ಉಡುಪಿ :ಕಾಪು ಬಳಿ ಭೀಕರ ಅಪಘಾತ ; ಡೆಕೊರೇಶನ್ ಸಲಕರಣೆ ಒಯ್ಯುತ್ತಿದ್ದ ಟೆಂಪೋ ಪಲ್ಟಿ, ಐವರು ಕಾರ್ಮಿಕರು ಸಾವು..!!

ಉಡುಪಿ :ಕಾಪು ಬಳಿ ಭೀಕರ ಅಪಘಾತ ; ಡೆಕೊರೇಶನ್ ಸಲಕರಣೆ ಒಯ್ಯುತ್ತಿದ್ದ ಟೆಂಪೋ ಪಲ್ಟಿ, ಐವರು ಕಾರ್ಮಿಕರು ಸಾವು..!!

ಉಡುಪಿ: ಕಾಪು ಠಾಣೆ ವ್ಯಾಪ್ತಿಯ ಪಾಂಗಾಳ ಬ್ರಿಜ್ ಬಳಿಯ ಕೋತ್ತಲ್ ಕಟ್ಟೆ ಎಂಬಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತವಾಗಿದ್ದು ಡೆಕೋರೇಶನ್ ಸಲಕರಣೆಗಳನ್ನು ಟಾಟಾ 407 ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಐದು ಮಂದಿ ಮೃತಪಟ್ಟಿದ್ದಾರೆ. 

ಕಾಪು ಜಂಕ್ಷನ್ ಕಡೆಯಿಂದ ಕಾರ್ಮಿಕರು ಮತ್ತು ಡೆಕೋರೇಶನ್ ಸಲಕರಣೆಗಳನ್ನು ಹೊತ್ತುಕೊಂಡು ಟೆಂಪೋ ಅಂಬಲಪಾಡಿಯತ್ತ ತೆರಳುತ್ತಿತ್ತು. ಪಾಂಗಾಳ ಬಳಿಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದಾಗ ಎಡಭಾಗದ ಸರ್ವಿಸ್ ರಸ್ತೆಯ ಕಡೆಗೆ ಅತಿ ವೇಗದಿಂದ ಧಾವಿಸಿದ್ದು ಡಿವೈಡರ್ ದಾಟಿ ಪಲ್ಟಿಯಾಗಿ ಬಿದ್ದಿದೆ‌.‌ 


ಓಪನ್ ಟೆಂಪೋದಲ್ಲಿ ಸರಳು ಇನ್ನಿತರ ಸರಂಜಾಮುಗಳ ಮೇಲ್ಗಡೆ ಉತ್ತರ ಭಾರತ ಮೂಲದ ಕಾರ್ಮಿಕರು ಕುಳಿತುಕೊಂಡಿದ್ದರು. ಟೆಂಪೋ ಪಲ್ಟಿಯಾಗಿದ್ದರಿಂದ ಅವರ ಮೇಲ್ಗಡೆಯೇ ಟೆಂಪೋ ಬಿದ್ದಿದೆ. ಅಲ್ಲದೆ, ಚಾಲಕ ಮತ್ತು ಎದುರುಗಡೆಯೂ ಹಲವರಿದ್ದರು. ಒಟ್ಟು 12 ಜನ ಟೆಂಪೋದಲ್ಲಿದ್ದರು ಎನ್ನಲಾಗುತ್ತಿದ್ದು 4 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಚಾಲಕ ಸೇರಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು ಒಟ್ಟು 5 ಮಂದಿ ಮೃತಪಟ್ಟಿದ್ದಾರೆಂಬ ಮಾಹಿತಿ ಇದೆ. ಎಲ್ಲರನ್ನೂ ಉಡುಪಿ ತಾಲೂಕು ಆಸ್ಪತ್ರೆಗೆ ತರಲಾಗಿದೆ.  


ಮೃತರಲ್ಲಿ ಉತ್ತರ ಪ್ರದೇಶ, ಬಿಹಾರದವರು ಎಂಬ ಮಾಹಿತಿಗಳಿದ್ದು ಹೆಸರು ಗೊತ್ತಾಗಿಲ್ಲ. ಸ್ಥಳಕ್ಕೆ ಕಾಪು ಸರ್ಕಲ್ ಇನ್ಸ್ ಪೆಕ್ಟರ್ ಅಂಜತ್ ಅಲಿ, ಕಾಪು ಎಸ್ಐ ತೇಜಸ್ವಿ ಬಂದಿದ್ದು ಸರ್ವಿಸ್ ರಸ್ತೆಗೆ ಬಿದ್ದಿದ್ದ ವಾಹನವನ್ನು ತೆರವು ಮಾಡುವಲ್ಲಿ ವ್ಯಸ್ತರಾಗಿದ್ದಾರೆ. ಮಧ್ಯಾಹ್ನ 3.20 ಗಂಟೆಗೆ ಅಪಘಾತ ನಡೆದಿದೆ. ಉಡುಪಿ ಅಂಬಲಪಾಡಿ ಗಾರ್ಡನ್ ನಲ್ಲಿ ಮದುವೆ ಕಾರ್ಯಕ್ರಮಕ್ಕಾಗಿ ಡೆಕೋರೇಶನ್ ಸಲಕರಣೆ ಗಳನ್ನು ಟೆಂಪೋದಲ್ಲಿ ಒಯ್ಯುತ್ತಿದ್ದರು. ರಾತ್ರಿ ಕೆಲಸ ಆಗಬೇಕಿದ್ದರಿಂದ ರಾತ್ರಿ ಕಾರ್ಮಿಕರ ಊಟಕ್ಕೆಂದು ಅನ್ನ, ಸಾಂಬಾರನ್ನು ಒಯ್ಯುತ್ತಿದ್ದರು.‌ ಎಲ್ಲವೂ ರಸ್ತೆಗೆ ಬಿದ್ದಿದೆ. ಟೆಂಪೋ ಹಳೆಯದಾಗಿದ್ದು ಒಂದು ಟಯರ್ ಅಂತೂ ಪೂರ್ತಿ ಸವೆದಿತ್ತು. ಅತಿ ವೇಗದಲ್ಲಿದ್ದಾಗ ಬ್ರೇಕ್ ಸಿಗದೆ ಪಲ್ಟಿಯಾಗಿದೆ.

Ads on article

Advertise in articles 1

advertising articles 2

Advertise under the article