
Mangalore: ಕುಕ್ಕರ್ ಬಾಂಬ್ ಸ್ಫೋಟದ ಶಂಕಿತ ಭಯೋತ್ಪಾದಕ ಶಾರಿಕ್ ಆರೋಗ್ಯದಲ್ಲಿ ಚೇತರಿಕೆ-ಎನ್ಐಎ ತಂಡದಿಂದ ತೀವ್ರ ತನಿಖೆ
Tuesday, December 13, 2022
ಮಂಗಳೂರು: ನಗರದ ಗರೋಡಿ ಬಳಿ ನವೆಂಬರ್ 19ರಂದು ಆಟೋರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಂಕಿತ ಭಯೋತ್ಪಾದಕ ಮಹಮ್ಮದ್ ಶಾರೀಕ್ ಬಹುತೇಕ ಚೇತರಿಸಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ NIA ತಂಡ ಆತನನ್ನು ತೀವ್ರ ವಿಚಾರಣೆಗೊಳಪಡಿಸುತ್ತಿದೆ ಎನ್ನಲಾಗಿದೆ.
ಕುಕ್ಕರ್ ಬಾಂಬ್ ಬ್ಲಾಸ್ಟ್ ಆದ ಪರಿಣಾಮ ಶಾರೀಕ್ ದೇಹದಲ್ಲಿ ಶೇ.45ರಷ್ಟು ಸುಟ್ಟ ಗಾಯಗಳಾಗಿತ್ತು. ಅಲ್ಲದೆ ಶ್ವಾಸಕೋಶದೊಳಗೆ ರಾಸಾಯನಿಕಯುಕ್ತ ಬಿಸಿ ಗಾಳಿ ಕೂಡ ಸೇರಿದ್ದ ಪರಿಣಾಮ ಗಂಭೀರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆತನ ಭೇಟಿಯಾಗಲು ಸಾಧ್ಯವಾಗುತ್ತಿರಲಿಲ್ಲ. ಪರಿಣಾಮ ಇಷ್ಟರವರೆಗೆ ಆತನನ್ನು ಭೇಟಿಯಾಗಲು ಎನ್ ಐ ಎ ತನಿಖಾ ತಂಡಕ್ಕೆ ಸಾಧ್ಯವಾಗುತ್ತಿರಲಿಲ್ಲ.
ಇದೀಗ ಶಾರಿಕ್ ಚೇತರಿಸಿಕೊಂಡಿರುವ ಹಿನ್ನೆಲೆಯಲ್ಲಿ ಎನ್ಐಎ ತಂಡ ವಿಚಾರಣೆಯನ್ನು ತೀವ್ರಗೊಳಿಸಿದೆ.ಆದರೆ ಆತ ವಿಚಾರಣೆಗೆ ಸ್ಪಂದಿಸುತ್ತಿಲ್ಲ ಎಂಬ ವಿಚಾರ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಘಟನೆಯಲ್ಲಿ ಗಾಯಗೊಂಡಿರುವ ಆಟೋರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಚೇತರಿಸಿಕೊಳ್ಳುತ್ತಿದ್ದಾರೆ ಶೀಘ್ರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ.