ಮಂಗಳೂರು :ಈ ಬಾರಿ ಕಂಬಳದಲ್ಲಿ ಸಬ್ ಜೂನಿಯರ್ ಓಟ ಇರಲ್ಲ ; 24 ಗಂಟೆಯಲ್ಲಿ ಸ್ಪರ್ಧೆ ಮುಗಿಸಲು ಷರತ್ತು, ರಾತ್ರಿ ವೇಳೆ ಧ್ವನಿವರ್ಧಕ ಸೀಮಿತ, ಮೈಸೂರು ಕಂಬಳ ಬಗ್ಗೆ ಶೀಘ್ರ ನಿರ್ಣಯ ; ಬೆಳಪು ದೇವಿಪ್ರಸಾದ್ ಶೆಟ್ಟಿ..

ಮಂಗಳೂರು : ಸಣ್ಣ ಪ್ರಾಯದ ಮೂರುವರೆ ವರ್ಷದ ಕೋಣಗಳನ್ನು ಕಂಬಳದಲ್ಲಿ ಓಡಿಸಬಾರದೆನ್ನುವ ಕಾನೂನು ಪಾಲಿಸುವುದು, 24 ಗಂಟೆಯೊಳಗೆ ಕಂಬಳ ಮುಗಿಸಬೇಕೆಂಬ ಷರತ್ತಿನ ಕಾರಣಕ್ಕೆ ಈ ಬಾರಿಯಿಂದ ಸಬ್ ಜೂನಿಯರ್ ವಿಭಾಗವನ್ನು ಸ್ಪರ್ಧೆಯಿಂದ ಕೈಬಿಡಲಾಗಿದೆ. ಸಬ್ ಜೂನಿಯರ್ ಕೋಣಗಳ ತರಬೇತಿಗಾಗಿ ಸ್ನೇಹಕೂಟ ನಡೆಸಲಾಗುವುದು ಎಂದು ರಾಜ್ಯ ಕಂಬಳ ಅಸೋಸಿಯೇಶನ್ ಅಧ್ಯಕ್ಷ ಐಕಳಬಾವ ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.
ಕಂಬಳದಲ್ಲಿ ಸಮಯ ಪಾಲನೆ ಮಾಡುವುದರಿಂದ ಕೋಣಗಳು ಮಾತ್ರವಲ್ಲದೆ ಕಾರ್ಮಿಕರಿಗೂ ಉತ್ತಮ. ಈ ನಿಟ್ಟಿನಲ್ಲಿ ಯಾವುದೇ ಕಂಬಳವನ್ನು 24 ಗಂಟೆಯಲ್ಲಿ ಮುಗಿಸುವಂತೆ ಎಲ್ಲ ಕಂಬಳ ವ್ಯವಸ್ಥಾಪಕರು ಮತ್ತು ತೀರ್ಪುಗಾರರಿಗೆ ಸೂಚನೆ ನೀಡಲಾಗಿದೆ. ಹಿಂದೆ 150 ರಷ್ಟು ಕಂಬಳ ಕೋಣಗಳಿದ್ದರೆ, ಈಗ 280 ರಷ್ಟು ಕೋಣಗಳ ಜೋಡಿಗಳಿವೆ. ಯುವಕರು ಹಾಗೂ ಮಹಿಳೆಯರೂ ಕೋಣಗಳನ್ನು ಸಾಕುತ್ತಿದ್ದಾರೆ. ಸಬ್ ಜೂನಿಯರ್ ವಿಭಾಗದಲ್ಲಿ 70ರಿಂದ 100 ಜೋಡಿ ಕೋಣಗಳು ಬರುತ್ತಿದ್ದವು. ಈ ಬಾರಿಯಿಂದ ಸಬ್ ಜೂನಿಯರ್ ವಿಭಾಗ ಕೈಬಿಟ್ಟಿರುವುದರಿಂದ 2-3 ಗಂಟೆ ಉಳಿತಾಯವಾಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಂಬಳದಲ್ಲಿ ಜಾತಿ, ಪಕ್ಷ ಬೇಧ ಇಲ್ಲ. ಯಾವತ್ತೂ ಶಾಂತಿಭಂಗ ಆಗಿಲ್ಲ. ಧ್ವನಿ ಬಳಕೆಯ ಬಗ್ಗೆ ಪೊಲೀಸ್ ಇಲಾಖೆ ನೀಡಿರುವ ಸೂಚನೆಗಳಿಗೆ ಬೆಲೆ ಕೊಟ್ಟು ಕರ್ಕಶ ಧ್ವನಿವರ್ಧಕಕ್ಕೆ ಕಡಿವಾಣ ಹಾಕಲಾಗುವುದು. ರಾತ್ರಿ ಹತ್ತು ಗಂಟೆಯ ಬಳಿಕ ಗಂತು ಮತ್ತು ಮಂಜೊಟ್ಟಿಗೆ ಮಾತ್ರ ಸೀಮಿತವಾಗಿ ಧ್ವನಿ ವರ್ಧಕ ಬಳಸುವುದಾಗಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದು ಜಿಲ್ಲಾಡಳಿತದಿಂದ ಸಹಕಾರದ ಭರವಸೆ ಸಿಕ್ಕಿದೆ. ಈ ಬಾರಿ ಬೆಂಗಳೂರು ಮತ್ತು ಶಿವಮೊಗ್ಗದ ಕಂಬಳಕ್ಕೆ ಬೇಡಿಕೆ ಬಂದಿಲ್ಲ. ಆದರೆ ಮೈಸೂರಿನಲ್ಲಿ ಕಂಬಳ ಅಯೋಜಿಸುವಂತೆ ಸ್ವತಃ ಡಿ.ಕೆ.ಶಿವಕುಮಾರ್ ಅವರೇ ನಮ್ಮನ್ನು ಭೇಟಿಯಾಗಿ ಬೇಡಿಕೆ ಸಲ್ಲಿಸಿದ್ದು 25 ಎಕರೆ ವಿಶಾಲವಾದ ಸರ್ಕಾರಿ ಜಾಗವನ್ನು ಪರಿಶೀಲಿಸಲಾಗಿದೆ. ಏಪ್ರಿಲ್ ವರೆಗೆ ದಿನ ಇಲ್ಲದ ಕಾರಣ ಮುಂದಕ್ಕೆ ತೀರ್ಮಾನ ಕೈಗೊಳ್ಳಲಾಗುವುದು. ಈ ವರ್ಷ 25 ಜೋಡು ಕರೆ ಕಂಬಳ ನಿಗದಿಯಾಗಿದ್ದು, ಹರೇಕಳ, ಎರ್ಮಾಳ್ ಮತ್ತು ಉಡುಪಿ ಜಿಲ್ಲೆ ಸಹಿತ ಮೂರು ಹೊಸ ಕಂಬಳಗಳು ನಡೆಯಲಿವೆ ಎಂದು ದೇವಿಪ್ರಸಾದ್ ಶೆಟ್ಟಿ ಮಾಹಿತಿ ನೀಡಿದರು.
ಕಳೆದ ವರ್ಷ 20 ಕಂಬಳಗಳು ನಡೆದಿದ್ದು ಎಲ್ಲಾ ಕಂಬಳಕ್ಕೂ ಅನುದಾನ ನೀಡುವ ಬಗ್ಗೆ ಮುಖ್ಯಮಂತ್ರಿ ಒಪ್ಪಿದ್ದರೂ ಪ್ರವಾಸೋದ್ಯಮ ಇಲಾಖೆಯಿಂದ ಕೇವಲ ಹತ್ತು ಕಂಬಳಕ್ಕೆ ಮಾತ್ರ 50 ಲಕ್ಷ ಅನುದಾನ ಬಿಡುಗಡೆಯಾಗಿದೆ. ಕ್ರೀಡಾ ಇಲಾಖೆಯಿಂದ ಎರಡು ಲಕ್ಷದಂತೆ ಅನುದಾನ ಬಂದಿದೆ. ಮುಂದಿನ ಬಜೆಟ್ನಲ್ಲಿ ಐದು ಕೋಟಿ ಅನುದಾನ ಕಂಬಳಕ್ಕೆ ಮೀಸಲಿಡುವಂತೆ ಕ್ರೀಡಾ ಮತ್ತು ಪ್ರವಾಸೋದ್ಯಮ ಇಲಾಖೆಗೆ ಮನವಿ ಮಾಡಲಾಗಿದೆ. ಓಟಗಾರರು ಹಾಗೂ ಇತರರಿಗೆ ಕಾರ್ಮಿಕ ಕಾರ್ಡ್ ಒದಗಿಸುವಂತೆ ಮಾಡಿರುವ ಮನವಿಗೆ ಸಚಿವರು ಪೂರಕ ಸ್ಪಂದನೆ ನೀಡಿದ್ದಾರೆ.
ಕಂಬಳ ನಡೆಯುವ ಸ್ಥಳಕ್ಕೆ ಪೇಟಾದವರು ಭೇಟಿ ನೀಡಿ ಚಿತ್ರೀಕರಣ ಮಾಡಿ ನ್ಯಾಯಾಲಯ ಮತ್ತು ಅಧಿಕಾರಿಗಳಿಗೆ ಕೊಟ್ಟು ಆರೋಪಗಳನ್ನು ಹೊರಿಸುತ್ತಾ ಬಂದಿದ್ದು, ಈ ಆರೋಪದಲ್ಲಿ ಹುರುಳಿಲ್ಲ ಎಂದು ಸರ್ಕಾರ ಮತ್ತು ನ್ಯಾಯಾಲಯ ಒಪ್ಪಿಕೊಂಡಿದೆ, ಇದು ನಮಗೆ ಅನುಕೂಲವಾಗಿದೆ. ರಾಜ್ಯ ಮಾನ್ಯತೆ ನೀಡುವ ಬಗ್ಗೆ ಕ್ರೀಡಾ ಸಚಿವರು ಭರವಸೆ ನೀಡಿದ್ದಾರೆ. ರಾಷ್ಟ್ರೀಯ ಮಾನ್ಯತೆ ಸಿಕ್ಕಾಗ ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರದಿಂದ ಇನ್ನಷ್ಟು ಸಹಕಾರ ಸಿಗಲಿದೆ ಎಂದು ದೇವಿಪ್ರಸಾದ್ ಶೆಟ್ಟಿ ತಿಳಿಸಿದರು.
ಪ್ರಮುಖರಾದ ವಿಜಯ್ಕುಮಾರ್ ಕಂಗಿನಮನೆ, ಲೋಕೇಶ್ ಶೆಟ್ಟಿ ಮುಚ್ಚೂರು, ಪಿ.ಆರ್.ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ ಹಾಗೂ ಸಂದೀಪ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.