ಮಡಿಕೇರಿ :ಲಿವಿಂಗ್ ಟುಗೆದರ್ ನಲ್ಲಿದ್ದ ಜೋಡಿ ನಡುವೆ ಕಲಹ; ವ್ಯಕ್ತಿ ನೇಣಿಗೆ ಶರಣು..!!

ಮಡಿಕೇರಿ: ಕಳೆದ ಕೆಲವು ವರ್ಷಗಳಿಂದ ಒಟ್ಟಿಗೆ ಜೀವನ ಸಾಗಿಸುತ್ತಿದ್ದ ಜೋಡಿ ನಡುವೆ ಕಲಹವೇರ್ಪಟ್ಟು, ನೊಂದ ವ್ಯಕ್ತಿ ನೇಣಿಗೆ ಶರಣಾದ ಘಟನೆ ವೀರಾಜಪೇಟೆ ನಗರದಲ್ಲಿ ನಡೆದಿದೆ.
ವೀರಾಜಪೇಟೆ ನಗರದ ಕೆ.ಬೋಯಿಕೇರಿ ನಿವಾಸಿ ದಿವಂಗತ ನಾಗರಾಜು ಎಂಬವರ ಪುತ್ರ, ಸೆಸ್ಕ್’ನಲ್ಲಿ ಕಂಬ ಅಳವಡಿಸುವ ಕಾರ್ಯ ನಿರ್ವಹಿಸುತ್ತಿದ್ದ ಸಾಗರ್ (30 ) ನೇಣಿಗೆ ಶರಣಾದ ವ್ಯಕ್ತಿ ಎಂದು ತಿಳಿದು ಬಂದಿದೆ.
ಸೆಸ್ಕ್’ನಲ್ಲಿ ವಿದ್ಯುತ್ ಕಂಬ ಅಳವಡಿಸುವ ಕಾಯಕದೊಂದಿಗೆ ಆಟೋ ಚಾಲಕನೂ ಆಗಿದ್ದ ಸಾಗರ್’ಗೆ ಎರಡು ಮಕ್ಕಳ ತಾಯಿಯಾಗಿರುವ ಸಾವಿತ್ರಿ ಎಂಬಾಕೆಯ ಪರಿಚಯವಾಗಿತ್ತು. ನಂತರ ಗಾಂಧಿನಗರದಲ್ಲಿ ಬಾಡಿಗೆ ಮನೆಯೊಂದನ್ನು ಪಡೆದು ಸುಮಾರು ಎಂಟು ಇವರಿಬ್ಬರು ‘ಲಿವಿಂಗ್ ಟುಗೇದರ್’ ರೀತಿಯಲ್ಲಿ ಒಟ್ಟಿಗೆ ಜೀವನ ಸಾಗಿಸುತ್ತಿದ್ದರು.
ಅಲ್ಪ ಪ್ರಮಾಣದಲ್ಲಿ ಕುಡಿತದ ಚಟವನ್ನೂ ಹೊಂದಿದ್ದ ಸಾಗರ್ ಮತ್ತು ಆ ಮಹಿಳೆಯ ನಡುವೆ ಎರಡು ದಿನಗಳ ಹಿಂದೆ ಕಲಹ ನಡೆದಿತ್ತೆನ್ನಲಾಗಿದೆ.
ಬುಧವಾರ ಮಹಿಳೆಯೊಂದಿಗೆ ನಡೆದ ಕಲಹದಿಂದ ಮನನೊಂದ ಸಾಗರ್, ಕೇರಳದ ಕೊಟ್ಟಿಯೂರು ದೇವಾಲಯಕ್ಕೆ ಒಬ್ಬನೇ ತೆರಳಿ ನಂತರ ಸಂಜೆ 6ರ ವೇಳೆಗೆ ಮನೆಗೆ ಹಿಂದಿರುಗಿದ್ದ. ಆತ ಬಂದಾಗ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ ಸಾವಿತ್ರಿಗೆ ಹಲವು ಬಾರಿ ದೂರವಾಣಿ ಕರೆ ಮಾಡಿದ್ದಾನೆ. ಮಹಿಳೆಯಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಮಹಿಳೆ ತನ್ನನ್ನು ಬಿಟ್ಟು ತೆರಳಿದ್ದಾಳೆಂದು ಭಾವಿಸಿದ ಸಾಗರ್, ‘ನನ್ನ ಸಾವನ್ನು ಸಂತೋಷದಿಂದ ಸ್ವೀಕರಿಸು. ನೀನು ಮನೆಗೆ ಬರುವ ವೇಳೆ ನಾನು ಇರುವುದಿಲ್ಲ ಎಂದು ಮದ್ಯ ಹಾಗೂ ಧೂಮಪಾನ ಮಾಡಿ ಅಡುಗೆ ಕೋಣೆಯ ಮೇಲ್ಛಾವಣಿಯ ಮರದ ಅಡ್ಡಕ್ಕೆ ವೇಲ್’ನಿಂದ ನೇಣು ಹಾಕಿಕೊಂಡಿದ್ದಾನೆ.
ಇದೆಲ್ಲವನ್ನೂ ವೀಡಿಯೋ ಚಿತ್ರಣ ಮಾಡಿದ್ದಾನೆ.
ಈ ನಡುವೆ ಕಲಹದಿಂದ ಪೆಟ್ಟು ತಿಂದ ಸಾವಿತ್ರಿ, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಮಹಿಳೆಯ ಮಗ ಆಧಾರ್ ಕಾರ್ಡ್ ತರಲೆಂದು ಗುರುವಾರ ಅಪರಾಹ್ನ. 3 ಗಂಟೆಗೆ ಮನೆಗೆ ಬಂದು ನೋಡಿದ ಸಂದರ್ಭ ಸಾಗರ್ ನೇಣಿಗೆ ಶರಣಾಗಿರುವುದು ಕಂಡು ಬಂದಿದೆ.
ಮೃತನ ತಾಯಿ ಎನ್.ಎನ್. ಸರೋಜ ಅವರು ನೀಡಿರುವ ದೂರಿನ ಅನ್ವಯ ವೀರಾಜಪೇಟೆ ನಗರ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.