ಬೆಂಗಳೂರು: ದಕ್ಷಿಣ ರಾಜ್ಯಗಳಲ್ಲಿ ಹೆಚ್ಚುತ್ತಿರುವ ಅಧಿಕ ರಕ್ತದ ಒತ್ತಡದ ಪ್ರಕರಣ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಿಂದ ಮಾಹಿತಿ. ಹೈ ಬಿಪಿ ಹೆಚ್ಚಾಗುತ್ತಿರುವ ಕಾರಣಗಳೇನು?

ಬೆಂಗಳೂರು: ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್ ಎಫ್ಎಚ್ಎಸ್-5, 2019-21)ಯು ದಕ್ಷಿಣ ರಾಜ್ಯಗಳಲ್ಲಿ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿನ ಅಧಿಕ ರಕ್ತದೊತ್ತಡ ಪ್ರಕರಣಗಳು ಕಂಡುಬರುತ್ತಿವೆ ಎಂದು ಬಹಿರಂಗಪಡಿಸಿದೆ.
ಕರ್ನಾಟಕದಲ್ಲಿ ಅಧಿಕ ರಕ್ತದೊತ್ತಡ (High Blood Pressure) ಇರುವವರ ಪ್ರಮಾಣ 27.2%ಗೆ ತಲುಪಿದೆ. ಇದು ಪುರುಷರಲ್ಲಿ 28.6% ಮತ್ತು ಮಹಿಳೆಯರಲ್ಲಿ 26% ನಷ್ಟಿದೆ.
ಇದಕ್ಕೆ ನಾವು ರೂಢಿಸಿಕೊಂಡಿರುವ ಜಡ ಅಭ್ಯಾಸಗಳು, ಅನಾರೋಗ್ಯಕರ ಆಹಾರ ಪದ್ಧತಿ, ಹೆಚ್ಚುತ್ತಿರುವ ಬೊಜ್ಜು (Obesity) ಮತ್ತು ಅಧಿಕ ಮದ್ಯ ಸೇವನೆ ಸೇರಿದಂತೆ ನಾನಾ ಕಾರಣಗಳಿವೆ.

ಸೈಲೆಂಟ್ ಕಿಲ್ಲರ್:
ಜಾಗತಿಕ ಮಟ್ಟದಲ್ಲಿ, ಅಧಿಕ ರಕ್ತದೊತ್ತಡವು ಪ್ರತಿ 4 ಪುರುಷರಲ್ಲಿ ಒಬ್ಬರು ಮತ್ತು ಪ್ರತಿ 5 ಮಹಿಳೆಯರಲ್ಲಿ ಒಬ್ಬರ ಮೇಲೆ ಪರಿಣಾಮ ಬೀರುತ್ತಿದೆ.
ಭಾರತದಲ್ಲಿ ಈ ಪರಿಸ್ಥಿತಿ ಆತಂಕಕಾರಿಯಾಗಿದೆ. ಅಧಿಕ ರಕ್ತದೊತ್ತಡ ಹೊಂದಿರುವ 90%ಗಿಂತ ಹೆಚ್ಚಿನ ವಯಸ್ಕರು ರೋಗ ಪತ್ತೆಗೆ ಮುಂದಾಗದೆ ಚಿಕಿತ್ಸೆ ಪಡೆಯದೆ ಅಥವಾ ಅಸಮರ್ಪಕ ಚಿಕಿತ್ಸೆಯಿಂದ ಉಳಿದಿದ್ದಾರೆ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ.
ಅಧಿಕ ರಕ್ತದೊತ್ತಡವನ್ನು ಸೈಲೆಂಟ್ ಕಿಲ್ಲರ್ ಎಂದೇ ಕರೆಯಲಾಗುತ್ತದೆ. ಏಕೆಂದರೆ ಇದು ಹೃದಯ ರಕ್ತನಾಳದ ಕಾಯಿಲೆಗಳಿಗೆ ಪ್ರಮುಖ ಅಪಾಯಕಾರಿ ಅಂಶವಾಗಿದ್ದು, ಇದು ಹೃದಯಾಘಾತ, ಪಾರ್ಶ್ವವಾಯು ಮತ್ತು ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗುತ್ತದೆ.
ವೈದ್ಯರ ಸಲಹೆ ಏನು?
ಫಿಸಿಶಿಯನ್ಸ್ ಕಮಿಟಿ ಫಾರ್ ರೆಸ್ಪಾನ್ಸಿಬಲ್ ಮೆಡಿಸಿನ್ (ಪಿಸಿಆರ್ಎಂ)ನ ಪೌಷ್ಟಿಕಾಂಶ ತಜ್ಞ ಡಾ. ಜೀಶನ್ ಅಲಿ ಪ್ರಕಾರ, ಅಧಿಕ ರಕ್ತದೊತ್ತಡವು ಜೀವನದ ಶಾಶ್ವತ ಭಾಗವಾಗಿರುವುದಿಲ್ಲ. ಅನೇಕ ಸಂದರ್ಭಗಳಲ್ಲಿ ಸರಳ, ಸ್ಥಿರವಾದ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಅದನ್ನು ತಡೆಗಟ್ಟಬಹುದು. ಜತೆಗೆ ಅದನ್ನು ನಿಯಂತ್ರಣಕ್ಕೂ ತರಬಹುದು.
ನಮ್ಮ ಆಹಾರದಲ್ಲಿ ಹಣ್ಣು, ತರಕಾರಿ, ಸೊಪ್ಪುಗಳ ಸೇವನೆಯನ್ನು ಕೂಡ ಮಾಡಬೇಕು. ಈ ರೀತಿ ಜೀವನಶೈಲಿಯಲ್ಲಿ ಮಾಡಿಕೊಳ್ಳುವಂತಹ ಮಾರ್ಪಾಡುಗಳು, ವಿಶೇಷವಾಗಿ ಸಸ್ಯ ಆಧಾರಿತ ಆಹಾರಗಳ ಸೇವನೆ ರಕ್ತದೊತ್ತಡವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತವೆ ಎಂದು ಸಂಶೋಧನೆಗಳು ಕೂಡ ಹೇಳುತ್ತಿವೆ.
ರೋಗಿಗಳು ಸಸ್ಯ- ಸಮೃದ್ಧ ಆಹಾರ ಅಳವಡಿಸಿಕೊಂಡಾಗ ಅಂದರೆ ಮಸೂರ, ಬೀನ್ಸ್, ಅಮರಂಥ್ ಸೊಪ್ಪು, ನುಗ್ಗೆಕಾಯಿ ಸೊಪ್ಪು (ಮೊರಿಂಗಾ), ಸೋರೆಕಾಯಿ ಮತ್ತು ಮೆಂತ್ಯಗಳಂತಹ ಕೈಗೆಟುಕುವ ಬೆಲೆಗೆ ಸಿಗುವ ಪದಾರ್ಥಗಳಿಗೆ ಒತ್ತು ನೀಡಿದಾಗ, ರಕ್ತದೊತ್ತಡ ಇಳಿಸುವುದಲ್ಲದೆ ದೇಹದಲ್ಲಿ ಶಕ್ತಿ ಹೆಚ್ಚಳ, ನಿದ್ರೆ ಮತ್ತು ದೀರ್ಘಕಾಲೀನ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆಗಳನ್ನು ಕಾಣಬಹುದಾಗಿದೆ.
ಅರಿಶಿನ, ಜೀರಿಗೆ, ಕೊತ್ತಂಬರಿ ಮತ್ತು ಕರಿಬೇವಿನ ಎಲೆಗಳಂತಹ ಸುವಾಸನೆಯುಕ್ತ ಮಸಾಲೆಗಳನ್ನು ಬಳಸುವುದರಿಂದ, ಉಪ್ಪು ಮತ್ತು ಎಣ್ಣೆಯನ್ನು ಕಡಿಮೆ ಮಾಡುವುದರಿಂದ ಊಟದ ರುಚಿ ಕಡಿಮೆಯಾಗದೆಯೇ, ಹೃದಯ ಸ್ನೇಹಿಯಾಗಿ ಆರೋಗ್ಯಕ್ಕೂ ಹಿತವಾಗಿರುತ್ತದೆ ಎಂದು ಅವರು ಹೇಳಿದ್ದಾರೆ.
ಯಾವ ಆಹಾರ ಬೆಸ್ಟ್?
ಡಾ. ಅಲಿ ಅವರ ಪ್ರಕಾರ, “ನಿಮ್ಮ ರಕ್ತದೊತ್ತಡ ಕಡಿಮೆ ಮಾಡಲು ಮನೆಯಲ್ಲಿಯೇ, ವೈದ್ಯರ ಮಾರ್ಗದರ್ಶನ ಪಡೆದುಕೊಂಡು ಹಣ್ಣು, ತರಕಾರಿ, ಧಾನ್ಯ, ದ್ವಿದಳ ಧಾನ್ಯ, ಬೀಜ ಮತ್ತು ಸೊಪ್ಪು ಮತ್ತಿತರ ಆರೋಗ್ಯಕರ ಆಹಾರಗಳನ್ನು ಸೇವನೆ ಮಾಡಿ ಇದು ರಕ್ತದೊತ್ತಡದ ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತವೆ. ಕರ್ನಾಟಕದ ಪ್ರಮುಖ ಆಹಾರಗಳಾದ ಸೊಪ್ಪಿನ ಸಾರು (ಗ್ರೀನ್ಸ್ ಕರಿ), ಕೋಸಂಬರಿ (ಲೆಂಟಿಲ್ ಸಲಾಡ್) ಮತ್ತು ತರಕಾರಿ ಸಾರುಗಳಲ್ಲಿ ಪೊಟ್ಯಾಸಿಯಮ್- ಭರಿತ ತರಕಾರಿಗಳು ಮತ್ತು ದ್ವಿದಳ ಧಾನ್ಯಗಳಿರುತ್ತದೆ. ಇದು ಹೃದಯದ ಆರೋಗ್ಯವನ್ನು ಕಾಪಾಡುತ್ತವೆ.
ಸಂಸ್ಕರಿಸಿದ ತಿಂಡಿಗಳು, ಹುರಿದ ಆಹಾರಗಳು, ಕೆಂಪು ಮಾಂಸ ಮತ್ತು ಹೆಚ್ಚಿನ ಸೋಡಿಯಂ ಬೆರೆಸಿದ ಉಪ್ಪಿನಕಾಯಿಗಳನ್ನು ಕಡಿಮೆ ಮಾಡುವುದರ ಜತೆಗೆ, ಸಾಂಪ್ರದಾಯಿಕ ಗಿಡಮೂಲಿಕೆಗಳು ಮತ್ತು ಮಸಾಲೆಗಳ ಬಳಕೆಯನ್ನು ಹೆಚ್ಚಿಸಿಕೊಳ್ಳಬೇಕು.
ಆಹಾರದಲ್ಲಿ ಬದಲಾವಣೆಗಳನ್ನು ಮಾಡುವ ಮೊದಲು ಅದರಲ್ಲಿಯೂ ವಿಶೇಷವಾಗಿ ಔಷಧ ತೆಗೆದುಕೊಳ್ಳುತ್ತಿರುವವರು ವೈದ್ಯರನ್ನು ಸಂಪರ್ಕಿಸಿ ಆ ಬಳಿಕ ಸೇವನೆ ಮಾಡಿ ಎಂದು ಅಲಿ ಸಲಹೆ ನೀಡಿದ್ದಾರೆ.
ಆಹಾರ ಪಥ್ಯೆಯ ಜತೆಗೆ ನಿಯಮಿತ ದೈಹಿಕ ಚಟುವಟಿಕೆ, ಒತ್ತಡ ನಿರ್ವಹಣೆ ಮತ್ತು ನಿಯಮಿತ ರಕ್ತದೊತ್ತಡ ಮೇಲ್ವಿಚಾರಣೆಯು ಪರಿಣಾಮಕಾರಿ ಅಧಿಕ ರಕ್ತದೊತ್ತಡ ನಿರ್ವಹಣೆ ಮಾಡಲು ಅಗತ್ಯವಿರುವ ಅಂಶಗಳಾಗಿವೆ.
ಕರ್ನಾಟಕದಲ್ಲಿ ಅಧಿಕ ರಕ್ತದೊತ್ತಡ ಪ್ರಕರಣಗಳು ಹೆಚ್ಚುತ್ತಿದ್ದು ಅದನ್ನು ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸುವುದು ಬಹಳ ಮುಖ್ಯ. ಆರಂಭಿಕ ಪತ್ತೆ, ಆರೋಗ್ಯಕರ ಜೀವನ ಅನಾರೋಗ್ಯದಿಂದ ದೂರವಿರಲು ಸಹಾಯ ಮಾಡುತ್ತದೆ.