ಬೆಂಗಳೂರು :ಹೊಸಕೋಟೆ ಪಾಳುಬಿದ್ದ ಮನೆಯಲ್ಲಿ ಸಿಕ್ಕಿತ್ತು ಕೋಟಿ ಕೋಟಿ ನೋಟಿನ ಕಂತೆ ; ದರೋಡೆ ಬಳಿಕ ಹಣದ ಪೆಟ್ಟಿಗೆ ಕೆರೆಗೆಸೆದು ಹಣದ ಕಂತೆ ಬಚ್ಚಿಟ್ಟು ತೆರಳಿದ ತಂಡ !

ಬೆಂಗಳೂರು : ಬೆಂಗಳೂರಿನಲ್ಲಿ ನಡೆದ ದರೋಡೆ ಪ್ರಕರಣದ ಮಾಹಿತಿಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ದರೋಡೆಗೈದು ಒಯ್ದಿದ್ದ ಹಣವನ್ನು ಆರೋಪಿಗಳು ಹೊಸಕೋಟೆಯ ಪಾಳು ಮನೆಯಲ್ಲಿ ಬಚ್ಚಿಟ್ಟು ಅಲ್ಲಿಂದ ಬೇರೆ ಕಾರಿನಲ್ಲಿ ಪರಾರಿಯಾಗಿದ್ದರು ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ.
ಪೊಲೀಸರ ಶೋಧ ಕಾರ್ಯ ವೇಳೆ ಹೊಸಕೋಟೆ ಕೆರೆ ಬಳಿಯಲ್ಲಿ ಹಣ ತುಂಬಿಸಲಾಗುವ ಪೆಟ್ಟಿಗೆಗಳನ್ನು ಎಸೆದಿದ್ದು ಕಂಡುಬಂದಿತ್ತು. ಅನುಮಾನದ ಮೇಲೆ ಅಲ್ಲಿಯೇ ಪಾಳುಬಿದ್ದ ಮನೆಯ ಬಾಗಿಲು ತೆರೆದು ನೋಡಿದಾಗ ಹಣ ಸಿಕ್ಕಿತ್ತು. ಆರೋಪಿಗಳು ಕಾರು ತೆಗೆದುಕೊಂಡು ಹೊಸಕೋಟೆ ಟೋಲ್ಗೆ ಹೋಗದೇ ಕೆರೆ ಬಳಿ ಹೋಗಿದ್ದರು. ಕೆರೆ ಬಳಿ ಹಣ ಬಚ್ಚಿಟ್ಟು ಬಳಿಕ ಚಿತ್ತೂರು ಕಡೆ ತೆರಳಿದ್ದರು. ಆರೋಪಿಗಳನ್ನು ಬಂಧಿಸಿ ಬೆಂಡೆತ್ತಿದಾಗ ಹೊಸಕೋಟೆಯ ಪಾಳು ಮನೆಯಲ್ಲಿ ಹಣ ಇಟ್ಟಿರೋದಾಗಿ ಬಾಯಿ ಬಿಟ್ಟಿದ್ದರು.


ದರೋಡೆ ತಂಡದ ಸಿಎಂಎಸ್ ವಾಹನದ ಸಿಬಂದಿ ಗೋಪಿಗೆ ತಿಂಗಳಿಗೆ 15 ಸಾವಿರ ರೂಪಾಯಿ ಸಂಬಳ ಸಿಗುತ್ತಿತ್ತು. ದಿನನಿತ್ಯ ಕೋಟ್ಯಂತರ ರೂಪಾಯಿ ಹಣ ನೋಡುತ್ತಿದ್ದ ಗೋಪಿಗೆ, ಹೇಗಾದ್ರು ಒಂದಿಷ್ಟು ಹಣ ಲಪಟಾಯಿಸಬೇಕೆಂಬ ದುರಾಸೆ ಬಂದಿತ್ತು. ಎಟಿಎಂ ತುಂಬಿಸಲು ಹಣ ಸಾಗಿಸುವುದು ತಿಳಿದಿದ್ದ ಗೋಪಿ ಮತ್ತು ಮಾಜಿ ಉದ್ಯೋಗಿ ಕ್ಸೇವಿಯರ್ ಜೊತೆ ಸೇರಿ ದರೋಡೆಗೆ ಪ್ಲಾನ್ ಮಾಡಲು ಕಾನ್ಸ್ಟೇಬಲ್ ಅಣ್ಣಪ್ಪನಿಗೆ ತಿಳಿಸಿದ್ದರು.
ಬಹಳಷ್ಟು ಸ್ಟಡಿ ಮಾಡಿದ ಬಳಿಕ ಕಾನ್ಸ್ಟೇಬಲ್ ಅಣ್ಣಪ್ಪ ದರೋಡೆಗೆ ಪ್ಲಾನ್ ಮಾಡಿದ್ದ. ಕೆಲಸವಿಲ್ಲದೆ ಕುಳಿತಿದ್ದ ರವಿ, ರಾಕೇಶ್, ನವೀನ್ ತಂಡದಲ್ಲಿ ಸೇರಿಕೊಂಡಿದ್ದರು. ಪೊಲೀಸ್ ನಮ್ಮ ಜೊತೆಯಲ್ಲೇ ಇದ್ದಾನೆ ಎಂದು ತಂಡ ದರೋಡೆಗೆ ಸಜ್ಜಾಗಿತ್ತು. ಪಕ್ಕಾ ಪ್ಲಾನ್ ಇದೆ, ಸಿಕ್ಕಿ ಬಿಳಲ್ಲ ಅಂತ ಪೊಲೀಸಪ್ಪನ ಮಾತಿನಂತೆ ಹಾಡಹಗಲೇ ದರೋಡೆಗೆ ಮುಂದಾಗಿದ್ದರು.
ಹಾವೇರಿ ಜಿಲ್ಲೆ ವೀರಾಪುರ ತಾಲೂಕಿನ ಹಳೇ ವೀರಾಪುರ ಗ್ರಾಮದ ಅಣ್ಣಪ್ಪ ನಾಯಕ್ 2018ರಲ್ಲಿ ಪೊಲೀಸ್ ಇಲಾಖೆ ಸೇರಿದ್ದ. ಮೊದಲು ಬಾಣಸವಾಡಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದು, ಒಂದೂವರೆ ವರ್ಷದಿಂದ ಗೋವಿಂದಪುರ ಠಾಣೆಯಲ್ಲಿದ್ದ. ವೃತ್ತಿ ಜೀವನದಲ್ಲಿ ಅಣ್ಣಪ್ಪ ನಾಯಕ್ ಹಿನ್ನೆಲೆ ಉತ್ತಮವಾಗಿರಲಿಲ್ಲ. ಅಪರಾಧ ಪ್ರಕರಣಗಳಲ್ಲಿ ಪತ್ತೆ ಮಾಡಲು ಹೋಗಿ ಆರೋಪಿಗಳಿಂದಲೇ ವಸೂಲಿ ಮಾಡ್ತಿದ್ದುದು ಪತ್ತೆಯಾಗಿತ್ತು.