
ಮಂಗಳೂರು :ಮೊಂಟೆಪದವು ಗುಡ್ಡ ಕುಸಿತ ಘಟನೆಗೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ, ಗುಡ್ಡದ ಮೇಲ್ಭಾಗದಲ್ಲಿ ಅವೈಜ್ಞಾನಿಕ ರಸ್ತೆ ನಿರ್ಮಾಣ ; ಕೊಣಾಜೆ ಠಾಣೆಗೆ ದೂರು..!

ಮಂಗಳೂರು: ಮಂಗಳೂರಿನ ಹೊರವಲಯದ ಮಂಜನಾಡಿ ಗ್ರಾಮದ ಮೊಂಟೆಪದವು ಎಂಬಲ್ಲಿ ಗುಡ್ಡ ಕುಸಿದು ಮೂವರು ಮೃತಪಟ್ಟ ಘಟನೆ ಸಂಬಂಧಿಸಿ ಪಂಚಾಯತ್ ಪಿಡಿಓ ಮತ್ತು ಇತರ ಅಧಿಕಾರಿಗಳ ವಿರುದ್ಧ ಕೊಣಾಜೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಗುಡ್ಡ ಕುಸಿತ ಘಟನೆಗೆ ಗುಡ್ಡದ ಮೇಲೆ ನಡೆಸಿರುವ ಅವೈಜ್ಞಾನಿಕ ರಸ್ತೆ ನಿರ್ಮಾಣ ಕಾಮಗಾರಿ ಕಾರಣ ಎಂದು ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಮಂಜನಾಡಿ ಗ್ರಾಮ ಪಂಚಾಯತ್ ಪಿಡಿಓ ಚೈತ್ರಾ ಮತ್ತು ಕೆಆರ್ ಡಿಐ ಎಲ್ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಇಂಜಿನಿಯರ್ ಗಳು ದುರಂತಕ್ಕೆ ಕಾರಣ. ಇವರ ನಿರ್ಲಕ್ಷದಿಂದ ಮತ್ತು ಅವೈಜ್ಞಾನಿಕ ಕಾಮಗಾರಿ ನಡೆಸಿದ್ದೇ ಘಟನೆಗೆ ಕಾರಣ ಎಂದು ಆರೋಪಿಸಿ ತೇಜು ಕುಮಾರ್ ಎಂಬವರು ಕೊಣಾಜೆ ಠಾಣೆಗೆ ದೂರು ನೀಡಿದ್ದಾರೆ.
ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 105 ಮತ್ತು 106 ಪ್ರಕಾರ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದು ಕೊಣಾಜೆ ಪೊಲೀಸರು ದೂರು ಸ್ವೀಕರಿಸಿದ್ದು ಎಫ್ಐಆರ್ ದಾಖಲಿಸಿಲ್ಲ. ಗುಡ್ಡ ಕುಸಿತ ಘಟನೆಯಲ್ಲಿ ಅಜ್ಜಿ ಮತ್ತು ಅವರ ಇಬ್ಬರು ಮೊಮ್ಮಕ್ಕಳು ಮೃತಪಟ್ಟಿದ್ದು ಮನೆಯಲ್ಲಿದ್ದ ಕಾಂತಪ್ಪ ಪೂಜಾರಿ ಮತ್ತು ಅವರ ಸೊಸೆ ಅಶ್ವಿನಿ ತೀವ್ರ ಗಾಯಗೊಂಡಿದ್ದಾರೆ. ಅಶ್ವಿನಿಯವರ ತಮ್ಮ ತೇಜು ಕುಮಾರ್, ಈ ಘಟನೆಗೆ ಪಂಚಾಯತ್ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವೆಂದು ದೂರು ನೀಡಿದ್ದಾರೆ.