ಚಿಕ್ಕಬಳ್ಳಾಪುರ :ಕುಡಿದು ಬಂದದ್ದನ್ನು ಪ್ರಶ್ನಿಸಿದ್ದಕ್ಕೆ ಹೆಂಡತಿ ಜೀವವನ್ನೇ ತೆಗೆದ ಗಂಡ.
Monday, November 17, 2025

ಚಿಕ್ಕಬಳ್ಳಾಪುರ: ಕುಡಿದು ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಕುತ್ತಿಗೆ ಬಿಗಿದು ಪತಿಯೇ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಹುದುಗೂರು ಗ್ರಾಮದಲ್ಲಿ ನಡೆದಿದೆ.
ಪಾವನಿ(30) ಮೃತ ದುರ್ದೈವಿಯಾಗಿದ್ದು, ಕೊಲೆ ಮಾಡಿದ ಪತಿ ರಾಘವೇಂದ್ರನನ್ನು ಪೊಲೀಸರು ಬಂಧಿಸಿದ್ದಾರೆ.
ಐದು ವರ್ಷಗಳ ಹಿಂದೆ ಪಾವನಿ ಹಾಗೂ ರಾಘವೇಂದ್ರ ಮದುವೆಯಾಗಿದ್ದರು. ಮೊನ್ನೆ ರಾಘವೇಂದ್ರ ಊರಿಗೆ ಬಂದಿದ್ರೂ ಮನೆಗೆ ಬಂದಿರಲಿಲ್ಲ. ಊರಿಗೆ ಬಂದ್ರೂ ಯಾಕೆ ಮನೆಗೆ ಬಂದಿಲ್ಲ ಎಂದು ಪಾವನಿ ಪ್ರಶ್ನಿಸಿದ್ದು, ಕುಡ್ಕೊಂಡು ಎಲ್ಲೋ ಬಿದ್ದಿರ್ತಿಯಾ ಮನೆಗೆ ಬರಲು ಆಗಲ್ವಾ ಎಂದಿದ್ದಾಳೆ. ಈ ವೇಳೆ ಕೋಪಗೊಂಡ ರಾಘವೇಂದ್ರ ಪತ್ನಿ ಜೊತೆ ಗಲಾಟೆ ಶುರುಮಾಡಿದ್ದಾನೆ. ಗಲಾಟೆ ವಿಕೋಪಕ್ಕೆ ಹೋಗಿದ್ದು, ಕುತ್ತಿಗೆಗೆ ವೇಲ್ ಬಿಗಿದು ಪತ್ನಿ ಪಾವನಿಯ ಕೊಲೆ ಮಾಡಿದ್ದಾನೆ. ಅತ್ತ ತಾಯಿ ಮೃತಪಟ್ಟಿದ್ದರೆ ಇತ್ತ ತಂದೆ ಜೈಲು ಸೇರಿದ್ದು, 4 ವರ್ಷದ ಗಂಡು ಮಗು ಅನಾಥವಾಗಿದೆ.