ಮಂಗಳೂರು :ಕರಾವಳಿಯಲ್ಲಿ ಭಾರೀ ಮಳೆ ಮುನ್ಸೂಚನೆ;ಮೇ 21-23ವರೆಗೆ ಆರೆಂಜ್, ರೆಡ್ ಅಲರ್ಟ್ ಘೋಷಣೆ..!!
ಸೋಮವಾರ ಬೆಳಗ್ಗಿನಿಂದಲೇ ಮೋಡ ಮುಸುಕಿದ ವಾತಾವರಣವಿದ್ದು, ಅಲ್ಲಲ್ಲ ಚದುರಿದಂತೆ ಮಳೆ ಸುರಿದಿತ್ತು. ಕ್ಷಣ ಕಾಲ ಮಳೆ ಬಂದು ಬಳಿಕ ಬಿಸಿಲು ಬಂದಿತ್ತು. ಆದರೆ ರಾತ್ರಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಬೆಳಗ್ಗೆಯೂ ಮುಂದುವರಿದಿದೆ.
ಕರಾವಳಿಯಲ್ಲಿ ಭಾರೀ ಮಳೆ ಮುನ್ಸೂಚನೆ: ಮೇ 20 ಮತ್ತು 21 ರಂದು ಕರಾವಳಿ ಕರ್ನಾಟಕ ಮತ್ತು ಪಕ್ಕದ ಘಟ್ಟದ ಜಿಲ್ಲೆಗಳಲ್ಲಿ ಚದುರಿದಂತೆ ವಿಪರೀತ ಮಳೆಯಾಗುವ ಸಾಧ್ಯತೆಯಿದೆ. ಅಲ್ಲದೆ ಭಾರತೀಯ ಹವಾಮಾನ ಇಲಾಖೆ ಮೇ 21ರಿಂದ 23ರವರೆಗೆ ಆರೆಂಜ್ ಮತ್ತು ರೆಡ್ ಅಲರ್ಟ್ ಮಳೆಯಾಗುವ ಸಾಧ್ಯತೆಯಿದೆ ಎಂದು ಘೋಷಿಸಿದೆ. ಆದ್ದರಿಂದ ಮೀನುಗಾರರು ಈ ಸಂದರ್ಭ ಮೀನುಗಾರಿಕೆಗೆ ತೆರಳದಂತೆ, ಸಾರ್ವಜನಿಕರು ನದಿ ತೀರ ಹಾಗೂ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಿದೆ.
ಈಗಾಗಲೇ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ವರುಣ ಆರ್ಭಟಿಸುತ್ತಿದ್ದಾನೆ. ರಾಜಧಾನಿಯಲ್ಲಂತೂ ಮಳೆ ಅವಾಂತರ ಸೃಷ್ಟಿಸಿದ್ದು, ಈವರೆಗೆ ಮೂವರು ಬಲಿಯಾಗಿದ್ದಾರೆ. ಜೊತೆಗೆ ಹಲವು ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಸೋಮವಾರ ಹಾವೇರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಸಿಡಿಲು ಬಡಿದು ಇಬ್ಬರು ಕುರಿಗಾಯಿಗಳು ಸಾವನ್ನಪ್ಪಿರುವ ಘಟನೆ ಕೂಡ ವರದಿಯಾಗಿದೆ.