ಕುಮಟಾ:ಗೋಕರ್ಣ ಸಮುದ್ರದಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿನಿಯರ ಸಾವು ; ತಮಿಳುನಾಡಿನಿಂದ ಪ್ರವಾಸಕ್ಕೆ ಬಂದವರು ಸಮುದ್ರಪಾಲು, ಟೂರ್ ಗೈಡ್ ವಿರುದ್ಧ ಕೇಸು.

ಕುಮಟಾ: ತಮಿಳುನಾಡಿನ ತಿರುಚಿಯ ಎಸ್.ಆರ್.ಎಂ ಮೆಡಿಕಲ್ ಕಾಲೇಜಿನ ಎಂಬಿಬಿಎಸ್ ಅಂತಿಮ ವರ್ಷದ ಇಬ್ಬರು ವಿದ್ಯಾರ್ಥಿನಿಯರು ಗೋಕರ್ಣದ ಜಟಾಯುತೀರ್ಥ ಗುಡ್ಡದ ಬಳಿ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.
ಕನ್ನಿಮೋಳಿ ಈಶ್ವರನ್(23) ಮತ್ತು ಹಿಂದುಜಾ ನಟರಾಜನ್(23) ಪ್ರಾಣ ಕಳೆದುಕೊಂಡ ವಿದ್ಯಾರ್ಥಿನಿಯರು.
ತಿರುಚಿಯ ಎಸ್.ಆರ್.ಎಂ ಮೆಡಿಕಲ್ ಕಾಲೇಜಿನ 23 ವಿದ್ಯಾರ್ಥಿನಿಯರು ಚೆನ್ನೈನ ವೆಟ್ರಿ ಟೂರ್ಸ್ & ಟ್ರಾವೆಲ್ಸ್ ಮೂಲಕ ದಾಂಡೇಲಿ, ಗೋಕರ್ಣ ಮತ್ತು ಮುರ್ಡೇಶ್ವರ ಪ್ರವಾಸಕ್ಕೆ ಬಂದಿದ್ದರು. ಗುರುವಾರ ದಾಂಡೇಲಿಯಿಂದ ತೆರಳಿ ಅಂಕೋಲಾದ ವಿಭೂತಿ ಫಾಲ್ಸ್ ನೋಡಿದ್ದರು. ನಂತರ ಸಂಜೆ ಗೋಕರ್ಣ ತಲುಪಿದ್ದರು. ಅಲ್ಲಿನ ಟೂರ್ ಗೈಡ್ ಗಾಂಧಿ ಸಿವಕುಮಾರ್ ಸೂರ್ಯಾಸ್ತ ನೋಡಲು ಗುರುವಾರ ಕುಡ್ಲೆ ಬೀಚ್ ಬಳಿಯ ಜಟಾಯುತೀರ್ಥ ಸಮುದ್ರ ತೀರಕ್ಕೆ ವಿದ್ಯಾರ್ಥಿನಿಯರನ್ನು ಕರೆದೊಯ್ದಿದ್ದರು. ಸಂಜೆ 6:20ರ ಸುಮಾರಿಗೆ ಇಬ್ಬರು ವಿದ್ಯಾರ್ಥಿನಿಯರು ಭಾರಿ ಅಲೆಗಳಿಗೆ ಸಿಕ್ಕು ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ಸ್ಥಳೀಯರಾದ ಮಣಿರಾಜು ರಕ್ಷಣೆಗೆ ಧಾವಿಸಿದರೂ, ಅವರೂ ಅಪಾಯಕ್ಕೆ ಸಿಲುಕಿದ್ದರು. ನಂತರ ಅಡ್ವೆಂಚರ್ ಬೋಟ್ ಮೂಲಕ ಇಬ್ಬರು ವಿದ್ಯಾರ್ಥಿನಿಯರನ್ನು ಮತ್ತು ಮಣಿರಾಜು ಅವರನ್ನು ದಡಕ್ಕೆ ತರಲಾಯಿತು. ಆದರೂ, ವಿದ್ಯಾರ್ಥಿನಿಯರಾದ ಕನ್ನಿಮೋಳಿ ಮತ್ತು ಹಿಂದುಜಾ ಪ್ರಾಣ ಕಳೆದುಕೊಂಡಿದ್ದಾರೆ. ಮಣಿರಾಜು ಆಪಾಯದಿಂದ ಪಾರಾಗಿದ್ದಾರೆ.
ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋಲ್ಡ್ ಸ್ಟೋರೇಜ್ ಸೌಲಭ್ಯ ಇಲ್ಲದಿರುವುದರಿಂದ, ಮೃತದೇಹಗಳನ್ನು ಕಾರವಾರ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ವಿದ್ಯಾರ್ಥಿನಿಯರ ಸಾವಿಗೆ ಟೂರ್ ಗೈಡ್ ಮತ್ತು ಟೂರ್ ಆಪರೇಟರ್ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.