
ಚಿಕ್ಕಮಂಗಳೂರು :ನವಜಾತ ಶಿಶುವನ್ನು ಕಾರ್ಕಳದ ವ್ಯಕ್ತಿಗೆ ಮಾರಾಟ ಮಾಡಿ ಸಿಕ್ಕಿಬಿದ್ದ ಚಿಕ್ಕಮಗಳೂರಿನ ದಂಪತಿ ; ಒಂದು ಲಕ್ಷಕ್ಕೆ ಡೀಲ್ ಕುದುರಿಸಿದ್ದ ನರ್ಸ್ ಕೂಡ ಸೆರೆ.!!

ಚಿಕ್ಕಮಗಳೂರು : ನವಜಾತ ಶಿಶು, ಹೆಣ್ಣು ಮಗುವನ್ನ ದಂಪತಿ, ಕಾರ್ಕಳ ಮೂಲದ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿ ಸಿಕ್ಕಿಬಿದ್ದು ಪೊಲೀಸರಿಗೆ ಅತಿಥಿಯಾದ ಘಟನೆ ಚಿಕ್ಕಮಗಳೂರಿನಲ್ಲಿ ಬೆಳಕಿಗೆ ಬಂದಿದೆ. ಎನ್.ಆರ್.ಪುರ ತಾಲೂಕಿನ ಹರಾವರಿ ಗ್ರಾಮದಲ್ಲಿ ಘಟನೆ ನಡೆದಿದ್ದು ಮಗು ಮಾರಿದ ರತ್ನ ಮತ್ತು ಸದಾನಂದ ದಂಪತಿ ಪೊಲೀಸರಿಗೆ ಅತಿಥಿಯಾಗಿದ್ದಾರೆ.
ಮಗು ಮಾರಾಟಕ್ಕೆ ಸಹಕರಿಸಿದ ನಿವೃತ್ತ ನರ್ಸ್, ಕೊಪ್ಪ ತಾಲೂಕು ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ಕುಸುಮ ಕೂಡ ಬಂಧನ ಆಗಿದ್ದಾರೆ. ಕುಸುಮಾ ಅವರ ಸಹೋದರ ಕಾರ್ಕಳದ ರಾಘವೇಂದ್ರ ಎಂಬುವರಿಗೆ ಮಗುವನ್ನು ಮಾರಾಟ ಮಾಡಲಾಗಿತ್ತು. ಎರಡು ದಿನದ ಹಿಂದೆ ಜನಿಸಿದ್ದ ಮಗುವನ್ನ ದಂಪತಿ 1 ಲಕ್ಷಕ್ಕೆ ಮಾರಾಟ ಮಾಡಿದ್ದರು.
ವಿಷಯ ತಿಳಿದ ಎನ್.ಆರ್. ಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಮಗುವನ್ನು ರಕ್ಷಣೆ ಮಾಡಿದ್ದು ಮಕ್ಕಳ ಕಲ್ಯಾಣ ಸಮಿತಿ ವಶಕ್ಕೆ ನೀಡಿದ್ದಾರೆ. ರತ್ನ- ಸದಾನಂದ ದಂಪತಿಗೆ ಮೂವರು ಮಕ್ಕಳಿದ್ದು ಇಬ್ಬರನ್ನು ಇದೇ ರೀತಿ ಮಾರಾಟ ಮಾಡಿರೋ ಶಂಕೆಯಿದೆ. ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸುತ್ತಿದ್ದಾರೆ.