ಬೆಂಗಳೂರು:ಚಾರ್ಟರ್ಡ್ ಅಕೌಂಟೆಂಟ್ನ ಒಂದೂವರೆ ಕೋಟಿ ರೂ. ಕದ್ದು ಹುಂಡಿಗೆ ಹಾಕಿದ ಕಾರು ಚಾಲಕ! ಹಣ ಹಿಂತಿರುಗಿಸಲು ದೇಗುಲ ನಕಾರ..!!

ಬೆಂಗಳೂರು: ಚಾರ್ಟರ್ಡ್ ಅಕೌಂಟೆಂಟ್ನ ಚಾಲಕ 1.51 ಕೋಟಿ ರೂ. ಕದ್ದು ದೇವಸ್ಥಾನದ ಹುಂಡಿಗೆ ಹಾಕಿದ್ದಾನೆ.
ಕದ್ದ ಹಣವನ್ನು ದೇವರ ಹುಂಡಿಗೆ ಹಾಕಿದ್ದರಿಂದ ಹಿಂತಿರುಗಿಸಲು ಸಾಧ್ಯವಿಲ್ಲ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಈ ಕಳ್ಳತನ ಆಧ್ಯಾತ್ಮಿಕ ಕಾರಣಕ್ಕಾಗಿ ಗಮನ ಸೆಳೆಯುತ್ತಿದೆ. ದೇವರಿಗೆ ನೀಡಿದ ದೇಣಿಗೆಯನ್ನು ಕದ್ದ ಹಣವಾಗಿದ್ದರೂ ಸಹ ಹಿಂತಿರುಗಿಸಲು ಸಾಧ್ಯವಿಲ್ಲದ ಕಾರಣ ಪ್ರಕರಣ ಇನ್ನಷ್ಟು ಇಂಟ್ರೆಸ್ಟಿಂಗ್ ಆಗಿದೆ.
ಮೇ 5 ರಂದು ಬೆಂಗಳೂರಿನಲ್ಲಿ ಈ ಘಟನೆ ನಡೆದಿದ್ದು, ಕೋದಂಡರಾಮಪುರದ ನಿವಾಸಿ 46 ವರ್ಷದ ಚಾರ್ಟರ್ಡ್ ಅಕೌಂಟೆಂಟ್ ಒಬ್ಬರು ತಮ್ಮ ಹತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದ ‘ವಿಶ್ವಾಸಾರ್ಹ’ ಚಾಲಕನಿಗೆ 1.51 ಕೋಟಿ ರೂಪಾಯಿಗಳಿದ್ದ ಚೀಲವನ್ನು ಕಾರಿನಲ್ಲಿ ಇಡುವಂತೆ ಹೇಳಿದ್ದರು. ಬಳಿಕ ಬ್ಯಾಂಕಿಗೆ ಹೋಗಲು ಕೆಳಗೆ ಹೋದಾಗ, ರಾಜೇಶ್ ಹಾಗೂ ಕಾರು ಇರಲಿಲ್ಲ.
ಆದರೆ ನನ್ನ ಕಾರು ಅಲ್ಲಿ ನಿಂತಿರುವುದನ್ನು ಕಂಡೆ. ನಾನು ರಾಜೇಶ್ಗೆ ಕರೆ ಮಾಡಿದಾಗ, ಅವನು ಅಂಗಡಿಯಲ್ಲಿ ಔಷಧ ಖರೀದಿಸುತ್ತಿರುವುದಾಗಿ ಮತ್ತು 10 ನಿಮಿಷಗಳಲ್ಲಿ ಹಿಂತಿರುಗುವುದಾಗಿ ಹೇಳಿದ್ದ ಎಂದು ದೂರುದಾರರು ಪೊಲೀಸರಿಗೆ ತಿಳಿಸಿದ್ದಾರೆ. ‘ಆದರೆ, 10 ನಿಮಿಷವಾದರೂ ಆತ ವಾಪಸ್ ಬಂದಿರಲಿಲ್ಲ. ನಂತರ ಆತನ ಮೊಬೈಲ್ ಕೂಡ ನಾಟ್ ರೀಚೆಬಲ್ ಆಗಿತ್ತು ಎಂದಿದ್ದಾರೆ.
ಚಾರ್ಟರ್ಡ್ ಅಕೌಂಟೆಂಟ್ನಿಂದ ದೂರು ಸ್ವೀಕರಿಸಿದ ನಂತರ, ಪೊಲೀಸರು ರಾಜೇಶ್ನನ್ನು ಪತ್ತೆಹಚ್ಚಿ ನೋಟಿಸ್ ಜಾರಿ ಮಾಡಿದರು. ಮೇ 9 ರಂದು ಆತನನ್ನು ವಿಚಾರಣೆಗೆ ಹಾಜರುಪಡಿಸಲಾಯಿತು. ಆತ ಅಪರಾಧವನ್ನು ಒಪ್ಪಿಕೊಂದ ಬಳಿಕ ಆತನನ್ನು ವಶಕ್ಕೆ ತೆಗೆದುಕೊಳ್ಳಲಾಯಿತು.
ಡ್ರೈವರ್ ಮಾಡಿದ್ದೇನು?
ಪೊಲೀಸ್ ತನಿಖೆಯಲ್ಲಿ ರಾಜೇಶ್ ಈ ಹಣವನ್ನು ಖರ್ಚು ಮಾಡಿದ ರೀತಿ ವಿವರಿಸಿದ್ದಾನೆ. ನನ್ನ ಕುಟುಂಬದ ವಿವಿಧ ಖರೀದಿಗಳಿಗೆ ಸುಮಾರು 1 ಲಕ್ಷ ರೂಪಾಯಿ ಖರ್ಚು ಮಾಡಿದ್ದೇನೆ. ದೇವಸ್ಥಾನದ ಕಾಣಿಕೆ ಹುಂಡಿಗೆ ಒಂದೂವರೆ ಕೋಟಿ ರೂಪಾಯಿಗಳನ್ನು ದಾನ ಮಾಡಿದ್ದೇನೆ ಎಂದಿದ್ದಾನೆ. ದಾನ ಮಾಡಿದ ಹಣವನ್ನು ಮರಳಿ ಪಡೆಯಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ದಕ್ಷಿಣ ಭಾರತದ ದೇವಾಲಯಗಳಲ್ಲಿ ಹುಂಡಿ ಮೂಲಕ ದಾನ ಮಾಡುವ ಹಣವನ್ನು ಸಾಮಾನ್ಯವಾಗಿ ದೇವರಿಗೆ ನೀಡಿದ ಉಡುಗೊರೆ ಎಂದು ಪರಿಗಣಿಸಲಾಗುತ್ತದೆ. ಅದನ್ನು ಸಾಮಾನ್ಯವಾಗಿ ಮರುಪಾವತಿಸಲಾಗುವುದಿಲ್ಲ.
ಕಳೆದ ವರ್ಷ ಅಕ್ಟೋಬರ್ನಲ್ಲಿ, ಒಬ್ಬ ಭಕ್ತ ಚೆನ್ನೈನ ಪ್ರಸಿದ್ಧ ತಿರುಪೋರೂರ್ ಕಂದಸ್ವಾಮಿ ದೇವಾಲಯದ ‘ಹುಂಡಿ’ಯಲ್ಲಿ ಒಂದು ಲಕ್ಷ ರೂಪಾಯಿ ಮೌಲ್ಯದ ತನ್ನ ದುಬಾರಿ ಐಫೋನ್ ಅನ್ನು ಆಕಸ್ಮಿಕವಾಗಿ ಬೀಳಿಸಿದ್ದ. ಆದರೆ, ದೇವಾಲಯದ ಅಧಿಕಾರಿಗಳು ‘ಹುಂಡಿ’ (ದೇಣಿಗೆ ಪೆಟ್ಟಿಗೆ) ಗೆ ಹಾಕುವ ಎಲ್ಲ ವಸ್ತುವೂ ದೇವಾಲಯದ ಆಸ್ತಿ ಎಂದು ಅವನಿಗೆ ಸ್ಪಷ್ಟವಾಗಿ ಹೇಳಿದ್ದರು.