿಕ ಕಳೆದ ಅಕ್ಟೋಬರ್ ನಲ್ಲಿ ಚಿತ್ರ ತೆರೆಗೆ ಬಂದು ಚಿತ್ರರಂಗದಲ್ಲಿ ಭಾರೀ ಸದ್ದು ಮಾಡಿತ್ತು. ಕಲೆಕ್ಷನ್ ನಲ್ಲಿಯೂ ಅತಿ ಹೆಚ್ಚು ಗಳಿಕೆಯ ಕನ್ನಡ ಚಿತ್ರವಾಗಿ ಮೂಡಿಬಂದಿತ್ತು.

ಇದೀಗ ದೈವಾರಾಧನೆಯ ಸೀಸನ್ ಆರಂಭದಲ್ಲಿಯೇ ಕದ್ರಿ ಬಾರೆಬೈಲಿನ ವಾರಾಹಿ ಪಂಜುರ್ಲಿ ದೈವಸ್ಥಾನದಲ್ಲಿ ನಿನ್ನೆ ರಾತ್ರಿ ಹೊಂಬಾಳೆ ಫಿಲಂಸ್ ತಂಡದ ವತಿಯಿಂದ ಹರಕ ನೇಮ ನಡೆಸಲಾಗಿದೆ. ರಿಷಬ್ ಶೆಟ್ಟಿ ಪತ್ನಿ, ಮಕ್ಕಳು ಸೇರಿದಂತೆ ನಿರ್ಮಾಪಕ ವಿಜಯ ಕಿರಗಂದೂರು, ನಿರ್ದೇಶಕ ಆನಂದರಾಮ್ ಸೇರಿದಂತೆ ಚಿತ್ರ ತಂಡದ ಹೆಚ್ಚಿನ ಸದಸ್ಯರು ಪಾಲ್ಗೊಂಡಿದ್ದರು. ಕಾಂತಾರ ಮೊದಲ ಚಿತ್ರದ ಬಳಿಕವೂ ರಿಷಬ್ ಶೆಟ್ಟಿ ಇದೇ ದೈವಸ್ಥಾನದಲ್ಲಿ ಹರಕೆ ನೇಮ ಕೊಟ್ಟಿದ್ದರು.

Ads on article

Advertise in articles 1

advertising articles 2

Advertise under the article