ಪಹಲ್ಗಾಮ್:​​ ಉಗ್ರ ದಾಳಿಗೆ ಪ್ರವಾಸೋದ್ಯಮ ಛಿದ್ರ;ಶೇಕಡಾ 90 ರಷ್ಟು ಬುಕಿಂಗ್​ಗಳು ರದ್ದು; ಪಹಲ್ಗಾಮ್​ ಉಗ್ರ ದಾಳಿಯಿಂದ   ಕಾಶ್ಮೀರದ ಪ್ರವಾಸೋದ್ಯಮದ ಮೇಲೆ ಭಾರೀ ಪೆಟ್ಟು .

ಪಹಲ್ಗಾಮ್:​​ ಉಗ್ರ ದಾಳಿಗೆ ಪ್ರವಾಸೋದ್ಯಮ ಛಿದ್ರ;ಶೇಕಡಾ 90 ರಷ್ಟು ಬುಕಿಂಗ್​ಗಳು ರದ್ದು; ಪಹಲ್ಗಾಮ್​ ಉಗ್ರ ದಾಳಿಯಿಂದ ಕಾಶ್ಮೀರದ ಪ್ರವಾಸೋದ್ಯಮದ ಮೇಲೆ ಭಾರೀ ಪೆಟ್ಟು .

ಶ್ರೀನಗರ : ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಬಲಿಯಾಗಿದ್ದು ಬರಿಯ 26 ಜೀವಗಳಲ್ಲ, ಕಾಶ್ಮೀರದಲ್ಲಿ ಹಲವು ವರ್ಷಗಳಿಂದ ಆಗುತ್ತಿರುವ ಅಭಿವೃದ್ಧಿಯ ಆತ್ಮ ಮತ್ತು ಬಂಧ ನಾಶ..!

ಇದು ಕಾಶ್ಮೀರದ ವ್ಯಾಪಾರಸ್ಥರು ಮತ್ತು ಪ್ರವಾಸೋದ್ಯಮಿಗಳ ನೋವಿನ ಮಾತು. ಕಾರಣ, ಉಗ್ರ ದಾಳಿಯಿಂದಾಗಿ ಭೀತಿಗೆ ಒಳಗಾಗಿರುವ ದೇಶ-ವಿದೇಶದ ಪ್ರವಾಸಿಗರು ಮುಂದಿನ 10 ದಿನಗಳ ಎಲ್ಲ ಬುಕಿಂಗ್​ ರದ್ದು ಮಾಡಿದ್ದಾರೆ. ಇದು ಶೇಕಡಾವಾರು 90 ರಷ್ಟಿದೆ.

ಹೌದು, ಪ್ರವಾಸಿಗರ ಸ್ವರ್ಗ ಎಂದೇ ಕರೆಸಿಕೊಳ್ಳುವ ಕಣಿವೆಯಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಬಂದಿದೆ. ಇದು ಪ್ರವಾಸೋದ್ಯಮ ಮೇಲೆ ಬಲವಾದ ಪೆಟ್ಟು ಬಿದ್ದಿದೆ. ಮುಂದಿನ 10 ದಿನಗಳಲ್ಲಿ ಆಗಿರುವ ಬುಕಿಂಗ್​ನಲ್ಲಿ ಶೇಕಡಾ 90 ರಷ್ಟು ರದ್ದಾಗಿವೆ ಎಂದು ಪ್ರಮುಖ ಪ್ರವಾಸ ನಿರ್ವಾಹಕರು ಭಾನುವಾರ ತಿಳಿಸಿದ್ದಾರೆ.

ಪ್ರವಾಸೋದ್ಯಮದ ಆತ್ಮದ ಮೇಲೆ ದಾಳಿ: ಪ್ರವಾಸ ಮತ್ತು ಪ್ರಯಾಣ ನಿರ್ವಾಹಕರಾದ ವೀಣಾ ಪಾಟೀಲ್, ಹಾಸ್ಪಿಟಾಲಿಟಿ ಪ್ರೈವೇಟ್ ಲಿಮಿಟೆಡ್‌ನ ಸುಧೀರ್ ಪಾಟೀಲ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಭಯೋತ್ಪಾದಕರು ಕೇವಲ ಪ್ರವಾಸಿಗರನ್ನು ಕೊಂದಿಲ್ಲ. ಕಾಶ್ಮೀರದಲ್ಲಿ ವರ್ಷಗಳಿಂದ ಆಗುತ್ತಿರುವ ಅಭಿವೃದ್ಧಿಯ ಆತ್ಮ ಮತ್ತು ಬಂಧವನ್ನು ನಾಶ ಮಾಡಿದ್ದಾರೆ ಎಂದು ಹೇಳಿದ್ದಾರೆ.

"ದಾಳಿಯು ಪ್ರವಾಸಿಗರ ವಿಶ್ವಾಸವನ್ನು ಅಲುಗಾಡಿಸಿರುವುದರಿಂದ ಬುಕಿಂಗ್​ ರದ್ದತಿಗಳನ್ನು ಎದುರಿಸುತ್ತಿದ್ದೇವೆ. ಮುಂದಿನ ಎರಡು ತಿಂಗಳು ಪ್ರವಾಸಿ ಋತುವಾಗಿದೆ. ಪಂಚತಾರಾ ಹೋಟೆಲ್​​ ಗಳಿಂದ ಹಿಡಿದು ಕಡಿಮೆ ಬಜೆಟ್‌ವರೆಗಿನ ಎಲ್ಲಾ ಹೋಟೆಲ್‌ಗಳು ಬುಕ್ ಆಗಿದ್ದವು. ಆದರೆ ದುರದೃಷ್ಟವಶಾತ್ ಎಲ್ಲವೂ ರದ್ದಾಗಿವೆ ಎಂದು  ತಿಳಿಸಿದ್ದಾರೆ


ಮುಂದಿನ ವರ್ಷ ಬನ್ನಿ: ಪ್ರವಾಸ ಪ್ಯಾಕೇಜ್ ಅನ್ನು ಬುಕ್ ಮಾಡಿದ ಪ್ರವಾಸಿಗರು ತಮ್ಮ ಬುಕಿಂಗ್‌ಗಳನ್ನು ರದ್ದುಗೊಳಿಸದೆ, 2026ರ ಮೇ ತಿಂಗಳಿಗೆ ಮುಂದೂಡಲು ಪ್ರವಾಸ ನಿರ್ವಾಹಕರು ಕೋರಿದ್ದಾರೆ. ಇದೇ ಬುಕಿಂಗ್​ ನಲ್ಲಿ ಪ್ರವಾಸಿಗರು ಮುಂದಿನ ವರ್ಷ ಇದೇ ಸಮಯದಲ್ಲಿ ಕಾಶ್ಮೀರಕ್ಕೆ ಪ್ರಯಾಣಿಸಬಹುದು ಎಂದು ಹೇಳಿದ್ದಾರೆ.

ಭಯೋತ್ಪಾದನಾ ದಾಳಿಯ ಬಗ್ಗೆ ಆಘಾತ ವ್ಯಕ್ತಪಡಿಸಿದ ಅವರು, ಇಂಥದ್ದೊಂದು ಘಟನೆಯನ್ನು ನಿರೀಕ್ಷಿಸಿರಲಿಲ್ಲ. ಇದು ಆಘಾತಕಾರಿ ಮತ್ತು ಬೇಸರ ತಂದಿದೆ. ಈ ದಾಳಿ ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರಲಿದೆ. ಬುಕಿಂಗ್‌ಗಳು ರದ್ದಾಗುತ್ತಿವೆ. ಕೆಲವು ಪ್ರವಾಸಿಗರು ಕಾಶ್ಮೀರದಲ್ಲೇ ಉಳಿದಿದ್ದಾರೆ. ಅವರಿಗೆ ಸ್ಥಳೀಯರು ಬೆಂಬಲ ನೀಡಬೇಕು ಎಂದು ಕೋರಿದರು.

ಭಯೋತ್ಪಾದಕ ದಾಳಿ: ದಕ್ಷಿಣ ಕಾಶ್ಮೀರದ ಪಹಲ್ಗಾಮ್ ನಲ್ಲಿ ಏಪ್ರಿಲ್​ 22 ರಂದು ಭಯೋತ್ಪಾದಕರು ದಾಳಿ ನಡೆಸಿ ಕರ್ನಾಟಕದ ಮೂವರು ಸೇರಿ 26 ಮಂದಿಯನ್ನು ಬಲಿ ತೆಗೆದುಕೊಂಡಿದ್ದರು. ಅದರಲ್ಲಿ ಹೆಚ್ಚಿನವರು ಪ್ರವಾಸಿಗರಾಗಿದ್ದಾರೆ. ಪಾಕಿಸ್ತಾನ ಮೂಲದ ನಿಷೇಧಿತ ಲಷ್ಕರ್-ಎ-ತೊಯ್ಬಾದ ಅಂಗಸಂಸ್ಥೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.

Ads on article

Advertise in articles 1

advertising articles 2

Advertise under the article