ಮಂಗಳೂರು : ಮಂಗಳೂರಿನ ಜೈಲಿನಲ್ಲಿ ಫುಡ್ ಪಾಯ್ಸನ್ ; 45 ಕೈದಿಗಳಿಗೆ ವಾಂತಿಭೇದಿ, ಒಬ್ಬನ ಸ್ಥಿತಿ ಗಂಭೀರ, ಬಿಗಿ ಭದ್ರತೆಯಲ್ಲಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ!

ಮಂಗಳೂರು: ನಗರದ ಕಾರಾಗೃಹದಲ್ಲಿ ಕೈದಿಗಳಿಗೆ ದಿಢೀರ್ ಹೊಟ್ಟೆನೋವು, ವಾಂತಿ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಧ್ಯಾಹ್ನದ ಊಟ ಸೇವಿಸಿದ ಬಳಿಕ ಘಟನೆ ನಡೆದಿದ್ದು, 45 ಮಂದಿಯನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕೈದಿಗಳಿಗೆ ಮಧ್ಯಾಹ್ನ ಅನ್ನ, ಸಾಂಬಾರ್ ಮತ್ತು ಬೆಳಗ್ಗೆ ಅವಲಕ್ಕಿ ನೀಡಲಾಗಿತ್ತು ಎನ್ನಲಾಗುತ್ತಿದೆ. ಮಧ್ಯಾಹ್ನ ಊಟದ ನಂತರ ವಾಂತಿ ಭೇದಿ ಕಾಣಿಸಿಕೊಂಡಿದೆ. ಆನಂತರ, ಅನಾರೋಗ್ಯ ಕಾಣಿಸಿದ ಕೈದಿಗಳನ್ನು ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಸಂಜೆ 3.30ರಿಂದ 4.30ರ ನಡುವೆ ನಾಲ್ಕು ಪೊಲೀಸ್ ಬಸ್ಸಿನಲ್ಲಿ ಕೈದಿಗಳನ್ನು ಆಸ್ಪತ್ರೆಗೆ ಒಯ್ಯಲಾಗಿದ್ದು, ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಪೈಕಿ ಒಬ್ಬನ ಸ್ಥಿತಿ ಗಂಭೀರ ಇರುವ ಮಾಹಿತಿ ಇದೆ.


ಆಸ್ಪತ್ರೆಗೆ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಭೇಟಿ ನೀಡಿದ್ದು, ವೈದ್ಯರೊಂದಿಗೆ ಕೈದಿಗಳ ಆರೋಗ್ಯ ವಿಚಾರಿಸಿದ್ದಾರೆ. ಆಸ್ಪತ್ರೆ ವಾರ್ಡ್ ನಲ್ಲಿ ಕೈದಿಗಳನ್ನು ದಾಖಲಿಸಿ ಪೊಲೀಸರ ಬಿಗಿ ಭದ್ರತೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಮಿಷನರ್ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು, ಅನ್ನ ಸಾಂಬಾರನ್ನು ಎಲ್ಲ ಕೈದಿಗಳಿಗೂ ನೀಡಲಾಗಿತ್ತು. ಅಲ್ಲಿ 350 ಕೈದಿಗಳಿದ್ದಾರೆ. ಎಲ್ಲರಿಗೂ ಆರೋಗ್ಯ ತೊಂದರೆ ಎದುರಾಗಿಲ್ಲ. ಆಹಾರದ ಸ್ಯಾಂಪಲನ್ನು ಪರೀಕ್ಷೆಗೆ ಕಳುಹಿಸಿದ್ದೇವೆ, ಯಾವ ಕಾರಣದಿಂದ ಫುಡ್ ಪಾಯ್ಸನ್ ಆಗಿದೆ ಎನ್ನುವ ಬಗ್ಗೆ ತನಿಖೆ ನಡೆಸಲಾಗುವುದು. 45 ಮಂದಿ ಪೈಕಿ ಒಬ್ಬನ ಸ್ಥಿತಿ ಗಂಭೀರ ಇದ್ದು ಐಸಿಯುನಲ್ಲಿ ಇರಿಸಲಾಗಿದೆ ಎಂದು ತಿಳಿಸಿದ್ದಾರೆ.