ಬೆಂಗಳೂರು: ಭಯಾನಕ ದರೋಡೆ ; ಸಿಎಂಎಸ್ ಸಂಸ್ಥೆಯ ಸಿಬ್ಬಂದಿಗಳ ತೀವ್ರ ವಿಚಾರಣೆ, ಕೋಟಿ ದರೋಡೆ ಹಿಂದೆ ಯಾರಿದ್ದಾರೆ, ಗನ್ ಇದ್ದರೂ ಫೈರಿಂಗ್ ಮಾಡಿಲ್ಲವೇಕೆ ?

ಬೆಂಗಳೂರು, ನ 20 : ಜಯನಗರದ ಡೈರಿ ಸರ್ಕಲ್ ಬಳಿ ನಡೆದ ಎಟಿಎಂ ಕ್ಯಾಶ್ ರಾಬರಿ ಪ್ರಕರಣ ರಾಜ್ಯದ ಗಮನ ಸೆಳೆದಿದ್ದು, ಬೆಂಗಳೂರು ಪೊಲೀಸ್ ಇಲಾಖೆಗೆ ಈ ಪ್ರಕರಣ ದೊಡ್ಡ ಸವಾಲಾಗಿದೆ.
ದಕ್ಷಿಣ ವಿಭಾಗದ ಪೊಲೀಸರು ಪ್ರಕರಣ ದಾಖಲಾದಾಗಿನಿಂದ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ನಗರ ಪೊಲೀಸ್ ಕಮಿಷನರ್ ಈ ಪ್ರಕರಣಕ್ಕೆ ವಿಶೇಷ ಪ್ರಾಮುಖ್ಯತೆ ನೀಡಿದ್ದು, ತನಿಖೆ ಚುರುಕುಗೊಂಡಿದೆ. ಈ ರಾಬರಿ ಗ್ಯಾಂಗ್ ಯಾರು, ವಾಹನಗಳು ಯಾವ ದಿಕ್ಕಿಗೆ ಹೋದವು, ಮತ್ತು ಒಳಗಿನ ಸಹಾಯ ಇತ್ತೇ ಎಂಬ ಅನುಮಾನಗಳಿಗೆ ಉತ್ತರ ಹುಡುಕಲು ಮೂರು-ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ.



ಪೊಲೀಸರ ಪರಿಶೀಲನೆ ಮುಂದುವರೆದಿದೆ. ಪ್ರಾಥಮಿಕವಾಗಿ ಸಿಎಂಎಸ್ ಸಂಸ್ಥೆಯ ಸಿಬ್ಬಂದಿ ತನಿಖೆಯ ಪ್ರಮುಖ ಪಾತ್ರವಾಗಿದ್ದಾರೆ. ಘಟನೆಗೂ ಮುನ್ನ ಮತ್ತು ನಂತರ ಅವರ ಚಲನವಲನದಲ್ಲಿ ಯಾವುದೇ ಅನುಮಾನಾಸ್ಪದ ಅಂಶವಿದೆಯೇ ಎಂಬುದನ್ನು ಪೊಲೀಸರು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ. ಸಿಬ್ಬಂದಿ ಮನೆ ಬಿಟ್ಟು ಕರ್ತವ್ಯಕ್ಕೆ ಬಂದಾಗಿನಿಂದ ದರೋಡೆ ಸಂಭವಿಸುವವರೆಗೆ ಅವರ ಪ್ರತೀ ಚಲನವಲನಗಳನ್ನು ಪೊಲೀಸರು ಟ್ರೇಸ್ ಮಾಡುತ್ತಿದ್ದಾರೆ. ಜೊತೆಗೆ ಕಳೆದ ಕೆಲವು ದಿನಗಳಿಂದ ಅವರು ಯಾರೊಂದಿಗೆ ಸಂಪರ್ಕದಲ್ಲಿದ್ದರು, ಯಾರನ್ನು ಭೇಟಿ ಮಾಡಿದ್ದರು, ಯಾರ್ಯಾರನ್ನು ಭೇಟಿ ಮಾಡಿದ್ದರು ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕಲು ಮೊಬೈಲ್ ಫೋನ್ಗಳ ಕಾಲ್ ಡೀಟೇಲ್ಸ್, ವಾಟ್ಸಪ್ ಕರೆಗಳು, ಸ್ಥಳ ಮಾಹಿತಿ, ಸೇರಿ ಎಲ್ಲಾ ಡೇಟಾವನ್ನು ಪರಿಶೀಲನೆಗೆ ಒಳಪಡಿಸಲಾಗಿದೆ. ದರೋಡೆಕೋರರೊಂದಿಗೆ ಸಿಎಂಎಸ್ ಸಿಬ್ಬಂದಿ ಯಾರಾದರೂ ಸಂಪರ್ಕದಲ್ಲಿದ್ದಾರೇ ಎಂಬುದು ಈಗ ತನಿಖೆಯ ಪ್ರಮುಖ ಆಯಾಮವಾಗಿದೆ.
ಘಟನೆ ನಡೆದ ಒಂದು ಗಂಟೆಯ ನಂತರ ನಗರದ ಹೊರವಲಯ ಮತ್ತು ಎಕ್ಸಿಟ್ ಪಾಯಿಂಟ್ಗಳು ಮೂಲಕ ಸಂಚರಿಸಿದ ಎಲ್ಲ ವಾಹನಗಳ ಮೇಲೂ ಪೊಲೀಸರು ಕಣ್ಣಿಟ್ಟಿದ್ದಾರೆ. ವಿಶೇಷವಾಗಿ ಇನೋವಾ ಕಾರುಗಳ ಮೇಲೆ ಹೆಚ್ಚು ಸಂಶಯ ವ್ಯಕ್ತವಾಗಿದ್ದು, ನಗರದಿಂದ ಹೊರಟ ವಾಹನಗಳ ಪಟ್ಟಿಯನ್ನು ಸಂಗ್ರಹಿಸಿ ಪರಿಶೀಲನೆ ನಡೆಸಲಾಗುತ್ತಿದೆ. ಹೊಸಕೋಟೆ, ಹೊಸೂರು ಮಾರ್ಗಗಳಲ್ಲಿನ ಚೆಕ್ಪೋಸ್ಟ್ಗಳಲ್ಲಿ ಸಂಚಾರಿ ಪೊಲೀಸರು ಮತ್ತು ಸ್ಥಳೀಯ ಪೊಲೀಸರು ಜಂಟಿಯಾಗಿ ವಾಹನ ತಪಾಸಣೆ ಮುಂದುವರೆಸಿದ್ದಾರೆ
ಘಟನೆ ನಡೆದು 1 ಗಂಟೆಯಾದ್ರೂ ಪೊಲೀಸರಿಗೆ ನೀಡಿಲ್ಲ ಮಾಹಿತಿ!
ಬುದುವಾರ ಮಧ್ಯಾಹ್ನ 1 ಗಂಟೆ 15 ನಿಮಿಷಕ್ಕೆ ದುಷ್ಕರ್ಮಿಗಳು ಬರೋಬ್ಬರಿ 7 ಕೋಟಿ 11 ಲಕ್ಷ ರೂಪಾಯಿ ದರೋಡೆ ಮಾಡಿದ್ದಾರೆ. ಆದರೆ 2.15 ನಿಮಿಷದ ತನಕ ಪೊಲೀಸರಿಗೆ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಸ್ಥಳೀಯರು ಹೀಗೊಂದು ದೊಡ್ಡ ಮಟ್ಟದಲ್ಲಿ ರಾಬರಿ ಆಗಿದೆ ಅಂತ ಕಂಟ್ರೋಲ್ ರೂಮ್ಗೆ ಮಾಹಿತಿ ನೀಡಿದ್ದಾರೆ. ರಾಬರಿ ಆದ ವಾಹನ ಎಲ್ಲಿಗೆ ಹೋಯ್ತು ಅನ್ನೋ ಮಾಹಿತಿ ಪೊಲೀಸರಿಗೆ ಇರಲಿಲ್ಲ. ಆದ್ರೂ ಎಲ್ಲಾ ಠಾಣಾ ವ್ಯಾಪ್ತಿಯಲ್ಲೂ ಹುಡುಕಾಟ ಮಾಡಿದ್ದಾರೆ. ಆಗ ಡೈರಿ ಸರ್ಕಲ್ ಫ್ಲೈ ಓವರ್ ಮೇಲೆ ವಾಹನ ಪತ್ತೆಯಾಗಿದೆ. ಕೊನೆಗೆ 2.15ರ ಸುಮಾರಿಗೆ ಡೈರಿ ಸರ್ಕಲ್ ಬಳಿ ಎಟಿಎಂ ವಾಹನ ಪತ್ತೆಯಾಗಿತ್ತು. ಈ ವೇಳೆ ವಾಹನದ ಬಳಿಯೇ ನಾಲ್ವರು CMS ಸಿಬ್ಬಂದಿ ಇದ್ರು.

ಗನ್ ಇದ್ದರೂ ಫೈರಿಂಗ್ ಮಾಡಿಲ್ಲವೇಕೆ?
ಪೊಲೀಸರು ಕೇಳಿದ ವೇಳೆಯೇ ದರೋಡೆ ಬಗ್ಗೆ ಏಜೆನ್ಸಿ ಸಿಬ್ಬಂದಿ ಬಾಯ್ಬಿಟ್ಟಿದ್ದಾರೆ. ಹೀಗಾಗಿ ಸಿಎಂಎಸ್ ಏಜೆನ್ಸಿಯ ನಾಲ್ವರ ಮೇಲೆ ಪೊಲೀಸರಿಗೆ ಅನುಮಾನ ಮೂಡಿದ್ದು, ಸದ್ಯ ನಾಲ್ವರನ್ನು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗಿದೆ. ಬಂದೂಕು ಇದ್ದರು ಯಾಕೆ ಸಿಬ್ಬಂದಿ ಫೈರ್ ಮಾಡಿಲ್ಲ ಅಂತ ಇಬ್ಬರು ಸೆಕ್ಯೂರಿಟಿ ಗಾರ್ಡ್ಗಳ ವಿಚಾರಣೆ ನಡೆಸಲಾಗಿದೆ. ಜೊತೆಗೆ ಸಿಎಂಎಸ್ ಏಜೆನ್ಸಿಯ ವಾಹನ ಚಾಲಕನನ್ನೂ ಘಟನಾ ಸ್ಥಳಕ್ಕೆ ಕರೆತಂದು ಪೊಲೀಸರು ವಿಚಾರಣೆ ನಡೆಸಿದ್ರು.
ದರೋಡೆಕೋರರು ಮೊಬೈಲ್ ಕಿತ್ತುಕೊಂಡಿದ್ರು
1 ಗಂಟೆ ವೇಳೆಗೆ ಬ್ರಾಂಚ್ ಮ್ಯಾನೇಜರ್ಗೆ ಕರೆ ಮಾಡಿದ್ದಾರೆ. ಬಳಿಕ ಡಿಜಿ ಕಂಟ್ರೋಲ್ ರೂಂಗೆ, ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಹುಡುಕಾಟ ಮಾಡಿದ್ದಾರೆ. ಯಾಕೆ ತಡ ಆಯ್ತು ಅಂದ್ರೆ ರಾಬರ್ಸ್ ಮೊಬೈಲ್ ಕಸಿದುಕೊಂಡಿದ್ರು. ಹಣ ರಾಬರಿ ಮಾಡೋವರೆಗೂ ಮೊಬೈಲ್ ಕೊಟ್ಟಿಲ್ಲ. ಹೀಗಾಗಿ ಅವರು ಬ್ರಾಂಚ್ ಮ್ಯಾನೇಜರ್ ಗೂ ಮಾಹಿತಿ ನೀಡಲು ಆಗಿಲ್ಲ ಅಂತ ಸಮಜಾಯಿಸಿ ನೀಡಿದ್ರು.