ಮಂಡ್ಯ: ಹೆಲ್ಮೆಟ್ ತಪಾಸಣೆಗಾಗಿ ದಂಪತಿಗಳನ್ನು ಏಕಾಏಕಿ ಅಡ್ಡಗಟ್ಟಿದ ಸಂಚಾರಿ ಪೊಲೀಸರು; ಧಿಡೀರನೆ ಬೈಕಿಗೆ ಬ್ರೇಕ್ ಹಾಕಿದ ಕಾರಣ ಕೆಳಗೆ ಬಿದ್ದ ಮಗು;ಟ್ರಾಫಿಕ್ ಪೊಲೀಸರ ಎಡವಟ್ಟಿಗೆ ಮಗು ಬಲಿ..!!!

ಮಂಡ್ಯ: ಟ್ರಾಫಿಕ್ ಪೊಲೀಸರ ಎಡವಟ್ಟಿನಿಂದಾಗಿ ಮಗು ಸಾವನ್ನಪ್ಪಿರುವ ಘಟನೆ ಮಂಡ್ಯದ ನಂದ ಸರ್ಕಲ್ ಬಳಿ ಸೋಮವಾರ ನಡೆದಿದೆ.
ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಎಎಸ್ಐಗಳನ್ನು ಸಸ್ಪೆಂಡ್ ಮಾಡಲಾಗಿದೆ. ಮಂಡ್ಯ ಸಂಚಾರಿ ಠಾಣೆಯ ಎಎಸ್ ಐ ಜಯರಾಮ್ , ನಾಗರಾಜ್, ಗುರುದೇವ್ ಸೇರಿ ಮೂವರು ಎಎಸ್ ಐಗಳನ್ನು ಸಸ್ಪೆಂಡ್ ಮಾಡಲಾಗಿದೆ.
ಹೆಲ್ಮೆಟ್ ತಪಾಸಣೆಗಾಗಿ ಸಂಚಾರಿ ಪೊಲೀಸರು ಬೈಕ್ ನಲ್ಲಿ ಬರುತ್ತಿದ್ದ ದಂಪತಿಯನ್ನು ಅಡ್ಡಗಟ್ಟಿದ್ದಾರೆ. ಏಕಾಏಕಿ ಬ್ರೇಕ್ ಹಾಕುತ್ತಿದ್ದಂತೆ ಬೈಕ್ ಸವಾರ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಬೈಕ್ ನಲ್ಲಿದ್ದ ಆತನ ಪತ್ನಿ ಹಾಗೂ ಮಗು ಕೂಡ ಕೆಳಗೆ ಬಿದ್ದಿದ್ದು, ಮಗುವಿನ ತಲೆ ನೆಲಕ್ಕೆ ಅಪ್ಪಳಿಸಿದ ಪರಿಣಾಮ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ.
ಮಗುವಿನ ತಲೆಯಿಂದ ತೀವ್ರ ರಕ್ತಸ್ರಾವವಾಗಿದ್ದು, ತಾಯಿಯ ಮಡಿಲಲ್ಲೇ ಕಂದಮ್ಮ ಉಸಿರು ಚೆಲ್ಲಿದೆ. ಮೂರುವರೆ ವರ್ಷದ ಹೃತಿಕ್ಷಾ ಮೃತ ಮಗು. ಮಗುವನ್ನು ಕಳೆದುಕೊಂಡ ತಂದೆ-ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ಟ್ರಾಫಿಕ್ ಪೊಲೀಸರ ಎಡವಟ್ಟಿನಿಂದಾಗಿ ಮುಗ್ದ ಕಂದಮ್ಮನ ಜೀವವೇ ಹೋಗಿದ್ದು, ಘಟನೆಯನ್ನು ಕಣ್ಣಾರೆ ಕಂಡ ಸಾರ್ವಜನಿಕರು ಆಘಾತಗೊಂಡಿದ್ದಾರೆ.