ಮಲೆ ಮಹದೇಶ್ವರ :ವಿಚಾರಣೆ ವೇಳೆ ಬಯಲಾಯ್ತು ಹುಲಿಗಳ ಸಾವಿನ ರಹಸ್ಯ; ಮುಗ್ದರಂತೆ ವರ್ತಿಸಿದವರೇ ವಿಷ ಹಾಕಿದ್ರು!
Sunday, June 29, 2025
ಹನೂರು: ಮಲೆ ಮಹದೇಶ್ವರ ವನ್ಯಜೀವಿಧಾಮದ ಮೀಣ್ಯಂನಲ್ಲಿ 5 ಹುಲಿಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.
ವಿಷ ಪ್ರಾಶನದಿಂದ ಹುಲಿಗಳು ಮೃತಪಟ್ಟಿದ್ದು ಖಚಿತವಾದ ಬೆನ್ನಲ್ಲೇ, ವಿಷ ಹಾಕಿದ ಮೂವರನ್ನು ಬಂಧಿಸಲಾಗಿದೆ.
ಹುಲಿ ಹಸುವನ್ನು ಕೊಂದಿದ್ದಕ್ಕೆ ಕೋಪಗೊಂಡು, ಹಸುವಿನ ಮಾಲೀಕ ಕೋನಪ್ಪ ಈ ಕೃತ್ಯವೆಸಗಿದ ರೂವಾರಿ. ಈತನ ಕುಮ್ಮಕ್ಕಿನಿಂದ ಮಾದುರಾಜು, ನಾಗರಾಜು ಎಂಬುವರು ಕೀಟನಾಶಕವನ್ನು ಹಸುವಿನ ದೇಹಕ್ಕೆ ಸಿಂಪಡಿಸಿದ್ದರು. ಈ ಮೂವರನ್ನೂ ಈಗ ಬಂಧಿಸಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಇವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಸೆಕ್ಷನ್ 9.27ರ ಮತ್ತು ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್ 24ರ ಉಲ್ಲಂಘನೆಯಡಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಲಾಯಿತು. ಬಳಿಕ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಈ ವೇಳೆ ನ್ಯಾಯಾಧೀಶರು ಅವರನ್ನು ಜೂ.30ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಸೂಚಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಅವರನ್ನು ಮತ್ತೆ ಸೋಮವಾರ ಅರಣ್ಯಾಧಿಕಾರಿಗಳು ತಮ್ಮ ವಶಕ್ಕೆ ಪಡೆಯುವ ಸಾಧ್ಯತೆ ಇದೆ.