ಬೆಂಗಳೂರು :ರಾಯರ ಮಠದೊಳಗೆ ಚಪ್ಪಲಿ ಎಸೆದು ಮಹಿಳೆ ಪರಾರಿ; ಭಕ್ತರಿಗೆ ಆಘಾತ, ಕ್ರಮಕ್ಕೆ ಆಗ್ರಹ.!!

ಬೆಂಗಳೂರು: ಅಪರಿಚಿತ ಮಹಿಳೆಯೊಬ್ಬರು ರಾಯರ ಮಠದಲ್ಲಿ ಚಪ್ಪಲಿ ಎಸೆದು ಪರಾರಿಯಾದ ಆಘಾತಕಾರಿ ಘಟನೆ ಭಾನುವಾರ ನಡೆದಿದೆ.
ಭಾನುವಾರ ಬೆಳಗಿನ ಜಾವ 5:17ರ ಸುಮಾರಿಗೆ ಬೆಂಗಳೂರಿನ ಇಂದಿರಾನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಈ ಘಟನೆ ನಡೆದಿದೆ.
ಬೆಳಗಿನ ಜಾವ ಮಠಕ್ಕೆ ಬಂದಿದ್ದ ಅಪರಿಚಿತ ಮಹಿಳೆ ಮಠದ ಕಿಟಕಿಯಿಂದ ಚಪ್ಪಲಿ ಎಸೆದು ತಕ್ಷಣ ಅಲ್ಲಿಂದ ಪರಾರಿಯಾಗಿದ್ದಾಳೆ. ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಕೃತ್ಯವನ್ನು ಭಕ್ತರು ಮತ್ತು ಸ್ಥಳೀಯರು ತೀವ್ರವಾಗಿ ಖಂಡಿಸಿದ್ದಾರೆ. ಇದು ರಾಯರ ಮಹಾತ್ಮೆಗೆ ಅವಮಾನ ಮಾಡಲು ಈ ಕೃತ್ಯ ನಡೆಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆಯ ಹಿಂದಿನ ಉದ್ದೇಶ ಏನೆಂಬುದು ತಿಳಿದಿಲ್ಲ. ಮಹಿಳೆ ಚಪ್ಪಲಿ ಎಸೆದಿರುವುದು ಹರಕೆಯೋ, ಸಿಟ್ಟೋ, ಅಥವಾ ಬೇರೆ ಯಾವುದೋ ಉದ್ದೇಶವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಶ್ರೀ ರಾಘವೇಂದ್ರ ಸ್ವಾಮಿಗಳು, 1671ರಲ್ಲಿ ಮಂತ್ರಾಲಯದಲ್ಲಿ ಜೀವಂತವಾಗಿ ಬೃಂದಾವನ ಪ್ರವೇಶ ಮಾಡಿದವರು. ಭಕ್ತರಿಗೆ ಆಧ್ಯಾತ್ಮಿಕ ಮಾರ್ಗದರ್ಶನ ಮತ್ತು ರಕ್ಷಣೆ ನೀಡುವವರೆಂದು ವಿಶ್ವದಾದ್ಯಂತ ಲಕ್ಷಾಂತರ ಭಕ್ತರಿಂದ ಆರಾಧಿಸಲ್ಪಡುತ್ತಾರೆ. ದೇಶಾದ್ಯಂತ ರಾಯರ ದೇವಸ್ಥಾನಗಳಲ್ಲಿ ನಿತ್ಯವೂ ಪೂಜೆ, ದಾಸೋಹ, ಮತ್ತು ಭಜನೆಗಳು ನಡೆಯುತ್ತವೆ. ಇಂದಿರಾನಗರದ ರಾಯರ ಮಠವೂ ಭಕ್ತರಿಗೆ ಪವಿತ್ರ ಕೇಂದ್ರವಾಗಿದೆ.
ಈ ಘಟನೆಯಿಂದ ಭಕ್ತರ ಮನಸ್ಸಿಗೆ ಧಕ್ಕೆಯುಂಟಾಗಿದ್ದು, ರಾಯರ ಮಹಾತ್ಮೆಯ ಬಗ್ಗೆ ಚರಿತ್ರೆಗಳು ಮತ್ತು ಭಕ್ತರ ಅನುಭವಗಳು ಇಂದಿಗೂ ಸ್ಫೂರ್ತಿಯಾಗಿರುವಾಗ ಈ ಕೃತ್ಯ ಸಮಾಜದಲ್ಲಿ ಆತಂಕ ಉಂಟುಮಾಡಿದೆ. ಸ್ಥಳೀಯರು ಈ ಘಟನೆಯನ್ನು ಖಂಡಿಸಿ, ಮಠದ ಪಾವಿತ್ರ್ಯ ಕಾಪಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.