ತಮಿಳುನಾಡು :ಕಾಡುಹಂದಿಗಳ ನಿಯಂತ್ರಿಸಲು ವಿದ್ಯುತ್ ಬೇಲಿ ನಿರ್ಮಿಸುತ್ತಿದ್ದಾಗ ಶಾಕ್; ರೈತ ಸ್ಥಳದಲ್ಲೇ ಸಾವು..!!
ತಮಿಳುನಾಡು: ಬೆಳೆಗಳಿಗೆ ಹಾನಿ ಮಾಡುತ್ತಿದ್ದ ಕಾಡುಹಂದಿಗಳನ್ನು ನಿಯಂತ್ರಿಸಲು ವಿದ್ಯುತ್ ಬೇಲಿ ನಿರ್ಮಿಸುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ರೈತನೋರ್ವ ಸಾವನ್ನಪ್ಪಿರುವ ಘಟನೆ ತೂತುಕುಡಿ ಜಿಲ್ಲೆಯ ಕಾಯತ್ತಾರು ಬಳಿ ಸಂಭವಿಸಿದೆ. ವಡಿವೇಲ್ (65) ಮೃತ ವ್ಯಕ್ತಿ.
ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಸಾವು: ಆಥಿಕುಲಂನ ಸುಡಲೈ ಕೊಯಿಲ್ ಬೀದಿಯ ನಿವಾಸಿಯಾದ ವಡಿವೇಲ್ಗೆ ಪತ್ನಿ ಸುಬ್ಬುತಾಯಿ ಹಾಗೂ ಐವರು ಹೆಣ್ಣು ಮಕ್ಕಳಿದ್ದಾರೆ. ಅದೇ ಪ್ರದೇಶದ ನಿವಾಸಿ ಕುಪ್ಪು ಎಂಬವರ ಭೂಮಿಯನ್ನು ಗುತ್ತಿಗೆಗೆ ತೆಗೆದುಕೊಂಡು ವಡಿವೇಲ್ ಕೃಷಿ ಮಾಡುತ್ತಿದ್ದರು. ಈ ಬಾರಿ ಮೆಕ್ಕೆಜೋಳ ಕೃಷಿ ಮಾಡಿದ್ದರು. ಆದರೆ, ಕಾಡುಹಂದಿಗಳು ರಾತ್ರಿಯಲ್ಲಿ ಗದ್ದೆಗೆ ನುಗ್ಗಿ ಬೆಳೆಗಳಿಗೆ ಭಾರಿ ಹಾನಿ ಮಾಡುತ್ತಿದ್ದವು. ಇವುಗಳ ನಿಯಂತ್ರಣಕ್ಕಾಗಿ ವಡಿವೇಲ್ ಮರಕ್ಕೆ ವಿದ್ಯುತ್ ದೀಪಗಳನ್ನು ಹಾಕಿದ್ದರು. ಆದರೂ, ಕಾಡುಹಂದಿಗಳು ಬೆಳೆಗಳಿಗೆ ಹಾನಿ ಮಾಡುತ್ತಲೇ ಇದ್ದವು. ಪರಿಣಾಮ, ವಡಿವೇಲು ನಿನ್ನೆ (ನ. 28) ಬೆಳೆಗಳನ್ನು ರಕ್ಷಿಸಲು ಮುಳ್ಳುತಂತಿಯನ್ನು ಬಳಸಿ ಮೆಕ್ಕೆಜೋಳ ಬೆಳೆಗಳ ಸುತ್ತಲೂ ವಿದ್ಯುತ್ ಬೇಲಿ ನಿರ್ಮಿಸುವ ಕೆಲಸದಲ್ಲಿ ತೊಡಗಿದ್ದರು. ಈ ವೇಳೆ ಮುಳ್ಳುತಂತಿಯಿಂದ ವಿದ್ಯುತ್ ಸ್ಪರ್ಶಿಸಿ ವಡಿವೇಲ್ ಸ್ಥಳದಲ್ಲೇ ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ. ವಡಿವೇಲ್ ಕುಟುಂಬಕ್ಕೆ ಆಧಾರವಾಗಿದ್ದ. ಪತಿ ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.
ತಡರಾತ್ರಿಯಾದರೂ ಮನೆಗೆ ಹಿಂತಿರುಗ ಪತಿ: ಸಾಮಾನ್ಯವಾಗಿ ರಾತ್ರಿ 10 ಗಂಟೆಗೆ ಮನೆಗೆ ಬರುತ್ತಿದ್ದ ಪತಿ ವಡಿವೇಲ್, ನಿನ್ನೆ ತಡರಾತ್ರಿಯಾದರೂ ಮನೆಗೆ ಹಿಂತಿರುಗಲಿಲ್ಲ. ಅನುಮಾನಗೊಂಡು ಪತ್ನಿ ಸುಬ್ಬುತಾಯಿ ಮಳೆಯಲ್ಲಿ ಪತಿಯನ್ನು ಹುಡುಕಲು ಗದ್ದೆಗೆ ತೆರಳಿದ್ದಳು. ಅಲ್ಲಿ, ಕಾಡುಹಂದಿಗಾಗಿ ಅಳವಡಿಸಲಾಗಿದ್ದ ವಿದ್ಯುತ್ ತಂತಿಯಲ್ಲಿ ವಡಿವೇಲ್ ಸಿಲುಕಿಕೊಂಡಿರುವುದನ್ನು ಗಮನಿಸಿದ್ದಾಳೆ. ತಕ್ಷಣ, ಸುಬ್ಬುತಾಯಿ ಮೋಟಾರ್ ಇದ್ದ ಕೋಣೆಗೆ ಹೋಗಿ, ಪ್ರವಹಿಸುತ್ತಿದ್ದ ವಿದ್ಯುತ್ ಅನ್ನು ಕಡಿತಗೊಳಿಸಿ ತನ್ನ ಪತಿಯನ್ನು ಮೇಲಕ್ಕೆತ್ತಿದ್ದಾಳೆ.
ಆದರೆ, ಅಷ್ಟರಲ್ಲೇ ವಿದ್ಯುತ್ ಸ್ಪರ್ಶದಿಂದ ಆತ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ನಂತರ, ಸಂಬಂಧಿಕರಿಗೆ ಮಾಹಿತಿ ನೀಡಿದ್ದು, ಸಂಬಂಧಿಕರು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ಪಡೆದು ಸ್ಥಳಕ್ಕೆ ತಲುಪಿದ ಕಾಯಥರ್ ಪೊಲೀಸರು ಮತ್ತು ವಿದ್ಯುತ್ ಮಂಡಳಿ ಅಧಿಕಾರಿಗಳು ವಡಿವೇಲು ಅವರ ಶವವನ್ನು ಹೊರತೆಗೆದು ಶವಪರೀಕ್ಷೆಗಾಗಿ ಕೋವಿಲ್ಪಟ್ಟಿ ಮುಖ್ಯ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಕಾಯಥರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ.