ಹಾಸನ: ಮುಂದುವರೆದ ಹೃದಯಾಘಾತ ಪ್ರಕರಣಗಳು ; 22ರ ಯುವತಿ ಹೃದಯಾಘಾತಕ್ಕೆ ಬಲಿ ; ಎದೆನೋವೆಂದು ಪ್ರಾಣ ಬಿಟ್ಟ ಯುವತಿ !
Thursday, June 26, 2025
ಹಾಸನ : ಬೆಂಗಳೂರಿನಲ್ಲಿ ನೆಲೆಸಿದ್ದ ಹಾಸನ ಮೂಲದ 22 ವರ್ಷದ ಯುವತಿಯೊಬ್ಬಳು ಹೃದಯಾಘಾತಕ್ಕೆ ಬಲಿಯಾಗಿದ್ದಾಳೆ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಕಟ್ಟಳ್ಳಿ ಗ್ರಾಮದ ಯುವತಿ ಸುಪ್ರಿಯಾ ಮೃತಳು.
ಸುಪ್ರಿಯಾ (22) ಕಟ್ಟಳ್ಳಿ ಗ್ರಾಮದ ಕೃಷ್ಣಮೂರ್ತಿ-ರೂಪ ದಂಪತಿಯ ಪುತ್ರಿ. ಈಕೆಯ ಕುಟುಂಬಸ್ಥರು ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ವಾಸವಿದ್ದರು. ಮುಕ್ತ ವಿವಿಯಲ್ಲಿ ಪದವಿ ವ್ಯಾಸಂಗ ಮಾಡುವ ಉದ್ದೇಶದಿಂದ ಸುಪ್ರಿಯಾ ಬೆಂಗಳೂರಿನ ಕುಟುಂಬದ ಮನೆಯಲ್ಲಿದ್ದು ವಿದ್ಯಾಭ್ಯಾಸದ ಜೊತೆಗೆ ಕೆಲಸ ಮಾಡುತ್ತಿದ್ದಳು. ಅಲ್ಲಿನ ಮನೆಯಲ್ಲಿದ್ದಾಗ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಪೋಷಕರಿಗೆ ಹೇಳಿ ಕುಸಿದು ಬಿದ್ದಿದ್ದಾಳೆ. ತಕ್ಷಣ ಪೋಷಕರು ಸುಪ್ರಿಯಾಳನ್ನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟರಲ್ಲಿ ಸುಪ್ರಿಯಾ ಸಾವನ್ನಪ್ಪಿದ್ದಾಳೆ.
ಕಳೆದ ಒಂದು ತಿಂಗಳ ಅವಧಿಯಲ್ಲಿ ಹಾಸನ ಜಿಲ್ಲೆಯಲ್ಲಿ 14 ಮಂದಿ ಹೃದಯಾಘಾತದಿಂದ ಸಾವನ್ನಪ್ಪಿದ್ದು ಹೆಚ್ಚಿನೆಲ್ಲರೂ 20-35 ವರ್ಷ ಒಳಗಿನವರು.