ಸುಳ್ಯ :ಫೇಸ್ಬುಕ್ ಪರಿಚಯ ; ಮೈಸೂರು ಮೂಲದ ದಲಿತ ಯುವತಿಗೆ ಸುಬ್ರಹ್ಮಣ್ಯದ ಬ್ರಾಹ್ಮಣ ವೈದ್ಯನಿಂದ ಮೋಸ, ಮದುವೆಯಾದರೂ ಮನೆಗೆ ಬಿಟ್ಟುಕೊಳ್ಳದೆ ಜಾತಿ ನಿಂದನೆ, 5 ಕೋಟಿ ವರದಕ್ಷಿಣೆ ಕೇಳಿ ಕಿರುಕುಳ, ಎಫ್ಐಆರ್ ಬೆನ್ನಲ್ಲೇ ತಲೆಮರೆಸಿಕೊಂಡ ವೈದ್ಯ.

ಸುಳ್ಯ :ಫೇಸ್ಬುಕ್ ಪರಿಚಯ ; ಮೈಸೂರು ಮೂಲದ ದಲಿತ ಯುವತಿಗೆ ಸುಬ್ರಹ್ಮಣ್ಯದ ಬ್ರಾಹ್ಮಣ ವೈದ್ಯನಿಂದ ಮೋಸ, ಮದುವೆಯಾದರೂ ಮನೆಗೆ ಬಿಟ್ಟುಕೊಳ್ಳದೆ ಜಾತಿ ನಿಂದನೆ, 5 ಕೋಟಿ ವರದಕ್ಷಿಣೆ ಕೇಳಿ ಕಿರುಕುಳ, ಎಫ್ಐಆರ್ ಬೆನ್ನಲ್ಲೇ ತಲೆಮರೆಸಿಕೊಂಡ ವೈದ್ಯ.

ಪುತ್ತೂರು : ಫೇಸ್ಬುಕ್ ಮೂಲಕ ಪರಿಚಯವಾಗಿದ್ದ ಮೈಸೂರು ಮೂಲದ ದಲಿತ ಯುವತಿಯನ್ನು ಮದುವೆಯಾಗುವುದಾಗಿ ಪುಸಲಾಯಿಸಿ ದೈಹಿಕ ಸಂಪರ್ಕ ಮಾಡಿದ್ದಲ್ಲದೆ, ಆನಂತರ ಹುಡುಗಿ ಕಡೆಯವರ ಒತ್ತಾಯಕ್ಕೆ ಮಣಿದು ಮದುವೆಯನ್ನೂ ಆಗಿದ್ದ ಸುಳ್ಯ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಬಳಿಯ ಪಂಜ ಮೂಲದ ಹವ್ಯಕ ಬ್ರಾಹ್ಮಣ ವರ್ಗದ ವೈದ್ಯರೊಬ್ಬರು ಈಗ ಆಕೆಯನ್ನು ಕೀಳು ಜಾತಿಯವಳೆಂದು ತನ್ನ ಮನೆಗೆ ಸೇರಿಸಿಕೊಳ್ಳದೆ ದೂರ ಮಾಡುತ್ತಿರುವುದಲ್ಲದೆ, ಮನೆಗೆ ಸೇರಿಸಿಕೊಳ್ಳಬೇಕಿದ್ದರೆ ಐದು ಕೋಟಿ ವರದಕ್ಷಿಣೆ ನೀಡಬೇಕೆಂದು ಸತಾಯಿಸುತ್ತಿರುವ ಬಗ್ಗೆ ಮೈಸೂರಿನ ಮಹಿಳಾ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಮೈಸೂರು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಂತೆ ಆರೋಪಿತ ವೈದ್ಯ ಡಾ.ಆದರ್ಶ್ ತಲೆಮರೆಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಎರಡು ದಿನಗಳ ಹಿಂದೆ ಆದರ್ಶ್ ಅವರಿಗೆ ಸೋದರ ಸಂಬಂಧಿಯಾಗಿರುವ ರಜಿತ್ ಭಟ್ ಎಂಬಾತನನ್ನುಕಡಬದ ಬಳಿಯಿಂದ ಬಂಧಿಸಿ ಕರೆದೊಯ್ದಿದ್ದಾರೆ.


ಯುವತಿಯ ದೂರಿನ ಪ್ರಕಾರ, 2019ರಲ್ಲಿ ಫೇಸ್ಬುಕ್ ಮೂಲಕ ಪರಿಚಯ ಆಗಿದ್ದು, ಆನಂತರ ಮೈಸೂರಿಗೆ ತೆರಳಿದ್ದ ಆದರ್ಶ್ ಮದುವೆಯಾಗುತ್ತೇನೆಂದು ನಂಬಿಸಿ ಬೇರೆ ಬೇರೆ ಕಡೆ ಸುತ್ತಾಡಿಸಿದ್ದಾನೆ. ಬೆಂಗಳೂರಿಗೂ ಕರೆದೊಯ್ದು ಹೊಟೇಲ್ ರೂಮ್ ಬುಕ್ ಮಾಡಿ ದೈಹಿಕ ಸಂಪರ್ಕ ನಡೆಸಿದ್ದ. 2012ರಲ್ಲಿ ತಾನು ಗರ್ಭಿಣಿಯಾಗಿದ್ದು, ಮದುವೆಯಾಗಲು ಒತ್ತಾಯಿಸಿದಾಗ ಮೆಡಿಕಲ್ ಪಿಜಿ ಕಲಿಯುತ್ತಿರುವುದರಿಂದ ಈಗ ಮದುವೆ ಸಾಧ್ಯವಿಲ್ಲ ಎಂದು ಹೇಳಿ ಗರ್ಭಪಾತ ಮಾಡಿಸಿದ್ದರು. ಆನಂತರ, ಪಿಜಿ ಮುಗಿಸಿದ ಬಳಿಕ ಆದರ್ಶ್ ಮಣಿಪಾಲದ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸಕ್ಕೆ ಸೇರಿದ್ದರು. ಆನಂತರವೂ ತನ್ನನ್ನು ಉಡುಪಿಗೆ ಕರೆಸ್ಕೊಂಡು ಗಂಡ ಹೆಂಡತಿಯಂತೆ ಒಟ್ಟಿಗೆ ಹಲವು ದಿನಗಳ ಕಾಲ ಹೊಟೇಲ್ ನಲ್ಲಿ ಉಳಿದುಕೊಂಡಿದ್ದೆವು. ಆನಂತರ, 2023ರಲ್ಲಿ ಅಪಾರ್ಟ್ಮೆಂಟ್ ಬಾಡಿಗೆ ಪಡೆದುಅಲ್ಲಿಯೂ ಜೊತೆಗೆ ಉಳಿದುಕೊಂಡಿದ್ದೆವು.


2023ರ ಮಾರ್ಚ್ 7ರಂದು ಆದರ್ಶ್ ಅವರು ಕರೆ ಮಾಡಿ, ತನಗೆ ಮನೆಯವರು ಹುಡುಗಿ ನೋಡಿದ್ದು, ಮದುವೆಗೆ ಸಿದ್ಧತೆ ನಡೆಸಿದ್ದಾರೆ ಎಂದು ಹೇಳಿದ್ದರು. ಆನಂತರ, ನಾವು ಮತ್ತು ನಮ್ಮ ಮನೆಯವರು ಆಕ್ಷೇಪಿಸಿ ಮದುವೆಗೆ ಒತ್ತಾಯ ಪಡಿಸಿದಾಗ, 2023ರ ಸೆ.24ರಂದು ಸಕಲೇಶಪುರದ ಹುಲಿಕಲ್ ದೇವಸ್ಥಾನದಲ್ಲಿ ಎರಡೂ ಮನೆಯವರು ಸೇರಿ ಮದುವೆ ಮಾಡಿಸಿದ್ದರು. ಬಳಿಕ ಅಕ್ಟೋಬರ್ 18ರಂದು ಮೈಸೂರಿನಲ್ಲಿ ಮದುವೆ ನೋಂದಣಿಯನ್ನೂ ಮಾಡಿಸಿದ್ದೆವು. ಆದರೆ ಆದರ್ಶ್ ಅವರ ತಂದೆ ವೆಂಕಟರಮಣ ಭಟ್, ನನ್ನ ಬಗ್ಗೆ ಅವಾಚ್ಯವಾಗಿ ನಿಂದಿಸಿ ನಿಮ್ಮಂತವರ ಮನೆಯಲ್ಲಿ ಒಂದು ಲೋಟ ನೀರನ್ನೂ ಕುಡಿಯುವುದಿಲ್ಲ. ನಮ್ಮ ಮನೆ ಹೊಸ್ತಿಲು ತುಳಿಯುವುದಕ್ಕೂ ಬಿಡುವುದಿಲ್ಲ ಎಂದು ಹೇಳಿ ನಿಂದಿಸಿದ್ದರು. 

ಆನಂತರ, ನನ್ನ ಪತಿ ಆದರ್ಶ್ ಮಣಿಪಾಲದಲ್ಲೇ ಉಳಿದುಕೊಂಡಿದ್ದರೆ, ನಾನು ನನ್ನ ಮನೆ ಮೈಸೂರಿನಲ್ಲೇ ಉಳಿದುಕೊಂಡಿದ್ದೆ. ಆದರ್ಶ್ ಅವರು ಕೆಲವೊಮ್ಮೆ ಮೈಸೂರಿಗೆ ಬಂದು ಹೋಗುತ್ತಿದ್ದರು. ಈ ನಡುವೆ, ಗಂಡ ಆದರ್ಶ್ ಅವರು ತನ್ನ ಓದಿಗಾಗಿ ಮನೆಯವರು 5 ಕೋಟಿ ಖರ್ಚು ಮಾಡಿದ್ದಾರೆ, ನಿಮ್ಮ ಮನೆಯವರು ಈ ಹಣವನ್ನು ವರದಕ್ಷಿಣೆ ರೂಪದಲ್ಲಿ ಕೊಟ್ಟರೆ ಮಾತ್ರ ನೀನು ನಮ್ಮ ಮನೆಗೆ ಬಂದು ಉಳಿಯಬಹುದು. ಹೇಗಾದರೂ ಮಾಡಿ ಕೊಡಿಸು ಎಂದು ಹೇಳುತ್ತಿದ್ದರು. 2025ರ ಫೆಬ್ರವರಿ ತಿಂಗಳಲ್ಲಿ ಮಣಿಪಾಲದ ಹಾಸ್ಟೆಲ್ ನಲ್ಲಿದ್ದ ಆದರ್ಶ್ ಫೋನ್ ಕರೆ ಸ್ವೀಕರಿಸದೆ ಇದ್ದುದರಿಂದ ಅಲ್ಲಿಗೆ ತೆರಳಿದಾಗ, ಜನವರಿ ಕೊನೆಯಲ್ಲೇ ಅಲ್ಲಿಂದ ಬಿಟ್ಟು ಹೋಗಿದ್ದಾರೆಂದು ತಿಳಿಯಿತು. ಆದರ್ಶ್ ಅವರ ಸುಬ್ರಹ್ಮಣ್ಯ ಬಳಿಯ ಪಂಜದ ಮನೆಗೆ ತೆರಳಿದಾಗ, ಅವರ ತಂದೆ- ತಾಯಿ ಮನೆ ಒಳಗೆ ಹೋಗಲು ಬಿಡಲಿಲ್ಲ. 5 ಕೋಟಿ ತಂದು ಕೊಟ್ಟರೆ ಮಾತ್ರ ಒಳಗೆ ಬಿಡುತ್ತೇನೆ ಎಂದು ಹೇಳಿ ನಿಂದಿಸಿದರು. ಸುಬ್ರಹ್ಮಣ್ಯ ಠಾಣೆಯಲ್ಲಿ ಆದರ್ಶ್ ನಾಪತ್ತೆ ಬಗ್ಗೆ ದೂರು ಕೊಟ್ಟು ನನಗೆ ಅವಮಾನ ಮಾಡುತ್ತಿರುವ ವಿಚಾರವನ್ನೂ ಪೊಲೀಸರಿಗೆ ತಿಳಿಸಿದ್ದೆ. ಪೊಲೀಸರು ಆತನ ಮನೆಯವರನ್ನು ಕರೆಸಿ ವಿಚಾರಣೆಯನ್ನೂ ಮಾಡಿದ್ದರು. ಆದರೆ, ಆತನ ತಂದೆ ವೆಂಕಟರಮಣ ಭಟ್ ತನ್ನ ಮಗನ ಓದಿಗಾಗಿ 5 ಕೋಟಿ ಖರ್ಚು ಮಾಡಿದ್ದೇನೆ, ಆತನನ್ನು ವಿದೇಶಕ್ಕೆ ಕಳಿಸುತ್ತೇನೆ ಏನು ಬೇಕಾದರೂ ಮಾಡು ಎಂದು ಹೇಳಿ ನನಗೆ ಬೆದರಿಕೆ ಹಾಕಿದ್ದರು.

2025ರ ಫೆ.19ರಂದು ಮೈಸೂರು ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಆತನ ಮನೆಯವರನ್ನು ಕರೆಸಿ ಮಾತುಕತೆ ನಡೆಸಿದ್ದಾರೆ. ಅತ್ತೆ, ಮಾವ, ಗಂಡ, ಗಂಡನ ಸೋದರ ಆದಿತ್ಯ, ಗಂಡನ ಭಾವ ರಜಿತ್ ಭಟ್ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಫೆ.27ರಂದು ಮೈಸೂರಿನ ಚಾಮುಂಡೇಶ್ವರಿ ಸರ್ಕಲ್ ಬಳಿಯ ಪಾರ್ಕ್ ನಲ್ಲಿ ನಮ್ಮ ಮನೆಯವರು ಮತ್ತು ಆತನ ಮನೆಯವರು ಕುಳಿತು ಮಾತನಾಡಿದ್ದು, ಈ ವೇಳೆ ನೀವು ವರದಕ್ಷಿಣೆ ಕೊಡದಿದ್ದರೆ ಮನೆಯ ಹೊಸ್ತಿಲು ತುಳಿಯಲು ಬಿಡುವುದಿಲ್ಲ ಎಂದು ಹೇಳಿ ಜಾತಿ ಹೆಸರಿಡಿದು ನಿಂದಿಸಿದ್ದಾರೆ. 2019ರಿಂದ 2025ರ ವರೆಗೂ ನನ್ನನ್ನು ಪ್ರೀತಿಸುವ ನೆಪದಲ್ಲಿ ಮೋಸ ಮಾಡಿದ್ದು, ಈಗ ಮದುವೆಯಾದರೂ ವರದಕ್ಷಿಣೆ ಹಣಕ್ಕಾಗಿ ಪೀಡಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಆದರ್ಶ್ ಅವರ ತಂದೆ, ತಾಯಿ, ಸೋದರರ ವಿರುದ್ಧ 28 ವರ್ಷದ ಯುವತಿ ದೂರು ನೀಡಿದ್ದು ಮೈಸೂರು ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article