ಬೆಂಗಳೂರು: ಮೆಗಾ ದರೋಡೆ ಭೇದಿಸಿದ ಬೆಂಗಳೂರು ಪೊಲೀಸರು ; ಸಿಎಂಎಸ್ ಸೆಕ್ಯುರಿಟೀಸ್ ಸಿಬಂದಿಯೇ ಕಳ್ಳರು, ಪೊಲೀಸ್ ಪೇದೆ ಸಹಿತ ಮೂವರ ಸೆರೆ, 5.76 ಕೋಟಿ ವಶಕ್ಕೆ, ಮೂರು ತಿಂಗಳಿನಿಂದ ಕೃತ್ಯಕ್ಕೆ ಸಂಚು !

ಬೆಂಗಳೂರು: ಮೆಗಾ ದರೋಡೆ ಭೇದಿಸಿದ ಬೆಂಗಳೂರು ಪೊಲೀಸರು ; ಸಿಎಂಎಸ್ ಸೆಕ್ಯುರಿಟೀಸ್ ಸಿಬಂದಿಯೇ ಕಳ್ಳರು, ಪೊಲೀಸ್ ಪೇದೆ ಸಹಿತ ಮೂವರ ಸೆರೆ, 5.76 ಕೋಟಿ ವಶಕ್ಕೆ, ಮೂರು ತಿಂಗಳಿನಿಂದ ಕೃತ್ಯಕ್ಕೆ ಸಂಚು !

ಬೆಂಗಳೂರು: ಎಟಿಎಂ ಯಂತ್ರಗಳಿಗೆ ತುಂಬಿಸಲು ಒಯ್ಯುತ್ತಿದ್ದ 7.11 ಕೋಟಿ ರೂ. ನಗದು ಹಣವನ್ನು ದರೋಡೆಗೈದ ಪ್ರಕರಣವನ್ನು ಕೊನೆಗೂ ಬೆಂಗಳೂರು ಪೊಲೀಸರು ಭೇದಿಸಿದ್ದು ಮೂವರು ಆರೋಪಿಗಳನ್ನು ಬಂಧಿಸಿ 5.76 ಕೋಟಿ ಹಣವನ್ನು ವಶಕ್ಕೆ ಪಡೆದಿದ್ದಾರೆ.

ಎಟಿಎಂ ಹಣ ಒಯ್ಯುವ ಏಜನ್ಸಿ ಸಿಎಂಎಸ್ ಸೆಕ್ಯುರಿಟೀಸ್ ಕಂಪನಿಯ ವಾಹನದ ಮೇಲ್ವಿಚಾರಕ ರವಿ, ಮಾಜಿ ಉದ್ಯೋಗಿ ಕ್ಸೇವಿಯರ್ ಹಾಗೂ ಗೋವಿಂದಪುರ ಠಾಣೆಯ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯ್ಕ್‌ ಬಂಧಿತರು. ಅವರ ಬಳಿಯಿಂದ 5.76 ಕೋಟಿ ರೂ. ಹಣವನ್ನು ವಶಕ್ಕೆ ಪಡೆಯಲಾಗಿದೆ. ಕೃತ್ಯದಲ್ಲಿ 7-8 ಜನ ಶಾಮೀಲಾಗಿರುವ ಮಾಹಿತಿಯಿದ್ದು ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ. ‌

ಮೂರು ತಿಂಗಳಿಂದ ದರೋಡೆಗೆ ಸಂಚು

ದರೋಡೆ ಕೃತ್ಯಕ್ಕಾಗಿ ಮೂರು ತಿಂಗಳಿಂದ ಸಂಚು ರೂಪಿಸಿದ್ದು, 15 ದಿನಗಳ ಹಿಂದೆಯೇ ದರೋಡೆಯ ಸ್ಥಳವನ್ನು ನಿಗದಿ ಮಾಡಿದ್ದರು. ನವೆಂಬರ್ 19ರಂದು 12:48ರ ಸುಮಾರಿಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಿದ ಇನೋವಾ ಕಾರಿನಲ್ಲಿ ಅಶೋಕ ಪಿಲ್ಲರ್ - ಜಯನಗರ - ಡೇರಿ ಸರ್ಕಲ್‌ ಮಾರ್ಗದಲ್ಲಿ ಬಂದು, ಸಿಎಂಎಸ್ ಕಸ್ಟೋಡಿಯನ್ ವಾಹನವನ್ನು ಅಡ್ಡಗಟ್ಟಿದ್ದರು. ಆರ್‌ಬಿಐ ಅಧಿಕಾರಿಗಳೆಂದು ಹೇಳಿ ಭದ್ರತಾ ಸಿಬ್ಬಂದಿ ಹಾಗೂ ಕಸ್ಟೋಡಿಯನ್ ಸಿಬ್ಬಂದಿಯನ್ನು ಕೆಳಗಿಳಿಸಿದ್ದರು. ಮತ್ತೋರ್ವ ಆರೋಪಿ ಕಸ್ಟೋಡಿಯನ್ ವಾಹನದೊಳಗೆ ಕುಳಿತು ಚಾಲಕನಿಗೆ ಡೇರಿ ಸರ್ಕಲ್‌ನತ್ತ ಚಲಾಯಿಸುವಂತೆ ಸೂಚಿಸಿದ್ದ. 

ಭದ್ರತಾ ಸಿಬ್ಬಂದಿ ಹಾಗೂ ಕಸ್ಟೋಡಿಯನ್ ಸಿಬ್ಬಂದಿಯನ್ನು ಕಾರಿನಲ್ಲಿ ಕರೆದೊಯ್ದಿದ್ದ ಆರೋಪಿಗಳು ಮೊಬೈಲ್ ಕಿತ್ತುಕೊಂಡು, ಅವರನ್ನು ನಿಮ್ಹಾನ್ಸ್ ಬಳಿ ಕೆಳಗಿಳಿಸಿ ಕಾಲ್ಕಿತ್ತಿದ್ದರು. ಕೃತ್ಯ ನಡೆದ ನಂತರ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗುವಷ್ಟರಲ್ಲಿ ಒಂದೂವರೆ ತಾಸು ಕಳೆದಿತ್ತು. ತನಿಖೆ ಕೈಗೊಂಡಾಗ ಆರೋಪಿಗಳು ಸಿಸಿಟಿವಿಗಳು ಇರದ ಸ್ಥಳವನ್ನು ಬಳಸಿರುವುದು, ಮೊಬೈಲ್ ಫೋನ್‌ ಬಳಕೆ ಮಾಡದಿರುವುದು ಹಾಗೂ ದರೋಡೆಯಾದ ಹಣದ ನೋಟುಗಳು ಸರಣಿ ನಂಬರ್‌ನಲ್ಲಿ ಇರದಿರುವುದು ಕಂಡುಬಂದಿತ್ತು. ಈ ವಿಚಾತ ತನಿಖೆಗೆ ಸಾಕಷ್ಟು ಸವಾಲು ತಂದೊಡ್ಡಿತ್ತು‌ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ತಿಳಿಸಿದರು.

ದರೋಡೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ, ಬೆಂಗಳೂರಿನ ಗಡಿಭಾಗದ ಜಿಲ್ಲೆಗಳ ಎಸ್‌ಪಿಗಳು, ನೆರೆ ರಾಜ್ಯಗಳ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಬೆಂಗಳೂರಿ‌ನ ಇಬ್ಬರು ಎಸಿಪಿ, ಇಬ್ಬರು ಡಿಸಿಪಿ ನೇತೃತ್ವದ ಸುಮಾರು 200 ಜನ ಅಧಿಕಾರಿ ಹಾಗೂ ಸಿಬ್ಬಂದಿಯನ್ನೊಳಗೊಂಡ 11 ತಂಡಗಳು ಕೇರಳ, ತಮಿಳುನಾಡು, ತೆಲಂಗಾಣಗಳಿಗೆ ತೆರಳಿ ತನಿಖೆ ಕೈಗೊಂಡಿದ್ದರು. ಸದ್ಯ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಆರೋಪಿಗಳು ವಿವಿಧ ಕಡೆ ಬಚ್ಚಿಟ್ಟಿದ್ದ 5.76 ಕೋಟಿ ರೂ. ನಗದು ಹಣವನ್ನು ವಶಕ್ಕೆ ಪಡೆಯಲಾಗಿದ್ದು, ಇನ್ನುಳಿದ ಹಣಕ್ಕಾಗಿ ಹುಡುಕಾಟ ನಡೆಸಲಾಗಿದೆ‌. ಮೂರು ದಿನಗಳಿಂದ ಅವಿರತ ಕಾರ್ಯಾಚರಣೆ ನಡೆಸಿದ ತನಿಖಾ ತಂಡಕ್ಕೆ 5 ಲಕ್ಷ ರೂ. ನಗದು ಬಹುಮಾನ ಘೋಷಿಸುತ್ತಿದ್ದೇನೆ ಎಂದು ಆಯುಕ್ತರು ತಿಳಿಸಿದರು.

ಸೆಕ್ಯುರಿಟಿ ಏಜೆನ್ಸಿಯಿಂದ ಲೋಪ 

ಹಣ ಸಾಗಿಸುವ ವಾಹನದಲ್ಲಿ ಚಾಲಕನನ್ನು ಹೊರತುಪಡಿಸಿ ಇಬ್ಬರು ಭದ್ರತಾ ಸಿಬ್ಬಂದಿ ಹಾಗೂ ಇಬ್ಬರು ಕಸ್ಟೋಡಿಯನ್ ಸಿಬ್ಬಂದಿ ಇರಬೇಕು. ಕಸ್ಟೋಡಿಯನ್ ವಾಹನ ಒಂದೇ ಸಮಯ, ಒಂದೇ ಮಾರ್ಗವನ್ನು ಪದೇ ಪದೇ ಬಳಸಬಾರದು. ಸಿಬ್ಬಂದಿ ಹಣ ನಿರ್ವಹಣೆಯ ಕುರಿತು ತರಬೇತಿ ಪಡೆದಿರಬೇಕು, ಸಿಬ್ಬಂದಿಯ ಹಿನ್ನೆಲೆಯ ಕುರಿತು ಪರಿಶೀಲನೆ ಆಗಿರಬೇಕು. ಕಸ್ಟೋಡಿಯನ್ ಕಂಪನಿಯ ಉದ್ಯೋಗಿಯನ್ನು ಕೆಲಸದಿಂದ ವಜಾಗೊಳಿಸಿದರೆ ಪೊಲೀಸರಿಗೆ ಮಾಹಿತಿ ನೀಡಿರಬೇಕು ಎಂದು ಆರ್‌ಬಿಐ ನಿಯಮಾವಳಿಗಳಿವೆ. ಆದರೆ ಇಲ್ಲಿ ಸಿಎಂಎಸ್ ಸೆಕ್ಯುರಿಟೀಸ್‌ ಕಂಪನಿಯವರಿಂದ ಲೋಪಗಳಾಗಿರುವುದು ಕಂಡುಬಂದಿದೆ. ಈ ಬಗ್ಗೆ ಆರ್‌ಬಿಐಗೆ ಪತ್ರ ಬರೆಯಲಾಗುವುದು ಎಂದು ಆಯುಕ್ತ ಸಿಂಗ್ ಹೇಳಿದರು.

Ads on article

Advertise in articles 1

advertising articles 2

Advertise under the article