ಮಂಗಳೂರು :ಬಿ.ಸಿ. ರೋಡ್ ಬಳಿ ಭೀಕರ ಅಪಘಾತ ; ಉಡುಪಿ ಕೃಷ್ಣ ಮಠಕ್ಕೆ ಹೊರಟಿದ್ದ ಬೆಂಗಳೂರಿನ ಒಂದೇ ಕುಟುಂಬದ ಮೂವರು ಸಾವು...!!

ಮಂಗಳೂರು :ಬಿ.ಸಿ. ರೋಡ್ ಬಳಿ ಭೀಕರ ಅಪಘಾತ ; ಉಡುಪಿ ಕೃಷ್ಣ ಮಠಕ್ಕೆ ಹೊರಟಿದ್ದ ಬೆಂಗಳೂರಿನ ಒಂದೇ ಕುಟುಂಬದ ಮೂವರು ಸಾವು...!!

ಮಂಗಳೂರು : ಬೆಂಗಳೂರಿನಿಂದ ಉಡುಪಿಗೆ ತೆರಳುತ್ತಿದ್ದ ಇನ್ನೋವಾ ಕಾರು ಬಿಸಿ ರೋಡ್ ಬಳಿ ಹೆದ್ದಾರಿ ಮಧ್ಯೆ ಸರ್ಕಲ್ ಗೆ ಡಿಕ್ಕಿಯಾಗಿದ್ದು ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 

ಬೆಂಗಳೂರು ಪೀಣ್ಯ ನಿವಾಸಿಗಳಾದ ರವಿ (64), ರಮ್ಯ (23) ಹಾಗೂ ನಂಜಮ್ಮ ( 75) ಮೃತರು. ಇವರೊಂದಿಗಿದ್ದ ಕೀರ್ತಿ, ಸುಶೀಲಾ, ಬಿಂದು ಹಾಗೂ ಪ್ರಶಾಂತ್ ಗಂಭೀರ ಗಾಯಗೊಂಡಿದ್ದಾರೆ. ಚಾಲಕ ಸುಬ್ರಹ್ಮಣ್ಯ ಹಾಗೂ ಕಿರಣ್ ಅಲ್ಪಸ್ವಲ್ಪ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.‌ 

ರವಿ ಮತ್ತು ಕುಟುಂಬಸ್ಥರು ಬೆಂಗಳೂರಿನಿಂದ ಇನ್ನೋವಾ ಕಾರಿನಲ್ಲಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಕೃಷ್ಣನ ದರ್ಶನಕ್ಕೆಂದು ಹೊರಟಿದ್ದರು. ಒಂಬತ್ತು ಮಂದಿಯಲ್ಲಿ ರಮ್ಯಾ ಅವರು ಬೆಂಗಳೂರಿನ ಪೊಲೀಸ್ ಅಧಿಕಾರಿಯೊಬ್ಬರ ಪತ್ನಿ ಎಂಬ ಮಾಹಿತಿ ಇದೆ.‌ ಮುಂಜಾನೆ ಸುಮಾರು 4.40ರ ಸಮಯದಲ್ಲಿ ಬೆಂಗಳೂರಿನ ಕಡೆಯಿಂದ ಬರುತ್ತಿದ್ದ ಇನ್ನೋವಾ ಕಾರು ನೇತ್ರಾವತಿ ಸೇತುವೆ ದಾಟಿ ಬಿ.ಸಿ.ರೋಡಿಗೆ ತಲುಪುವ ಮೊದಲೇ ಹೆದ್ದಾರಿ ಮಧ್ಯದಲ್ಲಿರುವ  ಸರ್ಕಲ್ ಗೆ ಡಿಕ್ಕಿ ಹೊಡೆದಿದ್ದು ಮುಂಭಾಗ ನಜ್ಜುಗುಜ್ಜಾಗಿದೆ.

ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಉಳಿದ ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅವೈಜ್ಞಾನಿಕ ಮಾದರಿಯ ಸರ್ಕಲ್ ಅಪಘಾತಕ್ಕೆ ಕಾರಣ ಎಂಬ ಆರೋಪ ಕೇಳಿಬಂದಿದೆ. ಬಿಸಿರೋಡು - ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ಬೆಳ್ತಂಗಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಮಧ್ಯೆ ದೊಡ್ಡದಾಗಿ ಸರ್ಕಲ್ ಮಾಡಿದ್ದು ವೇಗವಾಗಿ ಬರುವ ವಾಹನಗಳಿಗೆ ಅಡ್ಡಿಯಾಗಿ ಪರಿಣಮಿಸಿದೆ. ಅಪಘಾತದ ಬಗ್ಗೆ ಬಂಟ್ವಾಳ ಸಂಚಾರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article